×
Ad

ಉಡುಪಿ: ಮನೆ ಕಳವು ಪ್ರಕರಣದ ಕುಖ್ಯಾತ ಆರೋಪಿಯ ಬಂಧನ; 7 ಲಕ್ಷ ರೂ ಮೌಲ್ಯದ ಬೆಲೆಬಾಳುವ ಚಿನ್ನಾಭರಣ, ಸೊತ್ತುಗಳು ವಶ

Update: 2022-12-20 18:35 IST

ಉಡುಪಿ: ಬ್ರಹ್ಮಾವರ ವೃತ್ತದ ಪೊಲೀಸ್ ಠಾಣೆಗಳಾದ ಬ್ರಹ್ಮಾವರ ಹಾಗೂ ಕೋಟ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಕಳವಿನ ಹಲವು ಪ್ರಕರಣಗಳು ದಾಖಲಾಗಿದ್ದು, ಇದರ ತನಿಖೆಗಾಗಿ ರಚಿಸಲಾದ ಪೊಲೀಸರ ವಿಶೇಷ ತಂಡವು ಪ್ರಕರಣಗಳ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಕಾಡೂರು ಗ್ರಾಮದ ತಂತ್ರಾಡಿ ಬಾಯರಬೆಟ್ಟು ನಿವಾಸಿ ವಿಜಯ ಕುಮಾರ್ ಶೆಟ್ಟಿ (28) ಬಂಧಿತ ಆರೋಪಿ. ಈತ ಬ್ರಹ್ಮಾವರ ಠಾಣೆಯ ಕಳ್ಳತನ ಪ್ರಕರಣಗಳ ಹಳೆಯ ಆರೋಪಿಯಾಗಿದ್ದು, ಈತನನ್ನು ಡಿ.19ರಂದು ಸಂಜೆ ನೀಲಾವರ ಕ್ರಾಸ್ ಬಳಿ ಬಂಧಿಸಲಾಗಿದೆ. ಈತನ ಬಂಧನದಿಂದ  ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4 ಹಾಗೂ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಒಂದು ಕಳ್ಳತನ ಪ್ರಕರಣ ಬೆಳಕಿಗೆ ಬರುವಂತಾಗಿದೆ.

ಆರೋಪಿ ವಿಜಯಕುಮಾರ ಶೆಟ್ಟಿಯಿಂದ 30 ಸಾವಿರ ಮೌಲ್ಯದ ಹೋಂಡಾ ಮ್ಯಾಟ್ರಿಕ್ಸ್ ಸ್ಕೂಟರ್, ಕಳವು ಮಾಡಿದ 4 ಲಕ್ಷ 64 ಸಾವಿರದ 700 ರೂ. ಮೌಲ್ಯದ ಚಿನ್ನಾಭರಣಗಳು, 2080ರೂ. ಮೌಲ್ಯದ ಬೆಳ್ಳಿ ನಾಣ್ಯಗಳು, 9,000ರೂ. ಮೌಲ್ಯದ ಒಂದು ಸೀರೆ, ಕಳವು ಮಾಡಿದ ಕಾಳುಮೆಣಸಿನ ಮಾರಾಟದಿಂದ ಪಡೆದ 84 ಸಾವಿರ ರೂ.ನಗದು, ಕಳವು ಮಾಡಿದ 2,800 ರೂ.ಮೌಲ್ಯದ ಗ್ಯಾಸ್ ಸಿಲಿಂಡರ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಪೊಲೀಸರ ತಂಡವು ಹಳೆಯ ರಾತ್ರಿ ಮನೆ ಕಳ್ಳತನ ಪ್ರಕರಣದ ಆರೋಪಿಗಳು ಹಾಗೂ ಜೈಲಿನಿಂದ ಬಿಡುಗಡೆಯಾದವರ ಮಾಹಿತಿಯನ್ನು ಕಲೆಹಾಕಿ  ಅವರ ಚಲನವಲನದ ಮೇಲೆ ನಿಗಾ ವಹಿಸಿದ್ದು, ಅದರಂತೆ ಡಿ.19ರಂದು ಸಂಜೆ ವಿಜಯ್ ಹೋಗುತ್ತಿದ್ದ ಹೊಂಡಾ ಮ್ಯಾಟ್ರಿಕ್ಸ್ ಸ್ಕೂಟರ್‌ನ್ನು ನಿಲ್ಲಿಸಿ ಪರಿಶೀಲಿಸಿದಾಗ ಕಳ್ಳತನಕ್ಕೆ ಬೇಕಾದ ಸಲಕರಣೆಗಳು ಆತನಲ್ಲಿದ್ದು ತಕ್ಷಣ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ಈತ ತಾನು ನಡೆಸಿದ ಕುಕೃತ್ಯಗಳ ಮಾಹಿತಿ ಬಹಿರಂಗ ಪಡಿಸಿದ್ದ.

