ಜಾತಿ ರ‍್ಯಾಲಿಗಳಿಗೆ ಏಕೆ ನಿಷೇಧ ಹೇರಬಾರದು: ಪ್ರಮುಖ ಪಕ್ಷಗಳಿಗೆ ಅಲಹಾಬಾದ್ ಹೈಕೋರ್ಟ್ ನೋಟಿಸ್

Update: 2022-12-05 03:15 GMT

ಲಕ್ನೋ: ರಾಜ್ಯದಲ್ಲಿ ಜಾತಿ ಆಧರಿತ ರ‍್ಯಾಲಿಗಳನ್ನು ಏಕೆ ಸಂಪೂರ್ಣವಾಗಿ ನಿಷೇಧಿಸಲು ಕ್ರಮ ಕೈಗೊಳ್ಳಬಾರದು ಎಂದು ಕೇಳಿ ಲಕ್ನೋ ಹೈಕೋರ್ಟ್‍ನ ಅಲಹಾಬಾದ್ ಪೀಠ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಎಸ್ಪಿ, ಬಿಎಸ್ಪಿ ಹಾಗೂ ಕಾಂಗ್ರೆಸ್‍ಗೆ ನೋಟಿಸ್ ನೀಡಿದೆ.

ನಿಷೇಧವನ್ನು ಉಲ್ಲಂಘಿಸಿದರೆ ಚುನಾವಣಾ ಆಯೋಗ ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದೂ ಪ್ರಶ್ನಿಸಲಾಗಿದೆ. ಒಂಬತ್ತು ವರ್ಷಗಳ ಹಿಂದೆ ಈ ಸಂಬಂಧ ಹೊರಡಿಸಿದ್ದ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಯಾವುದೇ ಕ್ರಮ ಕೈಗೊಳ್ಳದ ಕಾರಣ ಹೈಕೋರ್ಟ್ ಹೊಸದಾಗಿ ನೋಟಿಸ್ ನೀಡಿದೆ ಎಂದು timesofindia.com ವರದಿ ಮಾಡಿದೆ.

ವಕೀಲ ಮೋತಿಲಾಲ್ ಯಾದವ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಾಜೇಜ್ ಬಿಂದಲ್ ಮತ್ತು ನ್ಯಾಯಮೂರ್ತಿ ಜಸ್‍ಪ್ರೀತ್ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ ಈ ನೋಟಿಸ್ ನೀಡಿದೆ. ಉತ್ತರ ಪ್ರದೇಶದಲ್ಲಿ ಜಾತಿ ಆಧರಿತ ರ‍್ಯಾಲಿಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸುವಂತೆ ಭಾರತ ಮುಖ್ಯ ಚುನಾವಣಾ ಆಯುಕ್ತರಿಗೂ ನೋಟಿಸ್ ನೀಡಲಾಗಿದೆ. ಡಿ. 15ರಂದು ಅರ್ಜಿಯ ಮುಂದಿನ ವಿಚಾರಣೆಗೆ ದಿನಾಂಕ ನಿಗದಿಪಡಿಸಿದೆ ಎಂದು timesofindia.com ವರದಿ ಮಾಡಿದೆ.

Similar News