ಬಜೆಯಲ್ಲಿ ನೀರಿನ ಸಂಗ್ರಹ ಹೆಚ್ಚಳ: 37 ಎಂಎಲ್‌ಡಿ ಪಂಪಿಂಗ್

ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಯಶವಂತ ಪ್ರಭು

Update: 2022-11-28 13:40 GMT

ಉಡುಪಿ, ನ.28: ಉಡುಪಿ ನಗರಸಭೆ ನೀರು ಪೂರೈಸುವ ಬಜೆ ಅಣೆಕಟ್ಟಿನಲ್ಲಿ ಇವತ್ತು 6.1 ಮೀಟರ್ ನೀರಿನ ಸಂಗ್ರಹ ಇದೆ. ಕಳೆದ ವರ್ಷ ಇದೇ ಸಮಯಕ್ಕೆ 5.1ಮೀಟರ್ ನೀರಿನ ಸಂಗ್ರಹ ಇತ್ತು. ಈ ಬಾರಿ ಬೇಗನೆ ಹೊಸ ಗೇಟು ಅಳವಡಿಸಿರುವುದರಿಂದ ನೀರಿನ ಶೇಖರಣೆ ಹೆಚ್ಚಾಗಿದೆ. ಒಳ ಹರಿವು ಇನ್ನು ಕೂಡ ಇದೆ ಎಂದು ಉಡುಪಿ ನಗರಸಭೆ ಸಹಾಯಕ ಕಾರ್ಯಪಾಲ ಅಭಿಯಂತರ ಯಶವಂತ ಪ್ರಭು ತಿಳಿಸಿದ್ದಾರೆ.

ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡುತಿದ್ದರು. ಈ ಮೊದಲು ಬಜೆಯಿಂದ 24 ಎಂಎಲ್‌ಡಿ ನೀರನ್ನು ಪಂಪ್ ಮಾಡ ಲಾಗುತ್ತ್ತಿತ್ತು. ಈಗ 37 ಎಂಎಲ್‌ಡಿ ನೀರನ್ನು ಪಂಪ್ ಮಾಡಲಾಗುತ್ತಿದೆ. ದಿನದ 24ಗಂಟೆ ನೀರು ಪೂರೈಕೆಗೆ ಕೆಲವೊಂದು ವಾರ್ಡ್‌ಗಳಲ್ಲಿ ಸಮಸ್ಯೆಗಳಿವೆ. ಗುಂಡಿಬೈಲು, ಚಿಟ್ಪಾಡಿ, ಬೈಲೂರು ವಾರ್ಡ್‌ಗಳಿಗೆ ನಿರಂತರ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು. ನೀರಿನ ಒತ್ತಡ ಜಾಸ್ತಿಯಾಗಿರುವುದರಿಂದ ಸೋರಿಕೆಗಳು ಹೆಚ್ಚಾಗಿವೆ ಎಂದು ಸದಸ್ಯರು ದೂರಿದರು.

ಕುಡ್ಸೆಂಪ್ ಅಧಿಕಾರಿಗೆ ತರಾಟೆ

ವಾರಾಹಿ ನದಿಯಿಂದ ಉಡುಪಿ ನಗರಕ್ಕೆ ನೀರು ಪೂರೈಕೆ ಮಾಡುವ ಯೋಜನೆ ಸಂಬಂಧಿಸಿದ ಕಾಮಗಾರಿ ಗಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಉಡುಪಿ ಶಾಸಕ ಕೆ.ರಘುಪತಿ ಭಟ್, ಅಧ್ಯಕ್ಷರು ಹಾಗೂ ಸದಸ್ಯರು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕುಡ್ಸೆಂಪ್ ಎಇಇ ರಾಜಶೇಖರ್, ಈ ಸಂಬಂಧ 58 ದೂರುಗಳು ಬಂದಿದ್ದು, ಅದರಲ್ಲಿ 38 ದೂರುಗಳು ಹಳೆಯ ಮೀಟರಿಗೆ ಸಂಬಂಧಿಸಿದ್ದಾಗಿದೆ. ದೂರಿಗೆ ಸಂಬಂಧಿಸಿ ಡಿ.10ರೊಳಗೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.

