×
Ad

ಸಮುದಾಯದೊಳಗಿನ ಐಕ್ಯತೆ ದೇವರಿಂದ ದೊರೆತ ಕೊಡುಗೆ: ಮೌಲಾನ ಖಾಲಿದ್ ರಹ್ಮಾನಿ

ಭಟ್ಕಳದ ಜಮಾಅತುಲ್ ಮುಸ್ಲಿಮೀನ್ ಸಂಸ್ಥೆಯ ಸಹಸ್ರಮಾನೋತ್ಸವ ಸಮಾರಂಭಕ್ಕೆ ಚಾಲನೆ

Update: 2023-01-04 17:25 IST

ಭಟ್ಕಳ: ಭಟ್ಕಳದ ಮುಸ್ಲಿಮರಲ್ಲಿನ  ಪರಸ್ಪರ ಒಗ್ಗಟ್ಟು ಇದು ದೇಶಕ್ಕೆ ಮಾದರಿಯಾಗಿದ್ದು, ಇಲ್ಲಿನ ಮುಸ್ಲಿಮರಿಗೆ ಇದು ದೇವರಿಂದ ದೊರೆತ ಕೊಡುಗೆಯಾಗಿದೆ ಎಂದು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಪ್ರಧಾನ ಕಾರ್ಯದರ್ಶಿ ಮೌಲಾನ ಖಾಲಿದ್ ಸೈಫುಲ್ಲಾಹ್ ರಹ್ಮಾನಿ ಹೇಳಿದರು. 

ಅವರು ಬುಧವಾರ ಭಟ್ಕಳದ ಜಾಮಿಯಾ ಮಸೀದಿ ಬಳಿ ಇರುವ ಮೈದಾನದಲ್ಲಿ ಭಟ್ಕಳ ಜಮಾಅತುಲ್ ಮುಸ್ಲಿಮೀನ್ ಇದರ ಸಹಸ್ರಮಾನೋತ್ಸವ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದು, ಬೃಹತ್ ಜನಸಮೂಹವನ್ನುದ್ದೇಶಿ ಮಾತನಾಡಿದರು. 

ಒಂದು ಮಾದರಿ ಮುಸ್ಲಿಮ್ ಗ್ರಾಮ ಹೇಗಿರಬೇಕು ಎಂಬುದನ್ನು ಭಟ್ಕಳವನ್ನು ನೋಡಿ ಕಲಿಯಬೇಕಾಗಿದೆ ಎಂದ ಅವರು ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಇಲ್ಲಿನ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಮಾಅತುಲ್ ಮುಸ್ಲಿಮೀನ್ ಸಹಸ್ರಮಾನೋತ್ಸವ ಸಮಾರಂಭ ಸಮಿತಿಯ ಅಧ್ಯಕ್ಷ ಮೊಹ್ತೆಶಮ್ ಅಬ್ದುಲ್ ರಹ್ಮಾನ್, ಸಮುದಾಯವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಇಂದಿನ ಸಮಾರಂಭವು ಯಶಸ್ವಿಯಾಗಿದೆ. ಸಹಸ್ರಮಾನೋತ್ಸವ ಆಚರಿಸುತ್ತಿರುವ ಹಿನ್ನೆಲೆಯೂ ಕೂಡ ಸಮುದಾಯವನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವುದಾಗಿದೆ ಎಂದರು. 

