ಡಿ.29ರಂದು ಹೆಜಮಾಡಿಯಲ್ಲಿ ಸುರತ್ಕಲ್ ಟೋಲ್ ಸಂಗ್ರಹ ಕೈಬಿಡಲು ಆಗ್ರಹಿಸಿ ಧರಣಿ
ಉಡುಪಿ, ಡಿ.15: ಸುರತ್ಕಲ್ ಅಕ್ರಮ ಟೋಲ್ ಸುಂಕವನ್ನು ಹೆಜಮಾಡಿ ಯಲ್ಲಿ ಸಂಗ್ರಹಿಸುವ ಹೆದ್ದಾರಿ ಪ್ರಾಧಿಕಾರದ ಆದೇಶ ಜಾರಿಗೊಳ್ಳುವ ಹಿನ್ನೆಲೆ ಯಲ್ಲಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಹಾಗೂ ಉಡುಪಿಯ ಸಮಾನ ಮನಸ್ಕ ಸಂಘಟನೆಗಳ ಮುಖಂಡರು ಅಜ್ಜರಕಾಡಿನ ವಿಮಾ ನೌಕರರ ಸಂಘದ ಕಚೇರಿಯಲ್ಲಿ ಸಭೆ ಸೇರಿ ಚರ್ಚಿಸಿದರು.
ಸುರತ್ಕಲ್ ಟೋಲ್ ಸುಂಕವನ್ನು ಹೆಜಮಾಡಿಯಲ್ಲಿ ಸಂಗ್ರಹಿಸುವ ಹೆದ್ದಾರಿ ಪ್ರಾಧಿಕಾರದ ಆದೇಶ ರಾಜ್ಯ ಸರಕಾರದ ಅಧಿಕೃತ ಒಪ್ಪಿಗೆಯೊಂದಿಗೆ ಪ್ರಕಟ ಗೊಂಡಿದೆ. ಹೆಜಮಾಡಿ ಟೋಲ್ ಪ್ಲಾಜಾದ ಮಾಲಕತ್ವ ಹೊಂದಿರುವ ನವ ಯುಗ್ ಕಂಪೆನಿಯು ಸಂಗ್ರಹಕ್ಕೆ ಹಿಂದೇಟು ಹಾಕಿರುವುದರಿಂದ ತಾತ್ಕಾಲಿಕವಾಗಿ ಯಷ್ಟೆ ಹೆಜಮಾಡಿಯಲ್ಲಿ ಸಂಗ್ರಹಕ್ಕೆ ತಡೆ ಬಿದ್ದಿದೆ.
ಜಿಲ್ಲಾಡಳಿತ ಸಮಾಯಾವಕಾಶ ಕೇಳಿದ್ದರೂ ರಾಜ್ಯ ಸರಕಾರದ ಒಪ್ಪಿಗೆ ಸಿಕ್ಕಿರುವುದರಿಂದ ಯಾವುದೇ ಕ್ಷಣದಲ್ಲಿ ಸಂಗ್ರಹ ಆರಂಭಗೊಳ್ಳಬಹುದು. ಜಿಲ್ಲೆಯ ಸಂಸದ, ಶಾಸಕರುಗಳು ವಿಧಾನ ಸಭೆ ಚುನಾವಣೆಯವರಗೆ ಸಂಗ್ರಹ ಮುಂದೂಡುವ ಮೂಲಕ ಜನರ ಕಣ್ಣಿಗೆ ಮಣ್ಣೆರಚುವ ತಂತ್ರ ನಡೆಸಿದ್ದಾರೆ. ಒಟ್ಟು ಸದ್ಯದಲ್ಲೇ ಹೆಜಮಾಡಿಯಲ್ಲಿ ಹೆಚ್ಚುವರಿ ಟೋಲ್ ಸಂಗ್ರಹ ಆರಂಭ ಗೊಳ್ಳುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಹೆಜಮಾಡಿಯಲ್ಲಿ ಸುರತ್ಕಲ್ ಟೋಲ್ ಸಂಗ್ರಹದ ಆದ್ಯಾದೇಶ ಹೆದ್ದಾರಿ ಪ್ರಾಧಿಕಾರ ವಾಪಾಸು ಪಡೆಯುವುದು ಮಾತ್ರ ಶಾಶ್ವತ ಪರಿಹಾರವಾಗಿದ್ದು ಆ ನಿಟ್ಟಿನಲ್ಲಿ ಎರಡೂ ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರಾಂದೋಲನ ನಡೆಸಲು, ಡಿ.29 ರಂದು ಉಡುಪಿ ತಾಲೂಕು ಕಚೇರಿ ಮುಂಭಾಗ ಬೃಹತ್ ಸಾಮೂಹಿಕ ಧರಣಿ ಏರ್ಪಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಅಧ್ಯಕ್ಷತೆಯನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ವಹಿಸಿದ್ದರು. ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಾಸ್ತಾವಿಕ ಮಾತನಾಡಿ ದರು. ಮಾಜಿ ಸಚಿವ ಅಭಯ ಚಂದ್ರ ಜೈನ್, ಬಸ್ ಮಾಲಕರ ಸಂಘದ ಮುಂದಾಳು ಕಿಶನ್ ಹೆಗ್ಡೆ ಕೊಳ್ಕೆಬೈಲ್, ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಎಂ.ಜಿ.ಹೆಗ್ಡೆ, ಸುಂದರ ಮಾಸ್ತರ್, ಸುರೇಶ್ ಕಲ್ಲಾಗರ, ಶೇಖರ ಹೆಜಮಾಡಿ, ರಾಲ್ಪಿ ಡಿಕೋಸ್ತ ಹೆಜಮಾಡಿ, ಶಶಿಧರ ಗೊಲ್ಲ, ಪ್ರಶಾಂತ್ ಜತ್ತನ್ನ ಮೊದ ಲಾದವರು ಉಪಸ್ಥಿತರಿದ್ದರು.
ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ವಂದಿಸಿದರು.