ಪರೇಶ್ ಮೇಸ್ತಾ ಸಹಜ ಸಾವನ್ನು ಕೊಲೆ ಎಂದು ಬಿಂಬಿಸಿದ್ದ ಸಂಸದ, ಶಾಸಕರು ರಾಜೀನಾಮೆ ನೀಡಲಿ: ಐವನ್ ಡಿಸೋಜಾ

Update: 2022-11-22 17:09 GMT

ಭಟ್ಕಳ : ಹೊನ್ನಾವರದ ಪರೇಶ ಮೇಸ್ತಾ ಅವರ ಸಹಜ ಸಾವಿನ ಪ್ರಕರಣವನ್ನು ಕೊಲೆ ಎಂದು ಬಿಂಬಿಸಿ ರಾಜಕೀಯ ಲಾಭ ಪಡೆದು ಚುನಾವಣೆಯಲ್ಲಿ ಆರಿಸಿ ಬಂದಿದ್ದ ಬಿ.ಜೆ.ಪಿ. ಶಾಸಕರು, ಸಂಸದರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಕೆ.ಪಿ.ಸಿ.ಸಿ. ಉಪಾಧ್ಯಕ್ಷ ಐವನ್ ಡಿಸೋಜ ಅವರು ಆಗ್ರಹಿಸಿದರು. 

ಭಟ್ಕಳದ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಣೆಯಾಗಿದ್ದ ಪರೇಶ ಮೇಸ್ತ ಎರಡು ದಿನಗಳ ನಂತರ ಶವವಾಗಿ ಪತ್ತೆಯಾಗಿದ್ದನ್ನೇ ಚುನಾವಣಾ ಬಂಡವಾಳವನ್ನಾಗಿಸಿಕೊಂಡ ಬಿ.ಜೆ.ಪಿ. ಐವರು ಮುಸ್ಲೀಮರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸುತ್ತದೆ. ಅಂದಿನ ಮುಖ್ಯ ಮಂತ್ರಿ ಸಿ.ಓ.ಡಿ.ಗೆ ಪ್ರಕರಣ ಹಸ್ತಾಂತರ ಮಾಡಿದ್ದನ್ನು ವಿರೋಧಿಸಿ ನಮಗೆ ರಾಜ್ಯ ಪೊಲೀಸರ ಮೇಲೆ ನಂಬಿಕೆ ಇಲ್ಲ, ನಾವೇನಿದ್ದರೂ ಸಿ.ಬಿ.ಐ. ಮೇಲೆ ನಂಬಿಕೆ ಇದ್ದವರು ಸಿ.ಬಿ.ಐ. ತನಿಖೆಯೇ ಆಗಬೇಕು ಎಂದು ಆಗ್ರಹಿಸಿ ಸಿ.ಬಿ.ಐ. ತನಿಖೆಗೆ ಒಪ್ಪಿಸಲಾಗಿತ್ತು. ಆದರೆ ಇಂದು ಸಿ.ಬಿ.ಐ. ಇವರ ಪರವಾಗಿ ವರದಿಕೊಡಲಿಲ್ಲ ಎನ್ನುವ ಕಾರಣಕ್ಕೆ ಸಿ.ಬಿ.ಐ. ತನಿಖೆಯ ಮೇಲೆಯೇ ನಂಬಿಕೆ ಇಲ್ಲ ಎನ್ನುವ ಬಿ.ಜೆ.ಪಿ. ಬಣ್ಣ ಬಟಬಯಲಾಗಿದೆ ಎಂದರು.

ಅಂದು ಸಹಜ ಸಾವನ್ನು ಕೊಲೆ ಎಂದು ಬಿಂಬಿಸಿ ಜಿಲ್ಲೆಯಲ್ಲಿ ಕೋಮುಗಲಭೆ ಸೃಷ್ಟಿಸಿ 2082 ಜನರ ಮೇಲೆ 67 ಪ್ರಕರಣಗಳು ದಾಖಲಾದುವು. 361 ಜನರನ್ನು ಬಂಧಿಸಲಾಗಿತ್ತು,  272 ಜನರ ಮೇಲೆ ರೌಡಿ ಶೀಟ್ ತೆರೆಲಾಗಿದೆ. ಪೊಲೀಸ್ ಇಲಾಖೆ 1699 ಜನರ ಮೇಲೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದೆ ಇದೆಲ್ಲವೂ ಇವರು ಚುನಾವಣೆಯಲ್ಲಿ ಗೆಲ್ಲಲಿಕ್ಕಾಗಿ ಮಾಡಿದ ದುಷ್ಕೃತ್ಯವಾಗಿದ್ದು ಈಗ ಎಲ್ಲರೂ ಬಾಯಿ ಮುಚ್ಚಿ ಕುಳಿತಿದ್ದಾರೆ ಎಂದು ಹೇಳಿದರು.

ನ.24ರಂದು ಬೃಹತ್ ಸಮಾವೇಶ: ನ.24ರಂದು ಕುಮಟಾದ ಮಣಕಿ ಮೈದಾನದಲ್ಲಿ ಬಿ.ಜೆ.ಪಿ. ದ್ವಂದ್ವ ನೀತಿಯನ್ನು ಜನತೆಗೆ ತಿಳಿಸಲು ಹಾಗೂ ರಾಜ್ಯ-ಕೇಂದ್ರ ಸರಕಾರಗಳ ವೈಫಲ್ಯವನ್ನು ಜನರ ಮುಂದಿಡಲು ಬೃಹತ್ ಸಮಾವೇಶ ಹಮ್ಮಿಕೊಳ್ಳಳಾಗಿದ್ದು ರಾಜ್ಯ ಅಧ್ಯಕ್ಷ ಡಿ.ಕೆ. ಶಿವಕುಮಾರ್,  ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿಗಳು, ಶಾಸಕರು, ಸಂಸದರು ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಎಂ. ನಾಯ್ಕ, ಮಾಜಿ ಶಾಸಕ ಜೆ.ಡಿ. ನಾಯ್ಕ, ಭಟ್ಕಳ ಪುರಸಭೆ ಅಧ್ಯಕ್ಷ ಪರ್ವೇಜ್ ಕಾಶಿಮಜಿ, ಟಿ.ಡಿ.ನಾಯ್ಕ, ಸತೀಶ ನಾಯ್ಕ, ಸಂತೋಷ ನಾಯ್ಕ, ಖೈಸರ್ ಮೊಹತೆಶಂ, ಸುಲೇಮಾನ್ ಸಾಬ್, ಮಹಾಬಲೇಶ್ವರ ನಾಯ್ಕ, ನಾರಾಯಣ ನಾಯ್ಕ, ಮಂಜು ನಾಯ್ಕ, ಗಣಪತಿ ನಾಯ್ಕ ಜಾಲಿ, ಮಹೇಶ ನಾಯ್ಕ, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Similar News