ಐದು ವರ್ಷದ ಮಗನಿಗೆ ಇರಿದು ವ್ಯಕ್ತಿ ಆತ್ಮಹತ್ಯೆ !

Update: 2022-12-07 02:38 GMT

ಭೋಪಾಲ್ : ಐದು ವರ್ಷದ ಮಗನಿಗೆ ಇರಿದ 25 ವರ್ಷದ ವ್ಯಕ್ತಿಯೊಬ್ಬ ನೇಣಿಗೆ ಶರಣಾದ ಘಟನೆ ಭೋಪಾಲ್‍ನ ಚೋಳಾ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಪತಿಯ ಜತೆ ಜಗಳದಲ್ಲಿ ನಾಲ್ಕು ದಿನಗಳ ಹಿಂದೆ ಪತ್ನಿ ಮನೆಬಿಟ್ಟು ಹೋಗಿದ್ದಳು ಎನ್ನಲಾಗಿದ್ದು, ಪತ್ನಿ ವಾಪಸ್ಸಾಗದಿದ್ದರೆ ಮಗನನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ದೂರವಾಣಿ ಕರೆ ಮಾಡಿ ಪತ್ನಿಗೆ ಬೆದರಿಕೆ ಹಾಕಿದ್ದ ಎಂಬ ಅಂಶ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಮಗನ ರಕ್ಷಣೆಗಾಗಿ ಪಿಪಲಾನಿಯಲ್ಲಿದ್ದ ತನ್ನ ಮನೆಯಿಂದ ಮಹಿಳೆ ಧಾವಿಸಿದಾಗ, ಪತಿ ನೇಣಿಗೆ ಶರಣಾಗಿರುವುದು ಕಂಡುಬಂದಿತು. ಪುಟ್ಟ ಮಗುವಿನ ಕತ್ತು ಮತ್ತು ಬೆನ್ನಿನಲ್ಲಿ ಇರಿತದ ಗಂಭೀರ ಗಾಯಗಳಿದ್ದವು. ಬಾಲಕ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾನೆ. ಮೃತ ವೀರು ಮಾಳವೀಯ (25) ತನ್ನ ಪತ್ನಿ ಹಾಗೂ ಮಗ ಸಂದೀಪ್ (5)ನೊಂದಿಗೆ ಬಾಡಿಗೆ ಫ್ಲ್ಯಾಟ್‍ನಲ್ಲಿ ವಾಸವಿದ್ದ ಎಂದು ಪೊಲೀಸರು ಹೇಳಿದ್ದಾರೆ.

"ಇತ್ತೀಚೆಗೆ ವ್ಯಾಜ್ಯವೊಂದರ ಹಿನ್ನೆಲೆಯಲ್ಲಿ ಮನೆ ಬಿಟ್ಟು ಹೋದ ಪತ್ನಿ ಪಿಪಲಾನಿಯಲ್ಲಿದ್ದ ತನ್ನ ಸಂಬಂಧಿಕರ ಮನೆಯಲ್ಲಿ ವಾಸವಿದ್ದರು. ಸೋಮವಾರ ರಾತ್ರಿ 9.30ರ ಸುಮಾರಿಗೆ ಪತ್ನಿಗೆ ದೂರವಾಣಿ ಕರೆ ಮಾಡಿದ ವೀರು, ತಕ್ಷಣ ಆಗಮಿಸದಿದ್ದರೆ ಮಗನನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ ಎನ್ನುವುದು ದೂರವಾಣಿ ಕರೆಯ ದಾಖಲೆಯಿಂದ ತಿಳಿದು ಬಂದಿದೆ. ಮಹಿಳೆ ಮನೆಗೆ ವಾಪಸ್ಸಾದಾಗ ಮಗು ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ವೀರು ನೇಣಿಗೆ ಶರಣಾಗಿದ್ದು ಕಂಡುಬಂತು ಎಂದು ವಿವರಿಸಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.

Similar News