ಕಾರು ಅಪಘಾತದಲ್ಲಿ ಪಂತ್ ಗೆ ಗಾಯ; ಶೀಘ್ರ ಚೇತರಿಸಿಕೊಳ್ಳುವಂತೆ ಮಾಜಿ ಕ್ರಿಕೆಟಿಗರು ಸೇರಿದಂತೆ ಹಿತೈಷಿಗಳ ಹಾರೈಕೆ

Update: 2022-12-30 05:05 GMT

ಹೊಸದಿಲ್ಲಿ: ಭಾರತದ ವಿಕೆಟ್‌ಕೀಪರ್-ಬ್ಯಾಟರ್ ರಿಷಬ್ ಪಂತ್ ಶುಕ್ರವಾರ ದಿಲ್ಲಿಯಿಂದ ಉತ್ತರಾಖಂಡಕ್ಕೆ ಪ್ರಯಾಣಿಸುತ್ತಿದ್ದಾಗ ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದ್ದರಿಂದ ಗಾಯಗೊಂಡಿದ್ದಾರೆ.

ಪಂತ್  ಅವರು ತಮ್ಮ ಮರ್ಸಿಡಿಸ್ ಕಾರನ್ನು ಓಡಿಸುತ್ತಿದ್ದರು, ಉತ್ತರಾಖಂಡದ ರೂರ್ಕಿ ಬಳಿ ಅಪಘಾತ ಸಂಭವಿಸಿದೆ. ಅಪಘಾತದ ಪರಿಣಾಮವಾಗಿ ಪಂತ್ ಅವರ ತಲೆ,  ಮೊಣಕಾಲಿಗೆ ಗಾಯಗಳಾಗಿವೆ. ಅವರ ಕಾಲಿನಲ್ಲಿ ಮೂಳೆ ಮುರಿತ ಆಗಿರಬಹುದು ಎನ್ನಲಾಗಿದೆ.  ಪ್ರಸ್ತುತ ಅವರನ್ನು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ರಸ್ತೆ ಅಪಘಾತದಲ್ಲಿ ಪಂತ್ ಗಾಯಗೊಂಡ ನಂತರ ಮಾಜಿ ಕ್ರಿಕೆಟಿಗರು, ಹಿತೈಷಿಗಳು ಟ್ವಿಟರ್‌ ಮೂಲಕ ಕ್ರಿಕೆಟಿಗ ಪಂತ್  ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

"ಪ್ರಿಯ ರಿಷಭ್ ಪಂತ್  ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಬಹುಬೇಗನೆ ಆರೋಗ್ಯವಂತನಾಗು" ಎಂದು ಭಾರತದ ಮಾಜಿ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

''ರಿಷಬ್ ಪಂತ್ ಗಾಗಿ ಪ್ರಾರ್ಥನೆ. ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದಾರೆ. ಅವರು  ಬಹಳ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಚಾಂಪ್ ಬೇಗ ಗುಣಮುಖರಾಗಿ" ಎಂದು ಭಾರತದ ಮಾಜಿ ಬ್ಯಾಟರ್ ವಿವಿಎಸ್ ಲಕ್ಷ್ಮಣ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

"ಇಂದು ಬೆಳಿಗ್ಗೆ ರಿಷಬ್ ಪಂತ್ ಬಗ್ಗೆ ಯೋಚಿಸುತ್ತಿದ್ದೇನೆ ಮತ್ತು ಅವರು ಚೆನ್ನಾಗಿದ್ದಾರೆ ಮತ್ತು ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ ಎಂದು ಆಶಿಸುತ್ತೇನೆ" ಎಂದು ಹಿರಿಯ ಕ್ರಿಕೆಟ್ ವಿಶ್ಲೇಷಕ ಮತ್ತು ವೀಕ್ಷಕ ವಿವರಣೆಗಾರ ಹರ್ಷಾ ಭೋಗ್ಲೆ ಟ್ವೀಟ್ ಮಾಡಿದ್ದಾರೆ.

Similar News