ಪೊಲೀಸ್ ಇನ್‌ಸ್ಪೆಕ್ಟರ್ ಗಂಗಿರೆಡ್ಡಿಯ ಶಿಕ್ಷೆ ರದ್ದು: ಹೈಕೋರ್ಟ್ ಆದೇಶ

Update: 2022-11-15 14:12 GMT

ಮಂಗಳೂರು, ನ.15: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪದ ಮೇಲೆ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಬೆಳ್ತಂಗಡಿಯ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಗಂಗಿರೆಡ್ಡಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ದೂರು ಬಂದ ಹಿನ್ನಲೆಯಲ್ಲಿ 2009ರಲ್ಲಿ ಆ.27ರಂದು ಆಗಿನ ಲೋಕಾಯುಕ್ತ ಡಿವೈಎಸ್ಪಿ ಸದಾನಂದ ವರ್ಣೇಕರ್ ನೇತೃತ್ವದ ತಂಡ ದಾಳಿ ನಡೆಸಿ ಪ್ರಕರಣ ದಾಖಲಿಸಿತ್ತು.

ಲೋಕಾಯುಕ್ತ ಡಿವೈಎಸ್ಪಿ ಎಂ.ವಿಠಲ್‌ ದಾಸ್ ಪೈ ಪ್ರಕರಣದ ತನಿಖೆ ಪೂರ್ಣಗೊಳಿಸಿದ್ದರಲ್ಲದೆ ಇನ್‌ಸ್ಪೆಕ್ಟರ್ ಗಂಗಿರೆಡ್ಡಿಯ ವಿರುದ್ದ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

4 ವರ್ಷ ಸಾದಾ ಶಿಕ್ಷೆ: ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯವು 2020ರಲ್ಲಿ ಗಂಗಿರೆಡ್ಡಿಯ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿ 4 ವರ್ಷ ಸಾದಾ ಸಜೆ ಮತ್ತು 5 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿತ್ತು.

ಇದೀಗ ಕರಾವಳಿ ಕಾವಲು ಪಡೆಯ (ಸಿಎಸ್‌ಪಿ) ಇನ್‌ಸ್ಪೆಕ್ಟರ್ ಆಗಿರುವ ಗಂಗಿರೆಡ್ಡಿ ಇದರ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಕೃಷಿ ಆದಾಯ, ಊರಿನಲ್ಲಿರುವ ಕಟ್ಟಡಗಳ ಬಾಡಿಗೆ, ಕುಟುಂಬದ ಆದಾಯದಲ್ಲಿ ದೊರೆತ ಚಿನ್ನ ಮಾರಾಟದ ಹಣದ ಲೆಕ್ಕಾಚಾರವನ್ನು ತನಿಖೆ ವೇಳೆ ಪರಿಗಣಿಸಿರಲಿಲ್ಲ ಎಂಬ ಅಂಶವನ್ನು ಮುಂದಿಟ್ಟುಕೊಂಡು ಹೈಕೋರ್ಟ್ ಶಿಕ್ಷೆಯನ್ನು ರದ್ದುಗೊಳಿಸಿದೆ.

ಗಂಗಿರೆಡ್ಡಿಯ ಪರವಾಗಿ ನ್ಯಾಯವಾದಿಗಳಾದ ಪರಮೇಶ್ವರ ಎನ್. ಹೆಗ್ಡೆ, ಜಿನೇಂದ್ರ ವಾದ ಮಂಡಿಸಿದ್ದರು. 

Similar News