ಶಿರಿಯಾರ: ಅಪಘಾತ ವಲಯಕ್ಕೆ ಮುಕ್ತಿ; ಪೇಟೆ ಬಳಿ ರಸ್ತೆಗೆ ಕಾಯಕಲ್ಪ

ಸುಸಜ್ಜಿತ ಸೇತುವೆ ನಿರ್ಮಾಣ

Update: 2023-01-12 15:53 GMT

ಉಡುಪಿ: ಜಿಲ್ಲೆಯ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿರಿಯಾರದಲ್ಲಿ ಹಲವು ವರ್ಷಗಳ ಬೇಡಿಕೆಯಾಗಿದ್ದ ರಸ್ತೆ ಅಭಿವೃದ್ಧಿ ಹಾಗೂ ಸೇತುವೆ ನಿರ್ಮಾಣ ಕಾಮಗಾರಿ ಮುಗಿದಿದ್ದು ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾದಂತಾಗಿದೆ.

ಬ್ರಹ್ಮಾವರದಿಂದ ಜನ್ನಾಡಿ ಮಾರ್ಗವಾಗಿ ಸಿದ್ದಾಪುರ ತಲುಪುವ ರಸ್ತೆ ಇದಾಗಿದೆ. ಶಿರಿಯಾರ ಗ್ರಾಪಂ ವ್ಯಾಪ್ತಿಗೊಳಪಡುವ ಶಿರಿಯಾರ ಮುಖ್ಯ ಪೇಟೆ ಬಳಿಯಲ್ಲಿದ್ದ ಬ್ರಿಡ್ಜ್ ವಾಹನ ಸವಾರರಿಗೆ ಕಂಟಕಪ್ರಾಯವಾಗಿತ್ತು. ಇಕ್ಕಟ್ಟಾಗಿದ್ದರಿಂದ ಎದುರುಗಡೆಯಿಂದ ಬರುವ ವಾಹನಗಳ ಸವಾರರು ಸುಗಮ ಸಂಚಾರಕ್ಕೆ ಸವಾರರು ಪರದಾಡುವಂತಾಗಿತ್ತು.

ಇದೀಗ ಈ ಪ್ರದೇಶದಲ್ಲಿ ಸೇತುವೆ ಹಾಗೂ ರಸ್ತೆ ಕಾಮಗಾರಿ ಸಂಪೂರ್ಣ ವಾಗಿ ಮುಗಿದಿದ್ದು,ಸುಗಮ ವಾಹನ ಸಂಚಾರಕ್ಕೆ ಅಣಿಯಾಗಿದೆ. ಉಡುಪಿ ಮಾರ್ಗವಾಗಿ ಬ್ರಹ್ಮಾವರ ಬಾರ್ಕೂರು ಮೂಲಕ ಶಿರಿಯಾರಕ್ಕೆ ತೆರಳಿದರೆ ಜನ್ನಾಡಿಯಿಂದ ಹಾಲಾಡಿ, ಅಮಾಸೆಬೈಲು, ಆಗುಂಬೆ ಸಹಿತ ಮಲೆನಾಡು ತಲುಪಲು ಸುಲಭ ದಾರಿಯಿದು.

ಈ ರಸ್ತೆ ಹಂತಹಂತವಾಗಿ ಅಭಿವೃದ್ಧಿಯಾದರೂ ಕೂಡ ಪ್ರಮುಖ ಪೇಟೆಯಾಗಿರುವ ಶಿರಿಯಾರ ಬಳಿಯ ಸೇತುವೆ ಮಾತ್ರ ಇದಕ್ಕೊಂದು ಕಪ್ಪು ಚುಕ್ಕೆಯಾಗಿತ್ತು.
ಇಲ್ಲಿ ಅವಘಡಗಳು ನಿತ್ಯ ಹಾಗೂ ನಿರಂತರವಾಗಿ ಸಂಭವಿಸುವುದು ಸಾಮಾನ್ಯ ಎನಿಸಿಕೊಂಡಿತ್ತು. ಸಾರ್ವಜನಿಕರು ಸಹಿತ ವಾಹನ ಸವಾರರ ಸಮಸ್ಯೆಗೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು  ಸ್ಪಂದಿಸಿ ದ್ದರು. ಅವರ ಮುತುವರ್ಜಿಯಲ್ಲಿ ಲೋಕೋಪಯೋಗಿ  ಇಲಾಖೆಯ ರಸ್ತೆ ಸುರಕ್ಷತಾ ಕಾಮಗಾರಿಯಡಿಯಲ್ಲಿ ಅಂದಾಜು 4 ಕೋಟಿ 25 ಲಕ್ಷ ವೆಚ್ಚದಲ್ಲಿ ಸೇತುವೆ ಹಾಗೂ ಇತರೇ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ.

ಸೇತುವೆ ಹಾಗೂ ರಸ್ತೆ ಕಾಮಗಾರಿ ಮುಗಿದಿದ್ದು, ಸೂಚನಾ ಫಲಕಗಳು, ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಕೆ, ರಸ್ತೆಗೆ ರಿಫ್ಲೆಕ್ಟರ್ ಅಳವಡಿಕೆ ಸಹಿತ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಊರಿಗೊಂದು ಹೆಮ್ಮೆಯ ಕೆಲಸ ಇದಾಗಿದೆ ಎಂದು ಸ್ಥಳೀಯ ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯ ವಡ್ಡರ್ಸೆ ರಾಜೀವ ಶೆಟ್ಟಿ ಸಂತಸ ವ್ಯಕ್ತಪಡಿಸುತ್ತಾ ತಿಳಿಸಿದರು.

ಶಿರಿಯಾರ ಪೇಟೆ ಸಮೀಪದ ಸೇತುವೆ ಕಿರಿದಾಗಿ, ಅಪಘಾತ ವಲಯ ವಾಗಿತ್ತು. ಸ್ಥಳೀಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಮುತುವರ್ಜಿ ಯಲ್ಲಿ ಈ ಕಾಮಗಾರಿ ಉತ್ತಮ ರೀತಿಯಲ್ಲಿ ನಡೆದಿದೆ. ಶಿರಿಯಾರ ಪೇಟೆ ಎನ್ನುವುದು ಈಗ ನಗರದಂತೆ ಕಾಣಿಸುತ್ತಿದೆ.
-ಸುಧೀಂದ್ರ ಶೆಟ್ಟಿ, ಶಿರಿಯಾರ ಗ್ರಾಪಂ ಅಧ್ಯಕ್ಷ.

Similar News