ವಾರಾಹಿ ಯೋಜನೆಗೆ ಸಂಬಂಧಿಸಿ ಅಂಬಾಗಿಲು, ಅನಂತನಗರ, ಇಂದಿರಾ ನಗರ, ಕಲ್ಸಂಕ, ಸರಳೇಬೆಟ್ಟು, ಕಲ್ಮಾಡಿಗಳಲ್ಲಿನ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸದಸ್ಯರು ಸಭೆಯಲ್ಲಿ ದೂರಿದರು. ಈ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕುಂಡ್ಸೆಪ್ ಉನ್ನತ ಅಧಿಕಾರಿಗಳೊಂದಿಗೆ ವಿಶೇಷ ಸಭೆ ಕರೆಯಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಹೆಚ್ಚುವರಿ ದರ ವಸೂಲಿ

ಆರ್‌ಟಿಎ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರವನ್ನು ಖಾಸಗಿ ಬಸ್‌ಗಳಲ್ಲಿ ವಸೂಲಿ ಮಾಡಲಾಗುತ್ತಿದೆ ಎಂಬ ವಿಪಕ್ಷ ನಾಯಕ ರಮೇಶ್ ಕಾಂಚನ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ಈ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸುತ್ತೇನೆ ಎಂದು ತಿಳಿಸಿದರು.

ರಮೇಶ್ ಕಾಂಚನ್ ಮಾತನಾಡಿ, ಕಲ್ಸಂಕ ಸರ್ಕಲ್‌ನಲ್ಲಿ ಲೆಫ್ಟ್ ಪ್ರೀ ಮಾಡುವ ನೆಪದಲ್ಲಿ ಬಸ್ ನಿಲ್ದಾಣವನ್ನು ತೆರವುಗೊಳಿಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ತುಂಬಾ ಅನಾನುಕೂಲವಾಗುತ್ತಿದೆ ಎಂದು ದೂರಿ ದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಬಸ್ ನಿಲ್ದಾಣವನ್ನು ಅಲ್ಲೇ ಮುಂದಕ್ಕೆ ಶಿಫ್ಟ್ ಮಾಡಿ ಆದಷ್ಟು ಬೇಗ ನಿರ್ಮಿಸಲಾಗುತ್ತದೆ ಎಂದರು.

ನಗರದಲ್ಲಿ ಪಾದಾಚಾರಿಗಳಿಗೆ ಸಮಸ್ಯೆಯಾಗುತ್ತಿರುವ ಅನಧಿಕೃತ ಗೂಡಂಗಡಿ ಹಾಗೂ ಬೀದಿ ವ್ಯಾಪರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದ ಶಾಸಕರು, ಕಲ್ಸಂಕ- ಗುಂಡಿಬೈಲು ರಸ್ತೆಯ ದುರಸ್ತಿಗೆ 3ಕೋಟಿ ರೂ. ಮೊತ್ತದ ಟೆಂಡರ್ ಆಗಿದೆ. ಮಳೆ ಬರುತ್ತಿರುವುದರಿಂದ ಕಾಮಗಾರಿಗೆ ಸಮಸ್ಯೆಯಾಗಿದೆ ಎಂದರು.

ರೈಲ್ವೆ ನಿಲ್ದಾಣ ರಸ್ತೆ ದುರಸ್ತಿ ಹಾಗೂ ಪರ್ಕಳ ರಾಷ್ಟ್ರೀಯ ಹೆದ್ದಾರಿಯಿಂದ ವಾಹನ ಸಂಚಾರಕ್ಕೆ ಬಹಳ ತೊಂದರೆ ಆಗುತ್ತಿರುವ ಬಗ್ಗೆ ಅಧ್ಯಕ್ಷರು ಶಾಸಕರ ಗಮನ ಸೆಳೆದರು. ಮಳೆ ಕಡಿಮೆ ಆದ ಕೂಡಲೇ ಪರ್ಕಳ ಹೆದ್ದಾರಿಗೆ ಡಾಮರು ಹಾಕಿ ಸರಿಪಡಿಸಲಾಗುವುದು. ರೈಲ್ವೆ ನಿಲ್ದಾಣದ ರಸ್ತೆಗೆ ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಆಗಿದೆ ಎಂದು ಶಾಸಕರು ತಿಳಿಸಿದರು.

