ಮಹಾರಾಷ್ಟ್ರದಲ್ಲಿ ರಸ್ತೆ ಅಪಘಾತ: ಸುರತ್ಕಲ್‌ನ ಯುವಕ ಮೃತ್ಯು

Update: 2022-11-15 15:27 GMT

ಸುರತ್ಕಲ್: ಮಹಾರಾಷ್ಟ್ರ ಗಡಿ ಭಾಗದ ಖಂಡಾಲಾ ಘಾಟ್‌ ನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಮೀನಿನ ಲಾರಿಯೊಂದು ಫ್ಲೈ ಓವರ್ ನಿಂದ ಬಿದ್ದ ಪರಿಣಾಮ ಸುರತ್ಕಲ್ ಮೂಲದ ಯುವಕನೋರ್ವ ಮೃತಪಟ್ಟಿದ್ದಾರೆ.

ಮೃತ ಯುವಕನನ್ನು ಸುರತ್ಕಲ್ ಸಮೀಪದ ಕೃಷ್ಣಾಪುರ ಏಳನೇ ಬ್ಲಾಕ್ ನಿವಾಸಿ ಮೊಹಮ್ಮದ್ ಅಜ್ಮಲ್ ರೋಶನ್ (23) ಎಂದು ಗುರುತಿಸಲಾಗಿದೆ.

ಮಲ್ಪೆ ಕಡೆಯಿಂದ ಮೀನು ಹೇರಿಕೊಂಡು ಸೋಮವಾರ ರಾತ್ರಿ 10 ಗಂಟೆಗೆ  ಮುಂಬೈ ಕಡೆಗೆ ಹೊರಟಿದ್ದ ಮಿನಿ ಲಾರಿ ಮಹಾರಾಷ್ಟ್ರ ಗಡಿ ಭಾಗದ ಖಂಡಾಲಾ ಘಾಟ್  ಫ್ಲೈ ಓವರ್ ನಲ್ಲಿ ಮಂಗಳವಾರ ಮಧ್ಯಾಹ್ನ ಚಾಲಕನ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ.

ಅಪಘಾತದಿಂದ ಚಾಲಕ ಮೊಹಮ್ಮದ್ ಅಜ್ಮಲ್ ರೋಶನ್ ಗಂಭೀರ ಗಾಯಗಳೊಂದಿಗೆ ಮೃತಪಟ್ಟರೆ, ಲಾರಿಯಲ್ಲಿದ್ದ ಇನ್ನೋರ್ವ ಗಾಯಗೊಂಡಿದ್ದಾರೆ.

ಮಹಾರಾಷ್ಟ್ರದ ಲೋನಾವಾಲಾ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Similar News