2022ರ ಮಾರ್ಚ್ ಮತ್ತು ಎಪ್ರಿಲ್ ತಿಂಗಳ ಮಧ್ಯಾವಧಿಯಲ್ಲಿ ಕಾಡೂರು ಗ್ರಾಮದ  ತಂತ್ರಾಡಿ ಸದಾಶಿವ ಮಹಾಬಲೇಶ್ವರ ರಾವ್ ಮನೆಗೆ ಕನ್ನ ಹಾಕಿ 280 ಕೆಜಿ ತೂಕದ 1 ಲಕ್ಷ 40 ಸಾವಿರ ಮೌಲ್ಯದ ಏಳು ಮೂಟೆ ಕಾಳು ಮೆಣಸುಗಳನ್ನು ಕಳವು ಮಾಡಿದ್ದ. ಜುಲೈನಲ್ಲಿ ನಡೂರು ಪಟೇಲ್ ಶ್ರೀಅಂತಯ್ಯ ಶೆಟ್ಟಿ ಸ್ಮಾರಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೀಗ ಮುರಿದು ಒಂದು ಇಂಡೇನ್ ಕಂಪೆನಿಯ ಗ್ಯಾಸ್ ಸಿಲಿಂಡರ್ ಕಳವು ಮಾಡಿದ್ದ. ಅದೇ ತಿಂಗಳು ಯಡ್ತಾಡಿ ಗ್ರಾಮದ  ದಾಲಾಡಿಯಲ್ಲಿರುವ ವಾಣಿ ಭಂಡಾರಿ ಎನ್ನುವರ ಮನೆಗೆ ನುಗ್ಗಿ  5 ಲಕ್ಷ ಮೌಲ್ಯದ ಚಿನ್ನಾಭರಣ, 15 ಸಾವಿರ ನಗದು  ಕಳವು ಮಾಡಿದ್ದ.

2022ರ ನವೆಂಬರ್ ತಿಂಗಳಿನಲ್ಲಿ ಕೋಟ ಠಾಣಾ ವ್ಯಾಪ್ತಿಯ ಬಿಲ್ಲಾಡಿ ಶಾಲೆಯ ಎದುರಿನ ಸುಜಾತ ಶೆಟ್ಟಿ ಎಂಬವರ ಮನೆ ಕಳ್ಳತನ, ಆರೂರು ಗ್ರಾಮದ ಮೇಲಡ್ಪು ಭಾಸ್ಕರ ಶೆಟ್ಟಿ ಅವರ ಮನೆಯಲ್ಲಿ 31 ಸಾವಿರ ಮೌಲ್ಯದ  ಚಿನ್ನ, ಬೆಳ್ಳಿಯ ಆಭರಣ ಮತ್ತು ಸೀರೆ ಹಾಗೂ 5 ಸಾವಿರ ನಗದು ಕಳವು ಮಾಡಿದ್ದ.

