ಯುವಕ ಸಂಶಯಾಸ್ಪದವಾಗಿ ಮೃತ್ಯು: ಪ್ರಕರಣ ದಾಖಲು

Update: 2022-11-15 15:12 GMT

ಬೈಂದೂರು: ಯುವಕನೋರ್ವ ಸಂಶಯಾಸ್ಪದವಾಗಿ ಮೃತಪಟ್ಟ ಘಟನೆ ಶಿರೂರು ಗ್ರಾಮದ ಪುಟ್ಟಿಹಿತ್ಲು ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.

ಮೃತರನ್ನು ಪುಟ್ಟಿಹಿತ್ಲು ನಿವಾಸಿ ಗುರುರಾಜ (30) ಎಂದು ಗುರುತಿಸಲಾಗಿದೆ.

ಮಲ್ಪೆಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಇವರು, ನ.13ರಂದು ಸಂದೇಶ ಎಂಬಾತನ ಜೊತೆ ಪದ್ದಕ್ಕ ಎಂಬವರ ಮನೆಯಲ್ಲಿ ಜಗಳ ಮಾಡುತ್ತಿರುವುದಾಗಿ ಸಂಬಂಧಿ ಚಂದು ಫೋನ್ ಮಾಡಿ ಗುರುರಾಜ ಅವರ ಅಕ್ಕ ಸುಲೋಚನಾ ಅವರಿಗೆ ತಿಳಿಸಿದ್ದರು.

ನ.14ರಂದು ಮಧ್ಯರಾತ್ರಿ ಸುಲೋಚನಾ ಮನೆಯ ಬಾಗಿಲು ತೆರೆದಾಗ ಗುರುರಾಜ್ ಮನೆಯ ಬಾವಿಯ ಬಳಿ ಬಿದ್ದುಕೊಂಡಿರುವುದು ಕಂಡುಬಂದರು. ತೀವ್ರವಾಗಿ ಅಸ್ವಸ್ಥಗೊಂಡ ಗುರುರಾಜ್ ಅವರನ್ನು ಮರುದಿನ ಬೆಳಗ್ಗೆ ಚಿಕಿತ್ಸೆಗಾಗಿ ಶಿರೂರಿನ ಖಾಸಗಿ ವೈದ್ಯರ ಬಳಿ ಕರೆತಂದು ಪರಿಶೀಲಿಸಿದಾಗ ಗುರುರಾಜ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.

ಈ ಸಾವಿನ ಬಗ್ಗೆ ಸಂಶಯ ಇರುವುದಾಗಿ ಅಕ್ಕ ಸುಲೋಚನಾ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News