×
Ad

ಪರಿಸರ ಸುಸ್ಥಿರತೆಯ ದೃಷ್ಟಿಯಿಂದ ಯೋಚಿಸಿ: ಡಾ.ವಿವೇಕ್ ಪಂಡಿ

ಪಶ್ಚಿಮ ಘಟ್ಟ ಪರಿಸರ ಕುರಿತು ಉಪನ್ಯಾಸ

Update: 2022-10-29 22:25 IST

ಉಡುಪಿ, ಅ.29: ಇಂದು ನಾವು ಸಮಸ್ಯೆಗಳನ್ನು ಪರಿಸರ ಸುಸ್ಥಿರತೆಯ ದೃಷ್ಟಿಯಿಂದ ಯೋಚಿಸದೆ, ಕೇವಲ ಆರ್ಥಿಕ ಸುಸ್ಥಿರತೆಯ ದೃಷ್ಟಿಯಿಂದ ಮಾತ್ರ ಯೋಚಿಸುತ್ತಿರುವುದು ದುರದೃಷ್ಟಕರ ಎಂದು ಮಾಹೆಯ ಪರಿಸರ ಶಾಸ್ತ್ರಜ್ಞ ಡಾ.ವಿವೇಕ್ ಪಂಡಿ ಅಭಿಪ್ರಾಯಪಟ್ಟಿದ್ದಾರೆ.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ಶನಿವಾರ ನಡೆದ ‘ಪಶ್ಚಿಮ ಘಟ್ಟಗಳ ಪರಿಸರ’ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಡಾ.ಪಂಡಿ, ಹಿಮಾಲಯಕ್ಕಿಂತ ಹಳೆಯದಾದ ಪಶ್ಚಿಮ ಘಟ್ಟಗಳು ಈಗಾಗಲೇ ಜೀವೈವಿದ್ಯವನ್ನು ಕಳೆದುಕೊಂಡು ಅಪಾರ ಹಾನಿಯನ್ನು ಅನುಭವಿಸಿವೆ ಎಂದರು.

ಹೀಗಾಗಿಯೇ ಪಶ್ಚಿಮ ಘಟ್ಟವನ್ನು ಇಂದು ’ಹಾಟ್‌ಸ್ಪಾಟ್’ ಎಂದು ಗುರುತಿಸಲಾಗುತ್ತಿದೆ. ಇಲ್ಲಿ ಜೀವವೈವಿದ್ಯತೆಗಳ ನಡುವೆ ಕ್ಲಿಷ್ಟ ಮತ್ತು ಸೂಕ್ಷ್ಮ ಪರಿಸರ ಜಾಲವಾಗಿದೆ. ಆದ್ದರಿಂದ ಇದನ್ನು ಎಲ್ಲಾ ರೀತಿಯ ‘ಆಕ್ರಮಣ’ಗಳಿಂದ ರಕ್ಷಿಸಬೇಕಾಗಿದೆ. ಅದು ಮಾನವ ಆಕ್ರಮಣವೇ ಆಗಲಿ ಅಥವಾ ಒಂದೇ ವರ್ಗದ ಸಸ್ಯಗಳ ’ಆಕ್ರಮಣ’ವೇ ಆಗಬಹುದು ಎಂದರು.

ಅಭಿವೃದ್ಧಿ ಮತ್ತು ಸಂರಕ್ಷಣೆಯ ಚರ್ಚೆಗಳ ನಡುವೆ, ಸಮತೋಲನವನ್ನು ಕಂಡುಕೊಳ್ಳಬೇಕಾಗಿದೆ ಮತ್ತು ಈ ಹೊತ್ತಲ್ಲಿ ಪರಿಸರ ಸುಸ್ಥಿರತೆಯ ಅವಶ್ಯಕತೆಯಿದೆ ಎಂದ ಅವರು ವಿಭಿನ್ನ ಸಂಶೋಧನೆಗಳು ಮತ್ತು ದತ್ತಾಂಶಗಳನ್ನು ಉಲ್ಲೇಖಿಸಿ ನಿರ್ದಿಷ್ಟವಾಗಿ ಪಶ್ಚಿಮ ಘಟ್ಟಗಳು ಹೇಗೆ ಅಪಾಯದಲ್ಲಿದೆ ಎಂಬುದನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ, ಒಂದು ಹಂತದಲ್ಲಿ ಈ ಭಾಗದಲ್ಲಿ ಜೀವವೈವಿದ್ಯಗಳ ‘ಧಾರಣಾ ಸಾಮರ್ಥ್ಯ’ದ (ಕ್ಯಾರಿಯಿಂಗ್ ಕೆಪಾಸಿಟಿ) ಅಧ್ಯಯನದ ಬಗ್ಗೆ ಚರ್ಚೆ ನಡೆದಿತ್ತು. ದುರದೃಷ್ಟವಶಾತ್ ಡಾ.ಮಾಧವ್ ಗಾಡ್ಗೀಲ್ ವರದಿಯನ್ನೇ ಕೈಬಿಡಲಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಜಿಸಿಪಿಎಎಸ್ ವಿದ್ಯಾರ್ಥಿಗಳ ಸಮಿತಿಗಳಾದ -ಇಕೋಸ್ಪಾಟ್ ಮತ್ತು ಇಕೋಕ್ಲಬ್ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಹರ್ಷಿತಾ ಕೆ ಎನ್ ಸ್ವಾಗತಿಸಿ, ಯಶಸ್ವಿನಿ ಜಿ ವಂದಿಸಿದರು.

Similar News