ಹಿಮಾಚಲ ಪ್ರದೇಶ: ಮುಖ್ಯಮಂತ್ರಿ ರೇಸ್‌ನಲ್ಲಿ ಪ್ರಬಲ ನಾಯಕರು; ಯಾರಿಗೆ ಒಲಿಯಲಿದೆ ಕಾಂಗ್ರೆಸ್ ಚುಕ್ಕಾಣಿ?

Update: 2022-12-08 15:11 GMT

ಶಿಮ್ಲಾ: ಕಾಂಗ್ರೆಸ್ ಹಿಮಾಚಲ ಪ್ರದೇಶದಲ್ಲಿ ಅಧಿಕಾರದ ಗದ್ದುಗೆಯನ್ನೇರಲು ಸಜ್ಜಾಗಿದ್ದು,ಮುಖ್ಯಮಂತ್ರಿ ಹುದ್ದೆಗೆ ಹಲವರು ಪೈಪೋಟಿಯಲ್ಲಿರುವುದರಿಂದ ಪಕ್ಷಕ್ಕೆ ಸಾಕಷ್ಟು ಸಮಸ್ಯೆ ಎದುರಾಗಬಹುದು ಎಂದು indianexpress.com ವರದಿ ಮಾಡಿದೆ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು,ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಕನಿಷ್ಠ ಎಂಟು ಸ್ಪರ್ಧಿಗಳಿದ್ದಾರೆ ಎಂದು ಲೇವಡಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಸುಧೀರ್ ಶರ್ಮಾ ಅವರು, ಕಾಂಗ್ರೆಸ್ ಪ್ರಜಾಸತ್ತಾತ್ಮಕ ಪಕ್ಷವಾಗಿದ್ದು, ಯಾರೇ ಆದರೂ ಮುಖ್ಯಮಂತ್ರಿಯಾಗುವ ಕನಸು ಕಾಣಬಹುದು ಎಂದಿದ್ದರು. ‘ಶಾ ಎಂಟು ಮುಖ್ಯಮಂತ್ರಿ ಅಭ್ಯರ್ಥಿಗಳ ಬಗ್ಗೆ ಮಾತನಾಡುತ್ತಿದ್ದಾರೆ, ಆದರೆ ಅದಕ್ಕೂ ಹೆಚ್ಚಿರಬಹುದು ಎಂದು ನಾನು ಹೇಳಬಲ್ಲೆ. ಅಷ್ಟಕ್ಕೂ,ಕಾಂಗ್ರೆಸ್ ಎಷ್ಟು ಪ್ರಜಾಸತ್ತಾತ್ಮಕವಾಗಿದೆ ಎನ್ನುವುದನ್ನು ಇದು ತೋರಿಸುತ್ತಿದೆ ಎಂದೂ ಅವರು ಹೇಳಿದ್ದರು.

ಸುಖ್ವಿಂದರ್ ಸಿಂಗ್ ಸುಖು, ಮುಕೇಶ್ ಅಗ್ನಿಹೋತ್ರಿ ಮತ್ತು ಪ್ರತಿಭಾ ಸಿಂಗ್ ಅವರು ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ. ಸಿಂಗ್ಹಾಲಿ ಸಂಸದರಾಗಿದ್ದರೆ, ಸುಖು ಮತ್ತು ಅಗ್ನಿಹೋತ್ರಿ ಹಾಲಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಆಶಾ ಕುಮಾರಿ ಮತ್ತು ಕೌಲ್ ಸಿಂಗ್ ಠಾಕೂರ್ ಅವರು ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿದ್ದಾರೆ ಎಂದು ಪರಿಗಣಿಸಲಾಗಿತ್ತಾದರೂ ಅವರಿಬ್ಬರೂ ಈಗ ಬಹುತೇಕ ರಂಗದಿಂದ ನಿರ್ಗಮಿಸಿದ್ದಾರೆ. ಡಾಲಹೌಸಿಯಿಂದ ಆರು ಬಾರಿ ಶಾಸಕಿಯಾಗಿದ್ದ ಕುಮಾರಿ ಮತ್ತು ಎಂಟು ಬಾರಿಯ ಶಾಸಕ ಠಾಕೂರ್ ಮಂಡಿಯ ಡ್ರಾಂಗ್ ಕ್ಷೇತ್ರದಲ್ಲಿ ಸೋಲನ್ನಪ್ಪಿದ್ದಾರೆ.

ಸುಖ್ವಿಂದರ್ ಸಿಂಗ್ ಸುಖು ಕಾಂಗ್ರೆಸ್ ನ ಮಾಜಿ ರಾಜ್ಯಾಧ್ಯಕ್ಷ ಹಾಗೂ ಅದರ ಪ್ರಚಾರ ಸಮಿತಿಯ ಮುಖ್ಯಸ್ಥ ಸುಖು ಮಧ್ಯ ಹಿಮಾಚಲದ ನಾದೌನ್ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಪಕ್ಷದ ಕಾರ್ಯಕರ್ತರ ಬೆಂಬಲ ಹೊಂದಿರುವ ಮೂರು ಬಾರಿಯ ಶಾಸಕ ಸುಖು ಮುಖ್ಯಮಂತ್ರಿ ಹುದ್ದೆಗೆ ಅತ್ಯಂತ ಪ್ರಬಲ ಸ್ಪರ್ಧಿಯಾಗಿದ್ದಾರೆ. ಆದಾಗ್ಯೂ,ಪಕ್ಷದ ಹೈಕಮಾಂಡ್ ಮುಖ್ಯಮಂತ್ರಿಯನ್ನು ನಿರ್ಧರಿಸಲಿದೆ ಎಂದು ಸುಖು ಹೇಳಿದ್ದಾರೆ.

ಮುಕೇಶ್ ಅಗ್ನಿಹೋತ್ರಿ
ಪ್ರತಿಪಕ್ಷ ನಾಯಕ ಅಗ್ನಿಹೋತ್ರಿ ನೈರುತ್ಯ ಹಿಮಾಚಲದ ಹರೋಲಿ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಮೂರು ಬಾರಿಯ ಶಾಸಕರಾಗಿರುವ ಅಗ್ನಿಹೋತ್ರಿ 2017ರ ವಿಧಾನಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದರು.

ಪ್ರತಿಭಾ ಸಿಂಗ್
ಹಾಲಿ ಹಿಮಾಚಲ ಪಿಸಿಸಿ ಅಧ್ಯಕ್ಷೆ,ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ 2004ರಲ್ಲಿ ಮಂಡಿ ಕ್ಷೇತ್ರದಿಂದ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದರು. 2013ರ ಉಪಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪತಿ ವೀರಭದ್ರ ಸಿಂಗ್ ಮುಖ್ಯಮಂತ್ರಿಯಾಗುವ ಮುನ್ನ ಪ್ರತಿನಿಧಿಸಿದ್ದ ಮಂಡಿ ಕ್ಷೇತ್ರದಲ್ಲಿ ಹಾಲಿ ಮುಖ್ಯಮಂತ್ರಿ ಜೈರಾಮ ಠಾಕೂರ್ ಅವರನ್ನು ಸೋಲಿಸಿದ್ದರು. 2021ರ ಉಪಚುನಾವಣೆಯಲ್ಲಿ ಮಂಡಿ ಕ್ಷೇತ್ರದಿಂದಲೇ ಮತ್ತೆ ಸಂಸದೆಯಾಗಿದ್ದಾರೆ.

Similar News