ಉಡುಪಿ: ಸುಳ್ಳು ದಾಖಲೆ ಸೃಷ್ಟಿಸಿ ವಂಚಿಸಿದ ಅರೋಪಿಗಳಿಗೆ ಜೈಲು ಶಿಕ್ಷೆ
ಉಡುಪಿ, ಡಿ.7: ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಪಾಸ್ಪೋರ್ಟ್ಗಳನ್ನು ಹೊಂದಿ ಸರಕಾರಕ್ಕೆ ವಂಚಿಸಿದ ಆರೋಪಿಗಳಿಗೆ ನಗರದ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಪಲಿಮಾರು ಗ್ರಾಮದವರಾದ ರಾಖಿ ವಿನ್ಸೆಂಟ್ ಡಿ ಸೋಜಾ ಎಂಬವರು ತನ್ನ ಅಣ್ಣನಾದ ಪಿಯೂಶ್ ಆಗಸ್ಟಿನ್ ಡಿ ಸೋಜರ ಹೆಸರನ್ನು ದುರ್ಬಳಕೆ ಮಾಡಿ, ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ತನ್ನದೇ ಭಾವಚಿತ್ರ ಹಾಗೂ ಬೇರೆ ಬೇರೆ ಹೆಸರು ಮತ್ತು ವಿಳಾಸದ ಪಾಸ್ಪೋರ್ಟ್ಗಳನ್ನು ಹೊಂದಿದ್ದು, ಈ ಪಾಸ್ಪೋರ್ಟ್ ಗಳನ್ನು ಹೊಂದಲು ಪಾವುಲ್ ಡಿಸೋಜಾ ಎಂಬಾತ ನಕಲಿ ಪಾಸ್ಪೋರ್ಟ್ಗಳನ್ನು ಸೃಷ್ಟಿಸಲು ಬೇಕಾಗುವ ಎಲ್ಲಾ ದಾಖಲೆಗಳನ್ನು ನೀಡಿದ್ದ ಎಂದು ಹೇಳಲಾಗಿದೆ.
ವಿಜಯ್ ರಾವ್ ಮತ್ತು ಮಹೇಂದ್ರ ಬಾಬು ಎಂಬವರು ತಮ್ಮ ಏಜನ್ಸಿಯ ಮೂಲಕ ರಾಖಿ ವಿನ್ಸೆಂಟ್ ಡಿಸೋಜಾಗೆ ಬೇರೆ ಬೇರೆ ಕೇಂದ್ರಗಳಿಂದ ಪಾಸ್ಪೋರ್ಟ್ಗಳನ್ನು ಪಡೆದುಕೊಳ್ಳಲು ಸಹಕರಿಸಿ ಸುಳ್ಳು ಸ್ಪಷ್ಟನೆಯ ಮೂಲಕ ಪಾಸ್ಪೋರ್ಟ್ಗಳನ್ನು ನೈಜ್ಯವೆಂದು ನಂಬಿಸಿ ಸರಕಾರಕ್ಕೆ ವಂಚಿಸಿ ಇಸ್ರೇಲ್ ದೇಶದಲ್ಲಿ ಉದ್ಯೋಗ ಪಡೆದುಕೊಂಡು ಉದ್ಯೋಗ ಮಾಡುತ್ತಿರುವ ಬಗ್ಗೆ ಮತ್ತು ರಜೆಯಲ್ಲಿ ದೇಶಕ್ಕೆ ವಾಪಾಸು ಬಂದ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇಲೆ ಕರಾವಳಿ ಕಾವಲು ಪಡೆಯ ಪೊಲೀಸರು 2008 ಜನವರಿ 5ರಂದು ಮಧ್ಯಾಹ್ನ ಉಡುಪಿ ತಾಲೂಕು ಕಾಪು ಗ್ರಾಮದ ಲೈಟ್ಹೌಸ್ ಬೀಚಿನ ಬಳಿ ರಾಖಿ ವಿನ್ಸೆಂಟ್ ಡಿ ಸೋಜಾರನ್ನು ಪಾಸ್ಪೋರ್ಟ್ಗಳ ಸಮೇತ ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದರು.
ಆರೋಪಿತರೆಲ್ಲರೂ ಸೇರಿ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಸರಕಾರಕ್ಕೆ ವಂಚಿಸಿ ದ್ರೋಹ ಎಸಗಿರುವ ಹಿನ್ನೆಲೆಯಲ್ಲಿ ಪಾಸ್ಪೋರ್ಟ್ ಕಾಯ್ದೆಯಡಿ ಉಡುಪಿ ಕರಾವಳಿ ಕಾವಲು ಪಡೆಯ ವೃತ್ತ ನಿರೀಕ್ಷಕರು ಪ್ರಕರಣ ದಾಖಲಿಸಿ ಕೊಂಡು ಆರೋಪಿಗಳ ವಿರುದ್ಧ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶೆ ದೀಪಾ ಇವರು ರಾಖಿ ವಿನ್ಸೆಎಂಟ್ ಡಿ ಸೋಜಾಗೆ 3 ವರ್ಷ ಶಿಕ್ಷೆ ಹಾಗೂ 5,000 ರೂ.ದಂಡ, ವಿಜಯ್ ರಾವ್ ಮತ್ತು ಮಹೇಂದ್ರ ಬಾಬುಗೆ ತಲಾ 1 ವರ್ಷ ಜೈಲುಶಿಕ್ಷೆ ಹಾಗೂ 5,000 ರೂ.ದಂಡ ಮತ್ತು ಎಲ್ಲಾ ಆರೋಪಿಗಳಿಗೆ ಪಾಸ್ಪೋರ್ಟ್ ಕಾಯ್ದೆಯಡಿಯಲ್ಲಿ ತಲಾ 1 ವರ್ಷ ಜೈಲು ಶಿಕ್ಷೆ ಹಾಗೂ ತಲಾ 10,000ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕಿ ಜಯಂತಿ ಕೆ. ವಾದ ಮಂಡಿಸಿದ್ದರು.