ಭಟ್ಕಳ: ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ರಾಷ್ಟ್ರಪತಿಗೆ ಮನವಿ
ಭಟ್ಕಳ: ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಭಟ್ಕಳ ಸಮಿತಿ ವತಿಯಿಂದ ಉಪ ಆಯುಕ್ತರ (Assistant Commissioner) ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾವು ದೇಶದ ಜನತೆ ಎದುರಿಸುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ದೇಶದ ಯುವಜನತೆಯ ನಿರುದ್ಯೋಗದಂತಹ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಮಾನ್ಯ ರಾಷ್ಟ್ರಪತಿ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದೆ.
ಇಂದು ನಮ್ಮ ದೇಶದಲ್ಲಿ ಹಲವಾರು ಸಮಸ್ಯೆಗಳು ತಲೆದೋರಿವೆ, ಅದರಲ್ಲಿ ಬಹುಮುಖ್ಯವಾಗಿ ಬೆಲೆ ಏರಿಕೆ ಮತ್ತು ನಿರುದ್ಯೋಗವಾಗಿದೆ. ಇದರಿಂದ ದೇಶದ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕು ಚಿಂತಾಜನಕವಾಗಿದೆ. ಬಡಜನರು ಬಳಸುವ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಆದಾಯ ಪಾತಾಳಕ್ಕೆ ಕುಸಿದಿದೆ.
ಅಕ್ಸ್ ಫರ್ಡ್ ಬಡತನ ಮತ್ತು ಅಭಿವೃದ್ಧಿ ಉಪಕ್ರಮ (OPHI) ಮತ್ತು ಜಾಗತಿಕ ಬಹು ಆಯಾಮದ ಬಡತನ ಸೂಚoಕ್ಯ (UNDP) 2021ರ ವರದಿಯ ಪ್ರಕಾರ ಸುಮಾರು 22.5% ಭಾರತೀಯರು ಅತ್ಯಂತ ಬಡವರಾಗಿದ್ದಾರೆ. ನಿತ್ಯ ಬದುಕಿನ ಖರ್ಚಿಗೆ 160 ರೂಪಾಯಿಗೂ ಕಷ್ಟ ಪಡುತ್ತಿದ್ದಾರೆ. ಅರ್ಹತೆಗೆ ತಕ್ಕಂತೆ ಉದ್ಯೋಗ ಸಿಗದೇ ಯುವಕರಲ್ಲಿ ಆತ್ಮಹತ್ಯೆಗಳ ಸಂಖ್ಯೆಯೂ ಕಳೆದ ಎರಡು ವರುಷದಲ್ಲಿ 24% ಹೆಚ್ಚಳವಾಗಿದೆ. 2017 ರಲ್ಲಿ 6% ಇದ್ದ ನಿರುದ್ಯೋಗ ದರ ಜನವರಿ ಯಿಂದ ಮಾರ್ಚ್ 2022 ಮಧ್ಯೆ 8.2% ಏರಿದೆ. CMIE ವರದಿಯ ಪ್ರಕಾರ ಡಿಸೆಂಬರ್ 2021 ರಲ್ಲಿ ನಿರುದ್ಯೋಗಿಗಳ ಸಂಖ್ಯೆ 53 ದಶಲಕ್ಷ ವಾಗಿತ್ತು.
ಜನವರಿ-ಏಪ್ರಿಲ್ CMIE ವರದಿಯ ಪ್ರಕಾರ 20-24 ವಯಸ್ಸಿನ ನಿರುದ್ಯೋಗಿಗಳ ಸಂಖ್ಯೆ 2 ಕೋಟಿ 92 ಸಾವಿರ (42%), 25-29 ವಯಸ್ಸಿನ ನಿರುದ್ಯೋಗಿಗಳ ಸಂಖ್ಯೆ 6 ಕೋಟಿ 8 ಸಾವಿರ (12.72%) ಆಗಿತ್ತು. ಹೀಗೆ ಬೆಲೆ ಏರಿಕೆ ಮತ್ತು ನಿರುದ್ಯೋಗದ ಅಂಕಿ-ಅಂಶ ನೋಡುತ್ತಾ ಹೋದರೆ ನಮ್ಮ ದೇಶದಲ್ಲಿ ಆರ್ಥಿಕ ಸಂಕಷ್ಟದ ಅತಿ ದೊಡ್ಡ ಸಂಕೇತ ಕಂಡು ಬರುತ್ತದೆ. ಜನಸಾಮಾನ್ಯರು ಅತ್ಯಂತ ಕಠಿಣ ಜೀವನ ನಡೆಸುತ್ತಿದ್ದರೂ ಸರಕಾರ ಮಾತ್ರ ಈ ಸಮಸ್ಯೆಗಳಿಗೆ ಯಾವುದೇ ಪರಿಹಾರ ನೀಡುತ್ತಿಲ್ಲ, ಬದಲಿಗೆ ಈ ದೇಶದ ಬಂಡವಾಳಶಾಹಿ ಉದ್ಯಮಿಗಳಿಗೆ ದೇಶದ ಸಂಪತ್ತನ್ನು ಲೂಟಿ ಮಾಡಿ ಇನ್ನಷ್ಟೂ ಶ್ರೀಮಂತರು ಆಗುವಲ್ಲಿ ನೆರವು ಆಗುತ್ತಿದೆ. ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸಿದೆ.
