×
Ad

ಕೇಂದ್ರ ಸಚಿವ ಹರ್ದೀಪ್ ಸಿಂಗ್ ಭೇಟಿಯಾದ ಸಂಸದ ರಾಘವೇಂದ್ರ: ರಾಜ್ಯಕ್ಕೆ ಬಾಕಿ ಇರುವ ಸೀಮೆಎಣ್ಣೆ ಬಿಡುಗಡೆಗೆ ಮನವಿ

Update: 2022-12-22 20:16 IST

ಉಡುಪಿ, ಡಿ.22: ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಹೊಸದಿಲ್ಲಿಯ ಸಂಸತ್ ಭವನದಲ್ಲಿ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಭೇಟಿಯಾಗಿ ರಾಜ್ಯದ ಬಡ ಮೀನುಗಾರರಿಗೆ ಸಹಾಯ ಮಾಡು ಬಾಕಿ ಉಳಿದ 6,723 ಕೆಎಲ್ ಸೀಮೆಎಣ್ಣೆಯನ್ನು ಕರ್ನಾಟಕ ಸರಕಾರಕ್ಕೆ ಮಂಜೂರು ಮಾಡುವಂತೆ  ಒತ್ತಾಯಿಸಿ ಮನವಿ ಸಲ್ಲಿಸಿದರು.

ಪ್ರಸಕ್ತ ಹಣಕಾಸು ವರ್ಷ 2022-23ಕ್ಕೆ 2,472 ಕೆಎಲ್, ಹಿಂದಿನ ಹಂಚಿಕೆಗೆ ಹೆಚ್ಚುವರಿಯಾಗಿ 3,000 ಕೆಎಲ್ ಸಬ್ಸಿಡಿ ರಹಿತ ಪಿಡಿಎಸ್ ಸೀಮೆಎಣ್ಣೆಯನ್ನು ಕರ್ನಾಟಕ ಸರ್ಕಾರಕ್ಕೆ ಮಂಜೂರು ಮಾಡಿದ್ದಕ್ಕಾಗಿ ಕೇಂದ್ರ ಸರಕಾರಕ್ಕೆ ಕೃತಜ್ಞತೆ ತಿಳಿಸಿದ ಸಂಸದರು, ಬಾಕಿ ಉಳಿದ ಸೀಮೆಎಣ್ಣೆಯನ್ನು ಶೀಘ್ರವೇ ಬಿಡುಗಡೆ ಮಂಜೂರಾತಿ ನೀಡುವಂತೆ ಮನವಿ ಮಾಡಿದರು.

ಕರ್ನಾಟಕಕ್ಕೆ ಒಟ್ಟು 12,195 ಕೆಎಲ್ ಸೀಮೆಎಣ್ಣೆ ಹಂಚಿಕೆಯಾಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ 2022-23ಕ್ಕೆ 5,472 ಕೆಎಲ್ ಮಾತ್ರ ಮಂಜೂರಾಗಿದೆ. ಉಳಿದ 6,723 ಕೆಎಲ್ ಸೀಮೆಎಣ್ಣೆಯನ್ನು ಶೀಘ್ರವೇ  ಮಂಜೂರು ಮಾಡಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕೆಂದು ರಾಘವೇಂದ್ರ ಸಚಿವರನ್ನು ವಿನಂತಿಸಿದರು.

ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ಅತೀ ಶೀಘ್ರದಲ್ಲಿ ಕರ್ನಾಟಕದ ಉಳಿದ ಕೋಟಾದ ಸೀಮೆಎಣ್ಣೆ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.

Similar News