ಮುಂದಿನ ಎಂಟು ವರ್ಷಗಳು ಭಾರತೀಯ ರೈಲ್ವೆಯ ಆಧುನಿಕತೆಯ ಪಯಣಕ್ಕೆ ಸಾಕ್ಷಿಯಾಗಲಿವೆ: ಪ್ರಧಾನಿ

Update: 2022-12-30 15:22 GMT

ಗಾಂಧಿನಗರ (ಗುಜರಾತ್),ಡಿ.30: ಇಂದು ನಸುಕಿನಲ್ಲಿ ನಿಧನರಾದ ತನ್ನ ತಾಯಿ ಹೀರಾಬೆನ್(Heeraben) ಅವರ ಅಂತ್ಯಸಂಸ್ಕಾರವನ್ನು ನಡೆಸಿದ ಕೆಲವೇ ಸಮಯದಲ್ಲಿ ಪಶ್ಚಿಮ ಬಂಗಾಳದ ಹೌರಾ ರೈಲ್ವೆ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಹೌರಾ ಮತ್ತು ಜಲಪೈಗುರಿಯನ್ನು ಸಂಪರ್ಕಿಸುವ ವಂದೇ ಭಾರತ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಿದರು. ಕೋಲ್ಕತಾದ ಜೋಕಾ-ತರತಾಲಾ ಮಾರ್ಗದಲ್ಲಿ ಮೆಟ್ರೋ ಸೇವೆಗಳಿಗೂ ಅವರು ಹಸಿರು ನಿಶಾನೆಯನ್ನು ತೋರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ,ವೈಯಕ್ತಿಕ ಕಾರಣಗಳಿಂದಾಗಿ ನಿಗದಿತ ಕಾರ್ಯಕ್ರಮದಲ್ಲಿ ಖುದ್ದಾಗಿ ಭಾಗವಹಿಸಲು ಸಾಧ್ಯವಾಗದ್ದಕ್ಕೆ ಪಶ್ಚಿಮ ಬಂಗಾಳದ ಜನತೆಯ ಕ್ಷಮೆಯನ್ನು ಯಾಚಿಸಿದರು.

ರೈಲ್ವೆಯ ಸುಧಾರಣೆಗಾಗಿ ಕೇಂದ್ರ ಸರಕಾರದ ಕಾರ್ಯಗಳನ್ನು ಪ್ರಮುಖವಾಗಿ ಬಿಂಬಿಸಿದ ಮೋದಿ,'ಭಾರತೀಯ ರೈಲ್ವೆಯ ಆಧುನೀಕರಣಕ್ಕಾಗಿ ಕೇಂದ್ರ ಸರಕಾರವು ದಾಖಲೆಯ ಹೂಡಿಕೆಯನ್ನು ಮಾಡುತ್ತಿದೆ. ಈಗ ವಂದೇ ಭಾರತ ಎಕ್ಸ್ಪ್ರೆಸ್,ತೇಜಸ್ ಎಕ್ಸ್ಪ್ರೆಸ್ ಮತ್ತು ಹಮ್ಸಫರ್ ಎಕ್ಸ್ಪ್ರೆಸ್ನಂತಹ ಆಧುನಿಕ ರೈಲುಗಳನ್ನು ಭಾರತದಲ್ಲಿ ತಯಾರಿಸಲಾಗುತ್ತಿದೆ. ಮುಂದಿನ ಎಂಟು ವರ್ಷಗಳಲ್ಲಿ ರೈಲ್ವೆಯ ಆಧುನೀಕರಣದ ಹೊಸ ಪಯಣವನ್ನು ನಾವು ನೋಡಲಿದ್ದೇವೆ 'ಎಂದು ಹೇಳಿದರು.

ಹಲವಾರು ರೈಲ್ವೆ ಯೋಜನೆಗಳು ಉದ್ಘಾಟನೆಗೊಳ್ಳುತ್ತಿರುವ ಡಿ.30ರ ಈ ದಿನವು ಐತಿಹಾಸಿಕ ಮಹತ್ವವನ್ನು ಹೊಂದಿದೆ ಎಂದ ಮೋದಿ,1943ರ ಇದೇ ದಿನ ನೇತಾಜಿ ಸುಭಾಷ್ಚಂದ್ರ ಬೋಸ್ ಅವರು ಅಂಡಮಾನ್ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಭಾರತದ ಸ್ವಾತಂತ್ರದ ಕಹಳೆಯನ್ನು ಊದಿದ್ದರು ಎಂದು ಹೇಳಿದರು. 'ಬಂಗಾಳದ ಪವಿತ್ರ ಭೂಮಿಗೆ ನಾನು ತಲೆ ಬಾಗಿ ನಮಿಸುತ್ತೇನೆ. ನಾವು ವಂದೇ ಮಾತರಂನಿಂದ ಆರಂಭಿಸಿದ್ದೆವು ಮತ್ತು ಇಂದು ವಂದೇ ಭಾರತವರೆಗೆ ತಲುಪಿದ್ದೇವೆ 'ಎಂದ ಅವರು,ನವಭಾರತವು 475 ವಂದೇ ಭಾರತ ರೈಲುಗಳ ಗುರಿಯನ್ನು ಹೊಂದಿದೆ ಎಂದು ಹೇಳಿದರು.

ಆದಿ ಗಂಗಾ ನದಿಯ ಶುದ್ಧೀಕರಣಕ್ಕಾಗಿ 600 ಕೋ.ರೂ.ಗೂ ಅಧಿಕ ವೆಚ್ಚದಲ್ಲಿ ಆಧುನಿಕ ಮೂಲಸೌಕರ್ಯವನ್ನು ಸಿದ್ಧಪಡಿಸಲಾಗುತ್ತಿದೆ ಎಂದೂ ಅವರು ತಿಳಿಸಿದರು.

ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮೋದಿ ಪ.ಬಂಗಾಳದಲ್ಲಿ 7,800 ಕೋ.ರೂ. ಅಧಿಕ ವೆಚ್ಚದ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಕಾರ್ಯಕ್ರಮದಲ್ಲಿ ನಾಲ್ಕು ರೈಲ್ವೆ ಯೋಜನೆಗಳನ್ನೂ ಅವರು ದೇಶಕ್ಕೆ ಅರ್ಪಿಸಿದರು. 

Similar News