ಮುರುಡೇಶ್ವರ: ಉಚಿತ ಆರೋಗ್ಯ ತಪಾಸಣೆ ಶಿಬಿರ

Update: 2022-12-04 15:07 GMT

ಭಟ್ಕಳ: ಮಂಗಳೂರಿನ ಶ್ರೀನಿವಾಸ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಮುರುಡೇಶ್ವರ, ಕ್ರೀಯಾಶೀಲ ಗೆಳೆಯರ ಸಂಘ, ಭಟ್ಕಳ ಹಾಗೂ ಲಯನ್ಸ್‌ ಕ್ಲಬ್ ಮುರುಡೇಶ್ವರ ಇವರ ಸಹಯೋಗದೊಂದಿಗೆ ಮುರುಡೇಶ್ವರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರವಿವಾರ ಉಚಿತ ಆರೋಗ್ಯ ಶಿಬಿರ ನಡೆಯಿತು.

ಕಾರ್ಯಕ್ರಮವನ್ನು ಕ್ರೀಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ದೀಪಕ ನಾಯ್ಕ ಉದ್ಘಾಟಿಸಿದರು. ನಂತರ ಅವರು ಮಾತನಾಡಿ ಈಗಿನ ಕಾಲಘಟ್ಟದಲ್ಲಿ ಮನುಷ್ಯ ತಮ್ಮ ಒತ್ತಡ ಜೀವನ ಶೈಲಿಯಿಂದ ಅಧಿಕ ರಕ್ತದೊತ್ತಡ, ಮಧುಮೇಹ ಮಾನಸಿಕ ಒತ್ತಡ ಸೇರಿದಂತೆ ಹಲವಾರು ಕಾಯಿಲೆಗಳನ್ನು ಹೊಂದಿರುತ್ತಾರೆ. ಕಾಲ ಕಾಲಕ್ಕೆ ತಪಾಸಣೆ ಹಾಗೂ ವೈದ್ಯರ ಚಿಕಿತ್ಸೆಯಿಂದ ರೋಗಗಳನ್ನು ಪ್ರಾಥಮಿಕ ಹಂತದಲ್ಲಿಯೆ ಪತ್ತೆ ಹಚ್ಚಿ ಗುಣಪಡಿಸಬಹುದು ಎಂದ ಅವರು ಮುರುಡೇಶ್ವರದ ಗ್ರಾಮಾಂತರ ಭಾಗದ ಜನರು ಇದರ ಸದುಪಯೋಗ ಪಡೆಯಲೆಂದು ಈ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ ಇದರ ಸದುಪಯೋಗವನ್ನು ಎಲ್ಲರೂ ಪಡೆಯಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ  ಮುರುಡೇಶ್ವರದ ಲಯನ್ಸ ಕ್ಲಬ್ ಅಧ್ಯಕ್ಷ ಎಂ.ವಿ. ಹೆಗಡೆ ಮಾತನಾಡಿ ಲಯನ್ಸ್‌ ಕ್ಲಬ್ ರ್ಸಾಜನಿಕರ ಸೇವೆಗಾಗಿಯೇ ಹಲವಾರು ಕಾರ್ಯಕ್ರಮಗಳಣ್ನು ಏರ್ಪಡಿಸುತ್ತಿದೆ. ಯಾರಿಗೆ ಅಗತ್ಯತೆ ಇರುತ್ತದೆಯೋ ಅಲ್ಲಿ ಸೇವೆ ಮಾಡುವ ಕೆಲಸ ಲಯನ್ಸ ಕ್ಲಬ್ ವತಿಯಿಂದ ನಡೆಯುತ್ತಿದೆ. ಮನುಷ್ಯನಿಗೆ ಆರೋಗ್ಯವೇ ಮುಖ್ಯ, ಅದನ್ನು ನಾವು  ಕಾಪಾಡಿಕೊಳ್ಳಬೇಕು ಆದ್ದರಿಂದ ಈ ಶಿಬಿರದ ಉಪಯೋಗವನ್ನು  ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿದ್ದ ಶ್ರೀನಿವಾಸ ಆಸ್ಪತ್ರೆಯ ವೈದ್ಯ ಡಾ. ಕಾರ್ತಿಕ್  ಮಾತನಾಡಿ ಈ ಶಿಬಿರದಲ್ಲಿ ಸ್ತ್ರೀ ರೋಗ, ಕಣ್ಣಿನ ಚಿಕಿತ್ಸೆ, ಜನರಲ್ ಮೆಡಿಸಿನ್, ಮೂಳೆ ತಜ್ಞರು, ನರ ರೋಗ  ಸೇರಿದಂತೆ ಹಲವಾರು ರೋಗಿಗಳಿಗೆ  ವೈದ್ಯರು ತಪಾಸಣೆ ನಡೆಸಲಿದ್ದು ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ರೋಗಿಗಳಿಗೆ  ಮಂಗಳೂರಿನ  ಶ್ರೀನಿವಾಸ ಆಸ್ಪತ್ರೆಯಲ್ಲಿ ನೀಡಲಾಗುವುದು  ಎಂದರು. ವೇದಿಕೆಯಲ್ಲಿ  ಮುರುಡೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಪ್ರಿಯಾ ಗೋನ್ಸಾಲಿಸ್ ಇದ್ದರು.

ಪವನ ಕುಮಾರ ಪ್ರಾರ್ಥನೆ  ಹಾಡಿದರು. ಕ್ರಿಯಾಶೀಲ ಗೆಳೆಯರ ಸಂಘದ ಕಾರ್ಯದರ್ಶಿ ಪಾಂಡುರಂಗ ನಾಯ್ಕ ಸ್ವಾಗತಿಸಿದರು. ಡಾ.ಸುನೀಲ್ ಜತ್ತಣ್ಣ ವಂದನಾರ್ಪಣೆ ಮಾಡಿದರು. ಲಯನ್ಸ್‌ ಕೃಷ್ಣ ಹೆಗಡೆ ಕಾರ್ಯಕ್ರಮ  ನಿರೂಪಿಸಿದರು. ಶಿಬಿರದಲ್ಲಿ 400 ಕ್ಕೂ ಅಧಿಕ ರೋಗಿಗಳಿಗೆ  ತಪಾಸಣೆ  ನಡೆಸಲಾಯಿತು.

Similar News