ಹಲವು ಠಾಣೆಗಳಲ್ಲಿ ಪ್ರಕರಣ: ಆರೋಪಿ ವಿಜಯ ಕುಮಾರ ಶೆಟ್ಟಿ ಮೇಲೆ ಈ ಹಿಂದೆ ದ.ಕ ಜಿಲ್ಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಮಂಗಳೂರು  ಬಂದರು ಪೊಲೀಸ್ ಠಾಣೆಯಲ್ಲಿ 4, ಎನ್.ಆರ್.ಪುರ, ಹರಿಹರ, ಶಿವಮೊಗ್ಗ, ಬ್ರಹ್ಮಾವರ, ಆಗುಂಬೆ ಪೊಲೀಸ್ ಠಾಣೆಯಲ್ಲಿ ತಲಾ ಒಂದೊಂದು ಪ್ರಕರಣಗಳು, ತುಂಗಾ ನಗರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿದೆ. ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು ಜಾಮೀನು ರಹಿತ ವಾರಂಟ್ ಜಾರಿಯಾಗಿದೆ

ಕಾರ್ಯಾಚರಣೆ ತಂಡ: ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ ಎಂ. ಹೆಚ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ ಸಿದ್ದಲಿಂಗಪ್ಪ  ಮಾರ್ಗದರ್ಶನದಲ್ಲಿ ಉಡುಪಿ ಡಿವೈಎಸ್ಪಿ ಸುಧಾಕರ ಎಸ್ ನಾಯ್ಕ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ವೃತ್ತನಿರೀಕ್ಷಕ ಅನಂತ ಪದ್ಮನಾಭ, ಬ್ರಹ್ಮಾವರ ಠಾಣೆ ಉಪನಿರೀಕ್ಷಕ ರಾಜಶೇಖರ ವಂದಲಿ, ಠಾಣಾ ತನಿಖೆ ಪಿಎಸ್‌ಐ ಮುಕ್ತಾಬಾಯಿ, ಕೋಟ ಠಾಣಾ ಪಿಎಸ್‌ಐ ಮಧು ಬಿ.ಇ, ಬ್ರಹ್ಮಾವರ ಠಾಣಾ ಸಿಬ್ಬಂದಿಗಳಾದ ವೆಂಕಟರಮಣ ದೇವಾಡಿಗ, ಪ್ರವೀಣ ಶೆಟ್ಟಿರ್ಗಾ, ಮಹಮದ್ ಅಜ್ಮಲ್, ರಾಘವೇಂದ್ರ ಕಾರ್ಕಡ, ಸುರೇಶ್ ಶೆಟ್ಟಿ, ಗಣೇಶ್ ದೇವಾಡಿಗ, ದಿಲೀಪ, ಸಂತೋಷ ರಾಥೋಡ್, ಸಂದೀಪ, ದೇವರಾಜ್, ಗುರು ಕಿರಣ, ಸುರೇಶ್ ಬಾಬು, ಅಂಬ್ರಯ್ಯ ಹೀರೆಮಠ, ನವೀನ ಯಾದವ್, ಕೋಟ ಠಾಣಾ ಸಿಬ್ಬಂದಿ ರಾಘವೇಂದ್ರ ಶೆಟ್ಟಿ, ಹಾಗೂ ಕಂಪ್ಯೂಟರ್ ಸಿಬ್ಬಂದಿ ಯೋಗೀಶ್ ಮತ್ತು ಜಿಲ್ಲಾ ಸಿಡಿಆರ್ ವಿಭಾಗದ ನಿತಿನ್, ದಿನೇಶ್ ಹಾಗೂ ಚಾಲಕ ಅಣ್ಣಪ್ಪ ಮತ್ತು ಸಂತೋಷ ಭಾಗವಹಿಸಿದ್ದರು.ಪ್ರಕರಣವನ್ನು ಭೇದಿಸಿರುವುದಕ್ಕೆ ಎಸ್ಪಿ ಅಕ್ಷಯ ಎಂ. ಹೆಚ್ ತಂಡವನ್ನು ಅಭಿನಂದಿಸಿದ್ದಾರೆ.

Similar News