ಜಮಾಅತುಲ್ ಮುಸ್ಲಿಮೀನ್ ಸಂಸ್ಥೆಯ ಇತಿಹಾಸವನ್ನು ಮೆಲುಕು ಹಾಕಿದ ಜಮಾಅತಲ್ ಮುಸ್ಲಿಮೀನ್ ಸಹಸ್ರಮಾನೋತ್ಸವ ಸಮಾರಂಭ ಸಮಿತಿಯ ಸಂಚಾಲಕ ಮೌಲಾನ ಮುಹಮ್ಮದ್ ಇಲ್ಯಾಸ್ ನದ್ವಿ, ಭಟ್ಕಳದ ಮುಸ್ಲಿಮರ ಒಂದು ಸಾವಿರ ವರ್ಷದ ಇತಿಹಾಸ ಎಲ್ಲಿದೆ? ಅದರ ಪುರಾವೆಗಳೇನು? ಎಂಬಿತ್ಯಾದಿ ಪ್ರಶ್ನೆಗಳು ಹರಿದಾಡುತ್ತಿವೆ. ಅದರ ಉತ್ತರ ಕಂಡುಕೊಳ್ಳಲೆಂದು ಇಂದು ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಭಟ್ಕಳದ ಮುಸ್ಲಿಂ ನವಾಯತರು ಒಂದು ಸಾವಿರ ಮಾತ್ರವಲ್ಲ ಅದಕ್ಕೂ ಹೆಚ್ಚಿನ ಇತಿಹಾಸವನ್ನು ಹೊಂದಿದ್ದಾರೆ. ಆದರೆ ನಮಗೆ 1000 ಸಾವಿರ ವರ್ಷಗಳ ಐತಿಹಾಸಿಕ ಪುರಾವೆ ನಮ್ಮಲ್ಲಿದೆ. ಭಟ್ಕಳದ ಅತ್ಯಂತ ಪ್ರಾಚೀನ ಜಾಮಿಯಾ ಮಸೀದಿ(ಚಿನ್ನದಪಳ್ಳಿ) ಕ್ರಿ.ಶ.643ರಲ್ಲಿ ನಿರ್ಮಾಣಗೊಂಡಿರುವ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ ಎಂದ ಅವರು, ಮಸೀದಿ ನಿರ್ಮಾಣವಾದಂದಿನಿಂದಲೇ ಭಟ್ಕಳ ಜಮಾಅತುಲ್ ಮುಸ್ಲಿಮೀನ್ ಸಂಸ್ಥೆಯೂ ಕೂಡ ಹುಟ್ಟಿಕೊಂಡಿತು ಎಂದರು.

ಜಾಮಿಯಾ ಮಸೀದಿಯ ಖತೀಬ್ ಮತ್ತು ಇಮಾಮ್ ಮೌಲಾನ ಅಬ್ದುಲ್ ಅಲೀಮ್ ಖತೀಬಿ ಮಾತನಾಡಿ, ಮುಸ್ಲಿಮ್ ಸಮುದಾಯವನ್ನು ಉಮ್ಮತ್ ಎಂದು ಹೇಳಲಾಗುತ್ತದೆ. ಉಮ್ಮತ್ ಎಂದರೆ ಒಬ್ಬರು ಒನ್ನೊಬ್ಬರೊಂದಿಗೆ ಬೆಸೆದುಕೊಂಡಿರುವುದು. ಐಕ್ಯತೆಯಿಂದ ಇರುವುದು ಎಂದರ್ಥವಾಗಿದೆ. ಇಸ್ಲಾಮಿ ಶಿಕ್ಷಣವನ್ನು ಅವಲೋಕಿಸಿದರೆ ಅಲ್ಲಿ ಏಕವ್ಯಕ್ತಿಗಿಂತ ಸಾಮೂಹಿಕತೆಗೆ ಮಹತ್ವ ನೀಡಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಇಸ್ಲಾಂ ಒಗ್ಗಟ್ಟು ಮತ್ತು ಐಕ್ಯತೆಗೆ ಮಹತ್ವ ನೀಡಿದೆ ಎಂದರು. 

ಅಖಿಲ ಭಾರತ ಪಯಾಮೆ ಇನ್ಸಾನಿಯತ್(ಮಾನವೀಯತೆ ಸಂದೇಶ ವೇದಿಕೆ) ಪ್ರಧಾನ ಕಾರ್ಯದಶಿ ಮೌಲಾನ ಬಿಲಾಲ್ ಹಸನಿ ನದ್ವಿ, ಜಮಾಅತುಲ್ ಮುಸ್ಲಿಮೀನ್ ಭಟ್ಕಳ ಇದರ ಅಧ್ಯಕ್ಷ ಮುಹಮ್ಮದ್ ಶಫಿ ಶಾಬಂದ್ರಿ ಪಟೇಲ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹುಸೇನ್ ಜುಕಾಕೋ, ಡಾ.ಶಫಿ ಮಲ್ಪಾ ಮಾತನಾಡಿದರು. 

ಮೌಲಾನ ಅಬ್ದುಲ್ ನೂರ್ ನದ್ವಿ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಮರ್ಖಝಿ ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ಮದನಿ ನದ್ವಿ, ಜಾಮಿಯಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮೌಲಾ ಅಬ್ದುಲ್ ಅಲೀಮ್ ಖಾಸ್ಮಿ, ರಾಬಿತಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅತಿಖುರ್ರಹ್ಮಾನ್ ಮುನೀರಿ, ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಖಮರ್ ಸಾದಾ ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಅಧ್ಯಕ್ಷ ಮೌಲಾನ ಅಝೀಝುರ್ರಹ್ಮಾನ್ ರುಕ್ನುದ್ದೀನ್ ನದ್ವಿ ಸೇರಿದಂತೆ ಸಮುದಾಯದ ಹಲವು ಗಣ್ಯರು ಉಪಸ್ಥಿತರಿದ್ದರು. 

Similar News