ಮಾನವೀಯತೆಯಿಂದ ಶಾಂತಿ: ಯುವ ವಿದ್ಯಾರ್ಥಿ ಸಮ್ಮೇಳನದಲ್ಲಿ ಉಡುಪಿ ಡಿಸಿ ಕೂರ್ಮರಾವ್ ಎಂ.
ಉಡುಪಿ: ಸಮಾಜದಲ್ಲಿ ಬದುಕುವ ಪ್ರತಿಯೋರ್ವನೂ ಮೊದಲು ಮಾನವನಾಗುವತ್ತ ಕಾರ್ಯಪ್ರವೃತ್ತನಾದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಹೇಳಿದ್ದಾರೆ.
ಶುಕ್ರವಾರ ಉಡುಪಿ ಚರ್ಚ್ನಲ್ಲಿ, ನೆಹರೂ ಯುವಕೇಂದ್ರ ಸಂಘಟನೆ ಉಡುಪಿ ಜಿಲ್ಲೆ, ಯುವ ವಿದ್ಯಾರ್ಥಿ ಸಂಚಲನ ಉಡುಪಿ ಧರ್ಮಕ್ಷೇತ್ರ ಇವರ ಜಂಟಿ ಆಶ್ರಯದಲ್ಲಿ ಏರ್ಪಡಿಸಲಾದ ಉಡುಪಿ ಜಿಲ್ಲಾ ಮಟ್ಟದ ಯುವ ವಿದ್ಯಾರ್ಥಿ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮನುಷ್ಯನು ಸದಾ ಕ್ರಿಯಾಶೀಲನಾಗಿರಲು ಬಯಸುತ್ತಾನೆ. ಯಾವುದಾ ದರೂ ಚಟುವಟಿಕೆಯಲ್ಲಿ ತನ್ನನ್ನೇ ತಾನು ತೊಡಗಿಸಿಕೊಳ್ಳುತ್ತಾನೆ. ಇದು ಮನುಷ್ಯರಲ್ಲಿ ಅಂತರ್ಗತವಾಗಿರುವ ಗುಣ. ವಿದ್ಯಾರ್ಥಿಗಳು ತಮ್ಮ ದಿನನಿತ್ಯದ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಶಾಲೆಯಲ್ಲಿ ಪಠ್ಯದೊಂದಿಗೆ ಕ್ರೀಡಾಲಯ ಹಾಗೂ ಗ್ರಂಥಾಲಯಗಳನ್ನು ಸಮರ್ಪಕವಾಗಿ ಬಳಸಬೇಕು. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ಜೀವನದಲ್ಲಿ ಉನ್ನತ ಗುರಿ ಹೊಂದಿರಬೇಕು. ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ನೆಹರೂ ಯುವಕೇಂದ್ರ ಸಂಘಟನೆಯ ಯುವಜನ ಅಧಿಕಾರಿ ವಿಲ್ಫ್ರೆಡ್ ಡಿ’ಸೋಜ, ಸ್ವಾಮಿ ವಿವೇಕಾನಂದರ ಜಯಂತಿಯ ಸಪ್ತಾಹದಲ್ಲಿ ನಾವಿರುವಾಗ ಅವರ ಆದರ್ಶ ಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಪ್ರಧಾನ ಮಂತ್ರಿಗಳು ಉಲ್ಲೇಖಿಸಿದಂತೆ ಈ ಶತಮಾನವು ಭಾರತದ ಯುವಜನರ ಪಾಲಿಗೆ ಉತ್ತಮ ಭವಿಷ್ಯವನ್ನು ನೀಡುವಂತಹದ್ದಾಗಿದೆ ಎಂದರು.
ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅ.ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ವಿದ್ಯಾರ್ಥಿಗಳೊಡನೆ ಸಂವಾದದಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ, ಸಮಾಜದಲ್ಲಿ ಶಾಂತಿ ನೆಲೆಗೊಳಿಸಲು ಮೂರು ಆಯಾಮಗಳಲ್ಲಿ ನಾವೆಲ್ಲರೂ ಶ್ರಮಿಸಬೇಕು. ಮೊದಲನೆಯದಾಗಿ ನಾವು ವೈಯುಕ್ತಿಕವಾಗಿ ಶಾಂತಿಜೀವಿಗಳಾಗಿರಬೇಕು, ನಂತರ ನಮ್ಮ ಕುಟುಂಬ, ನೆರೆಹೊರೆ ಹಾಗೂ ಸಮಾಜದಲ್ಲಿ ಇತರರೊಡನೆ ಶಾಂತಿಯಿಂದಿರಬೇಕು ಹಾಗೂ ಮೂರನೆಯದಾಗಿ ನಾವು ಪರಿಸರದೊಂದಿಗೆ ಶಾಂತಿ-ಸಮನ್ವಯತೆಯಲ್ಲಿರಬೇಕು ಎಂದರು.
ಸಂವಾದದಲ್ಲಿ ಸಮಾಜದಲ್ಲಿ ಶಾಂತಿ ಸ್ಥಾಪಿಸುವಲ್ಲಿ ಪೊಲೀಸ್ ಇಲಾಖೆಯ ಪಾತ್ರ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯುವ ಸುಳ್ಳುಸುದ್ದಿಗಳು, ವಿದ್ಯಾರ್ಥಿಗಳು ಸೈಬರ್ ಅಪರಾಧಗಳಿಗೆ ಬಲಿಯಾಗುವುದು, ವಿದ್ಯಾಭ್ಯಾಸದ ಒತ್ತಡ ನಿವಾರಣೆ ಕುರಿತಂತೆವಿದ್ಯಾರ್ಥಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ಕೆಥೋಲಿಕ್ ಎಜ್ಯುಕೇಶನ್ ಸೊಸೈಟಿ ಇದರ ಕಾರ್ಯದರ್ಶಿ ಫಾ. ವಿನ್ಸೆಂಟ್ ಕ್ರಾಸ್ತ, ವೈಎಸ್ಎಂನ ಮಾಜಿ ಅಂತಾರಾಷ್ಟ್ರೀಯ ನಿರ್ದೇಶಕ ವಂ. ಚಾರ್ಲ್ಸ್ ಮಿನೇಜಸ್, ವೈಎಸ್ಎಂ ಉಡುಪಿ ಧರ್ಮಕ್ಷೇತ್ರದ ನಿರ್ದೇಶಕ ವಂ. ಸ್ಟೀವನ್ ಫೆನಾರ್ಂಡಿಸ್, ಯುವಜನ ಸಂಯೋಜಕ ಡೆರಿಕ್ ಮಸ್ಕರೇನ್ಹಸ್, ಸಚೇತಕರಾದ ಲವಿನಾ ಡಿಸೋಜ, ವೈಎಸ್ಎಂ ಅಧ್ಯಕ್ಷೆ ಮೆಲ್ಡ್ರಿಯಾ ನೊರೊನ್ಹಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಾನ್ವಿ ವಿ. ಅಮೀನ್ ಕಾರ್ಯಕ್ರಮ ನಿರೂಪಿಸಿ, ಮರಿಯಾ ವಿಯೋಲಾ ಬಾರೆಟ್ಟೊ ವಂದಿಸಿದರು. ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.