ದುಪ್ಪಟ್ಟು ಟೋಲ್ ಸಂಗ್ರಹಕ್ಕೆ ವಿರೋಧ

ಸುರತ್ಕಲ್ ಟೋಲಿನ ಹಣ ಹೆಜಮಾಡಿ ಟೋಲ್‌ನಲ್ಲಿ ಸಂಗ್ರಹಿಸುವ ಸರಕಾರದ ನಿರ್ಧಾರದ ಬಗ್ಗೆ ಜಿಲ್ಲೆಯ ಐದು ಮಂದಿ ಶಾಸಕರು ಒಂದಾಗಿ ಹೋರಾಟ ಮಾಡಬೇಕು ಎಂದು ರಮೇಶ್ ಕಾಂಚನ್ ಒತ್ತಾಯಿಸಿದರು.

ಈ ಬಗ್ಗೆ ಉತ್ತರಿಸಿದ ಶಾಸಕ ರಘುಪತಿ ಭಟ್, ಸಂಸದರು ದೆಹಲಿ ಹೋಗುವ ಕಾರ್ಯಕ್ರಮ ಇದ್ದು, ಇದೇ ವೇಳೆ ಸಚಿವ ಗಡ್ಕರಿ ಅವರನ್ನು ಭೇಟಿಯಾಗಿ ಈ ವಿಚಾರಕ್ಕೆ ಗಮನಕ್ಕೆ ತರಲಿದ್ದಾರೆ. ಇದು ಅಧಿಕಾರಿಗಳಿಂದ ತಪ್ಪಿನಿಂದ ಆಗಿರ ಬಹುದು ಎಂದರು. ಹೆಜಮಾಡಿ ಟೋಲ್‌ನಲ್ಲಿ ದುಪ್ಪಟ್ಟು ಹಣ ಸಂಗ್ರಹಿಸ ಬೇಕೆಂಬ ಸುತ್ತೋಲೆ  ಜಿಲ್ಲಾಧಿಕಾರಿಗೆ ಇನ್ನು ಬಂದಿಲ್ಲ. ಬಂದರೆ ಜಿಲ್ಲೆಯ ಶಾಸಕರು ಹಾಗೂ ಟೋಲ್ ಸಂಗ್ರಹಕಾರರ ಸಭೆ ಕರೆಯುವಂತೆ ತಿಳಿಸಿದ್ದೇನೆ ಎಂದು ಅವರು ತಿಳಿಸಿದರು.

ಮೀಟರ್ ಬದಲಾಯಿಸಲು ಸೂಚನೆ

ವಾರಾಹಿ ಕುಡಿಯುವ ನೀರಿನ ಯೋಜನೆಯಡಿ ಹೊಸದಾಗಿ ಅಳವಡಿಸ ಲಾದ ದೋಷಪೂರಿತ ಮೀಟರ್‌ಗಳನ್ನು ಕೂಡಲೇ ಬದಲಾಯಿಸಬೇಕು. ಈ ಮೀಟರ್‌ನಿಂದ ಜಾಸ್ತಿ ಬಿಲ್ ಬಂದರೆ ಯಾರು ಪಾವತಿಸುತ್ತಾರೆ ಎಂದು ಶಾಸಕ ರಘುಪತಿ ಭಟ್ ಪ್ರಶ್ನಿಸಿದರು.

ಮೀಟರ್ ಗೊಂದಲ ನಿವಾರಣೆ ಮಾಡಬೇಕು. ಮೀಟರ್ ಅಳವಡಿಸಿರುವ ಗುತ್ತಿಗೆದಾರರಿಗೆ ನಗರಸಭೆಯಿಂದ ನೋಟೀಸ್ ಜಾರಿ ಮಾಡಬೇಕು. ಅಲ್ಲಿಯ ವರೆಗೆ ಯಾವುದೇ ಬಿಲ್ ನೀಡಬಾರದು ಎಂದು ಅವರು ತಾಕೀತು ಮಾಡಿದರು.

Similar News