ಎಲ್ಲ 60 ಶಾಸಕರ ರಾಜೀನಾಮೆಗೆ ನಾಗಾಲ್ಯಾಂಡ್ ಕಾಂಗ್ರೆಸ್ ಆಗ್ರಹ: ಕಾರಣ ಇಲ್ಲಿದೆ...

Update: 2023-01-06 11:59 GMT

ದಿಮಾಪುರ್: ನಾಗಾ ಸಮಸ್ಯೆಗೆ ರಾಜಕೀಯ ಪರಿಹಾರ ಜಾರಿಗಾಗಿ ನಾಗಾಲ್ಯಾಂಡ್ (Nagaland) ವಿಧಾನಸಭೆಯ ಎಲ್ಲ 60 ಶಾಸಕರು ರಾಜೀನಾಮೆ ಸಲ್ಲಿಸಬೇಕು ಎಂದು ನಾಗಾಲ್ಯಾಂಡ್ ಪ್ರದೇಶ ಕಾಂಗ್ರೆಸ್ (Congress) ಸಮಿತಿ ಆಗ್ರಹಿಸಿದೆ ಎಂದು ndtv.com ವರದಿ ಮಾಡಿದೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಾಗಾಲ್ಯಾಂಡ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಥೇರೀ, ಸಂಯುಕ್ತ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ ನಿಷ್ಠೆ ಏನಾದರೂ ಉಳಿದಿದ್ದರೆ, ಅವರೆಲ್ಲ ಕೇಂದ್ರ ಗೃಹ ಸಚಿವ ಅಮಿತ್ ಶಾರಿಗೆ ತಮ್ಮ ರಾಜೀನಾಮೆ ಸಲ್ಲಿಸಿ, ನಾಗಾ ಸಮಸ್ಯೆಗೆ ರಾಜಕೀಯ ಪರಿಹಾರ ಅನುಷ್ಠಾನಗೊಳಿಸಲು ಆಗ್ರಹಿಸಬೇಕು. ಏಕೆಂದರೆ, ಶೀಘ್ರದಲ್ಲಿಯೇ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಹೆಚ್ಚು ಕಾಲಾವಕಾಶ ಉಳಿದಿಲ್ಲ" ಎಂದು ಹೇಳಿದ್ದಾರೆ.

ಇದೇ ವೇಳೆ ನಾಗಾ ಜನತೆಯನ್ನು ಹೆಚ್ಚು ನಿಗೂಢವಾಗಿಡಕೂಡದು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿರುವ ಅವರು, ಇದು ಅತಿಯಾಯಿತು ಎಂದು ಕಿಡಿ ಕಾರಿದ್ದಾರೆ. "ಅವರು ನಿಜಕ್ಕೂ ಪ್ರಾಮಾಣಿಕರಾಗಿದ್ದರೆ ಅವರು ರಾಷ್ಟ್ರಪತಿ ಆಡಳಿತಕ್ಕೆ ಒತ್ತಾಯಿಸಬೇಕು ಮತ್ತು ರಾಜಕೀಯ ಪರಿಹಾರದ ಅನುಷ್ಠಾನಕ್ಕಾಗಿ ಚುನಾವಣೆಯನ್ನು ಬಹಿಷ್ಕರಿಸಬೇಕು. ಇದು ಬಿಜೆಪಿ ಮತ್ತು ರಾಜ್ಯ ಸರ್ಕಾರದ ನಿಲುವಾಗಬೇಕು" ಎಂದು ಅಭಿಪ್ರಾಯ ಪಟ್ಟಿದ್ದಾರೆ.

"ನಾಗಾಲ್ಯಾಂಡ್‌ನ ನಾಗಾ ಜನತೆಗಾಗಿ ನವೆಂಬರ್, 2017ರಲ್ಲಿ ಸ್ವೀಕೃತ ನಿಲುವಿಗೆ ನಾಗಾ ರಾಷ್ಟ್ರೀಯ ರಾಜಕೀಯ ಪಕ್ಷಗಳು ಸಹಿ ಮಾಡಿವೆ. ಅಲ್ಲಿಂದ ಇಲ್ಲಿಯವರೆಗೆ ಸ್ವಾಯತ್ತೆಯೂ ದೊರೆತಿಲ್ಲ, ಏಕತೆಯೂ ಮೂಡಿಲ್ಲ. ನಾಗಾಲ್ಯಾಂಡ್ ಮೇಲೆ ಎರಡು ಪರಿಹಾರಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲದೆ ಇರುವುದರಿಂದ ನಾವು ಮತ್ತೊಂದು ಸುತ್ತಿನ ಮಾತುಕತೆಗೆ ಕಾಯುವ ಅಗತ್ಯವಿಲ್ಲ" ಎಂದು ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಹೇಳಿದ್ದಾರೆ.

ಹೀಗಾಗಿ, ಕೇಂದ್ರ ಮತ್ತು ನಾಗಾ ರಾಷ್ಟ್ರೀಯ ರಾಜಕೀಯ ಪಕ್ಷಗಳ ನಡುವೆ ಏರ್ಪಟ್ಟಿರುವ ಒಪ್ಪಂದದಂತೆ ಸ್ವೀಕೃತ ನಿಲುವನ್ನು ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸೀಟ್‌ ಕಡಿಮೆಯಾದರೂ ಶೌಚಾಲಯ ಹೆಚ್ಚಿರಲಿ: ಏರ್‌ ಇಂಡಿಯಾ 'ಮೂತ್ರ ಪ್ರಕರಣದ' ಕುರಿತು ನೆಟ್ಟಿಗರ ವ್ಯಂಗ್ಯ

Similar News