ಬೇಡಿಕೆಗಳು :
ದೇಶದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗ ಬಿಕ್ಕಟ್ಟು ನಿಭಾಯಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದ್ದು, ತಕ್ಷಣ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು.
ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ (ಸ್ಟೈಪೆಂಡ್) ನೀಡಬೇಕು.
ಸಂವಿಧಾನದ ಪರಿಚ್ಛೇದ 21 ರ ಅಡಿಯಲ್ಲಿ ಜೀವನೋಪಾಯದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಮಾಡಬೇಕು.
ಅಗತ್ಯ ವಸ್ತುಗಳ ಮೇಲಿನ GST ಯನ್ನು ಹಿಂಪಡೆಯಬೇಕು.
ಬಡವರಿಗೆ ಅವರ ಖರೀದಿ ಸಾಮರ್ಥ್ಯವನ್ನು ಸಕ್ರಿಯಗೊಳಿಸಲು ಹಣ ನೀಡಬೇಕು.
ಎಲ್ಲಾ ಬಿಪಿಎಲ್ ಕಾರ್ಡ್ ಕುಟುಂಬಗಳಿಗೆ ಉಚಿತ ಸಿಲಿಂಡರ್ ಮತ್ತು ಸಬ್ಸಿಡಿ ರಿಫಿಲ್ ಸಿಲಿಂಡರ್ ಗಳನ್ನು ನೀಡಬೇಕು.
ಅಪೌಷ್ಟಿಕತೆ ಮತ್ತು ಹಸಿವು ತಡೆಯಲು ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಅನ್ನ ರೋಜ್ಗಾರ್ ಯೋಜನೆ ಮುಂದುವರಿಸಬೇಕು.
ಮನ್ ರೇಗಾ ಯೋಜನೆಯನ್ನು ನಗರದ ಬಡವರಿಗೂ ವಿಸ್ತರಿಸಬೇಕು ಮತ್ತು ವೇತನವನ್ನು 500 ರೂ ಗೆ ಹೆಚ್ಚಿಸಬೇಕು, ಕೆಲಸದ ದಿನಗಳನ್ನು 200 ದಿನಗಳಿಗೆ ಹೆಚ್ಚಿಸಬೇಕು.
'ಆಹಾರ ಭದ್ರತಾ ಕಾಯ್ದೆ' ಮತ್ತು 'ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆ' ಯನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ಶುಲ್ಕವನ್ನು ಹಿಂಪಡೆದು ಅದನ್ನು GST ವ್ಯಾಪ್ತಿಯಲ್ಲಿ ತರಬೇಕು.
ಕಾಳಸಂತೆ ಮತ್ತು ಭ್ರಷ್ಟಾಚಾರವನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.
ಅಸಂಘಟಿತ ವಲಯಗಳನ್ನು ಸಂಘಟಿಸಬೇಕು ಮತ್ತು ಭದ್ರತೆಯನ್ನು ನೀಡಬೇಕು.
ಮಹಿಳಾ ಕಾರ್ಮಿಕರಿಗೆ ಸಮಾನ ವೇತನ ಮತ್ತು ಭದ್ರತೆ ನೀಡಬೇಕು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಪ್ರೋತ್ಸಾಹಿಸಿ ಸೂಕ್ತ ನೆರವು ನೀಡಬೇಕು.
ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷರಾದ ಜನಾಬ್ ಫಾರೂಕ್ ಶೇಕ್, ಉಪಾಧ್ಯಕ್ಷರಾದ ಅಬ್ದುಲ್ ಜಬ್ಬಾರ್ ಅಸದಿ, ಮುಖಂಡರಾದ ಅಬ್ದುಲ್ ಮಾಜಿದ್ ಕೋಲ, ಖಮರುದ್ದೀನ್ ಮಷಾಯಿಖ್, ಅಜ್ಮಲ್ ಫಕ್ಕೀ ಭಾವ್ ನಯೀಮ್ ಶೇಖ್ ಮುಂತಾದವರು ಉಪಸ್ಥಿತರಿದ್ದರು.