ಧರ್ಮಸ್ಥಳ | ಅಕ್ರಮ ಮರಳುಗಾರಿಕೆ ಅಡ್ಡೆಗೆ ಲೋಕಾಯುಕ್ತ ದಾಳಿ: ದೋಣಿ, ಲಾರಿಗಳು ವಶಕ್ಕೆ

Update: 2022-12-09 04:09 GMT

ಬೆಳ್ತಂಗಡಿ, ಡಿ.9: ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ(sand mafia) ಅಡ್ಡೆಗೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ಈ ವೇಳೆ ಮರಳು ತೆಗೆಯಲು ಉಪಯೋಗಿಸುತ್ತಿದ್ದ ದೋಣಿ ಹಾಗೂ ಲಾರಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯ ಬಗೆಗಿನ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.

ನೇತ್ರಾವತಿ ಸ್ನಾನಘಟ್ಟದ ಸಮೀಪ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ವೇಳೆ ದಾಳಿ ನಡೆಸಲಾಗಿದ್ದು, ಸ್ಥಳದಿಂದ ಮರಳು ತುಂಬಿದ ಒಂದು ಲಾರಿ, ಹಾಗೂ ಮರಳು ತುಂಬಲು ತಂದು ನಿಲ್ಲಿಸಿದ್ದ ಮತ್ತೊಂದು ಲಾರಿ ಹಾಗೂ ಮರಳು ತೆಗೆಯಲು ಉಪಯೋಗಿಸುತ್ತಿದ್ದ ಒಂದು ದೋಣಿಯನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಸೊತ್ತುಗಳ ಒಟ್ಟು ಮೌಲ್ಯ ಸುಮಾರು ಎಂಟು ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಅವುಗಳನ್ನು ಧರ್ಮಸ್ಥಳ ಠಾಣೆಗೆ ಹಸ್ತಾಂತರಿಸಲಾಗಿದ್ದು, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಲೋಕಾಯುಕ್ತ ತಂಡ ತಾಲೂಕಿನ ಇತರೆಡೆಗಳಿಗೂ ದಾಳಿ ನಡೆಸಿದರೂ ಮಾಹಿತಿ ಪಡೆದು ಮರಳು ದೋಚುತ್ತಿದ್ದವರು ತಮ್ಮ ಸಾಮಗ್ರಿಗಳೊಂದಿಗೆ ತಪ್ಪಿಸಿಕೊಳ್ಳುವಲ್ಲಿ ಯಶಸ್ಚಿಯಾಗಿದ್ದಾರೆ ಎಂದು ತಿಳಿದುಬಂದಿದೆ.

Similar News