ಕಾಸರಗೋಡು | ದೇವಸ್ಥಾನದಲ್ಲಿ ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಅರ್ಚಕನ ಬಂಧನ

Update: 2022-11-05 06:36 GMT

ಕಾಸರಗೋಡು, ನ.5:  ದೇವಸ್ಥಾನದಿಂದ ದೇವರ ವಿಗ್ರಹದ ಚಿನ್ನಾಭರಣ ಕಳವುಗೈದು ಪರಾರಿಯಾಗಿದ್ದ ಆರೋಪಿ ಅರ್ಚಕನನ್ನು ಮಂಜೇಶ್ವರ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ತಿರುವನಂತಪುರ ಮೂಲದ ದೀಪಕ್  ನಂಬೂದಿರಿ  ಬಂಧಿತ ಆರೋಪಿ. ಆರೋಪಿಯು ಚಿನ್ನಾಭರಣವನ್ನು ಮಾರಾಟ ಮಾಡಿದ್ದು, ಇದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ಹಿನ್ನೆಲೆ: ಅಕ್ಟೋಬರ್ ೨೭ರಿಂದ ಈತನನ್ನು ಪೂಜೆ ನೆರವೇರಿಸಲು ನೇಮಿಸಲಾಗಿತ್ತು.ಅ. ೨೯ರಂದು ಸಂಜೆ ಪೂಜೆಯ ಬಳಿಕ  ಕಾವಲುಗಾರನಲ್ಲಿ ಹೊಸಂಗಡಿ ಪೇಟೆಗೆಂದು  ತೆರಳಿದ್ದ  ದೀಪಕ್ ನಂಬೂದಿರಿ ಬಳಿಕ ನಾಪತ್ತೆಯಾಗಿದ್ದ. ದೇವಸ್ಥಾನದ ಮೊಕ್ತೇಸರ ಕರೆ ಮಾಡಿದರೂ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು.

ಇದರಿಂದ  ಸಿದ್ದಾಪುರದ ಶ್ರೀಧರ ಭಟ್ ಎಂಬವರನ್ನು ಅರ್ಚಕರನ್ನಾಗಿ ನೇಮಿಸಿದ್ದು,  ನವಂಬರ್  1 ರಂದು ಪೂಜೆ ನಡೆಸಲೆಂದು ಗರ್ಭಗುಡಿಗೆ ತೆರಳಿದಾಗ ದೇವರ ವಿಗ್ರಹದಲ್ಲಿದ್ದ ಚಿನ್ನಾಭರಣದ  ಮೇಲೆ ಸಂಶಯಗೊಂಡು ಮೊಕ್ತೇಸರರಿಗೆ ,ಮಾಹಿತಿ ನೀಡಿದ್ದರು. ಪರಿಶೀಲಿಸಿದಾಗ ದೇವರ ವಿಗ್ರಹದಲ್ಲಿ ನಕಲಿ ಚಿನ್ನಾಭರಣ ಅಳವಡಿಸಿರುವುದು ಪತ್ತೆಯಾಗಿತ್ತು. ವಿಗ್ರಹ ದಲ್ಲಿದ್ದ ಎರಡು ಸರ ಸೇರಿದಂತೆ ಐದೂವರೆ ಪವನ್ ನ ಚಿನ್ನಾಭರಣವನ್ನು ಈತ ಕದ್ದು ಪರಾರಿಯಾಗಿದ್ದನು.  

ಮೊಕ್ತೇಸರ ಎಂ . ದೀಪಕ್ ರಾವ್ ಮಂಜೇಶ್ವರ ಪೊಲೀಸರಿಗೆ ನೀಡಿದ ದೂರಿ ನಂತೆ ಪೊಲೀಸರು ಪ್ರಕರಣ ದಾಖಲಾಗಿತ್ತು.

Similar News