ಕಾಸರಗೋಡು: ನಿರ್ಮಾಣ ಹಂತದಲ್ಲೇ ಕುಸಿದು ಬಿದ್ದ ಮೇಲ್ಸೇತುವೆ
ಓರ್ವ ಕಾರ್ಮಿಕನಿಗೆ ಗಾಯ
Update: 2022-10-29 12:45 IST
ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹಿನ್ನೆಲೆಯಲ್ಲಿ ನಿರ್ಮಿಸಲಾಗುತ್ತಿದ್ದ ಮೇಲ್ಸೇತುವೆಯ ಕಾಂಕ್ರೀಟ್ ಕುಸಿದು ಬಿದ್ದ ಘಟನೆ ಪೆರಿಯದಲ್ಲಿ ಇಂದು ಮುಂಜಾನೆ ನಡೆದಿದೆ.
ಪೆರಿಯ ಪೇಟೆ ಬಳಿ ನಿರ್ಮಿಸಲಾಗುತ್ತಿದ್ದ ಸೇತುವೆಯ ಕಾಂಕ್ರೀಟ್ ಕುಸಿದು ಬಿದ್ದಿದ್ದು, ಓರ್ವ ಕಾರ್ಮಿಕ ಗಾಯಗೊಂಡಿದ್ದಾರೆ. ಘಟನೆ ಸಂದರ್ಭದಲ್ಲಿ ಐದು ಮಂದಿ ಕಾರ್ಮಿಕರಿದ್ದು, ಉಳಿದ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ರಾತ್ರಿ ವೇಳೆಯೂ ಕಾಮಗಾರಿ ನಡೆಯುತ್ತಿತ್ತು.
ಅವೈಜ್ಞಾನಿಕ ಕಾಮಗಾರಿ ಘಟನೆಗೆ ಕಾರಣ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಈ ಬಗ್ಗೆ ಬೇಕಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೇಲ್ಸೇತುವೆ ಕಾಮಗಾರಿ ಕುಸಿದು ಬಿದ್ದ ಬಗ್ಗೆ ತಪಾಸಣೆ ನಡೆಸಲಾಗುವುದು. ವರದಿ ಲಭಿಸಿದ ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಲೋಕೋಪಯೋಗಿ ಸಚಿವೆ ಪಿ.ಎ. ಮುಹಮ್ಮದ್ ರಿಯಾಝ್ ತಿಳಿಸಿದ್ದಾರೆ.
ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಒತ್ತಾಯಿಸಿದ್ದಾರೆ.