ಅಕ್ರಮ ಹಣ ವರ್ಗಾವಣೆ ಪ್ರಕರಣ: ಪತ್ರಕರ್ತ ಸಿದ್ದೀಕ್ ಕಪ್ಪನ್ ಗೆ ಹೈಕೋರ್ಟ್ ಜಾಮೀನು
Update: 2022-12-23 18:21 IST
ಲಕ್ನೋ: ಹತ್ರಸ್ ನಲ್ಲಿ ನಡೆದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣವನ್ನು ವರದಿ ಮಾಡಲು ತೆರಳಿದ್ದ ವೇಳೆ ಬಂಧಿತರಾಗಿ ಜೈಲಿನಲ್ಲಿ 2 ವರ್ಷಗಳನ್ನು ಕಳೆದ ನಂತರ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ ಜಾಮೀನು ಪಡೆದಿದ್ದಾರೆ.
ಯುಎಪಿಎ ಮತ್ತು ಇತರ ಸಂಬಂಧಿತ ಕಾನೂನುಗಳ ಅಡಿಯಲ್ಲಿ ದಾಖಲಾದ ಭಯೋತ್ಪಾದನೆ ಪ್ರಕರಣದಲ್ಲಿ ಪತ್ರಕರ್ತ ಸಿದ್ದೀಕ್ ಕಪ್ಪನ್ ಸೆಪ್ಟೆಂಬರ್ನಲ್ಲಿ ಸುಪ್ರೀಂ ಕೋರ್ಟ್ನಿಂದ ಈಗಾಗಲೇ ಜಾಮೀನು ಪಡೆದಿದ್ದರು. ಇಂದು ಅವರಿಗೆ ಹೈಕೋರ್ಟ್ನಿಂದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಸಿಕ್ಕಿದೆ.
ಈ ತಿಂಗಳ ಆರಂಭದಲ್ಲಿ, ಲಕ್ನೋದ ನ್ಯಾಯಾಲಯವು ಸಿದ್ದೀಕ್ ಕಪ್ಪನ್ ಮತ್ತು ಇತರ ಆರು ಜನರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಆರೋಪಗಳನ್ನು ರೂಪಿಸಿತ್ತು, ಇವರೊಂದಿಗೆ ಕೆಎ ರವೂಫ್ ಶೆರೀಫ್, ಅತಿಕುರ್ ರೆಹಮಾನ್, ಮಸೂದ್ ಅಹ್ಮದ್, ಮೊಹಮ್ಮದ್ ಆಲಂ, ಅಬ್ದುಲ್ ರಝಾಕ್ ಮತ್ತು ಅಶ್ರಫ್ ಖಾದಿರ್ ವಿರುದ್ಧವೂ ಪ್ರಕರಣಗಳನ್ನು ದಾಖಲಿಸಲಾಗಿತ್ತು.