ಪ್ರಧಾನಿ ಕುರಿತ BBC ಸರಣಿಯ ವಿಡಿಯೋವನ್ನು ಟ್ವೀಟ್ ಮಾಡಿದ ವಿರೋಧ ಪಕ್ಷದ ನಾಯಕರು: ಸೆನ್ಸಾರ್‌ಗೆ ಖಂಡನೆ

Update: 2023-01-23 08:46 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಕುರಿತು ಬಿಬಿಸಿ (BBC) ನಿರ್ಮಿಸಿದ್ದ ಸಾಕ್ಷ್ಯಚಿತ್ರ ಸರಣಿಯನ್ನು ಟ್ವಿಟರ್ ಮತ್ತು ಯೂಟ್ಯೂಬ್‌ನಿಂದ ತೆಗೆದಿರುವ ಕೇಂದ್ರ ಸರ್ಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡಿರುವ ವಿರೋಧ ಪಕ್ಷದ ನಾಯಕರು, ಆ ಸಾಕ್ಷ್ಯಚಿತ್ರ ಸರಣಿಯ ಎರಡು ಭಾಗಗಳನ್ನು ಹೊಂದಿರುವ ಪ್ರತ್ಯೇಕ ವಿಡಿಯೋಗಳನ್ನು ಟ್ವೀಟ್ ಮಾಡಿದ್ದಾರೆ.

ಬಿಬಿಸಿಯ 'ಭಾರತ: ಮೋದಿಯ ಪ್ರಶ್ನೆಗಳು' ಸಾಕ್ಷ್ಯಚಿತ್ರದ ಪ್ರವೇಶವನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿರುವ ಕ್ರಮದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಕಾಂಗ್ರೆಸ್ ಪಕ್ಷದ ನಾಯಕ ಗೌರವ್ ವಲ್ಲಭ್, "ಭಾರತ ಸರ್ಕಾರದ ಯೋಜನೆಗಳಾದ " 'ಮೇಕ್ ಇನ್ ಇಂಡಿಯಾ', 'ಸ್ಟಾರ್ಟ್‌ಅಪ್ ಇಂಡಿಯಾ' ಯೋಜನೆಗಳಂತೆಯೇ 'ಬ್ಲಾಕ್ ಇನ್ ಇಂಡಿಯಾ' ಯೋಜನೆಯೂ ಇದೆ. ಕಠಿಣ ಪ್ರಶ್ನೆಗಳನ್ನು ಎದುರಿಸುವುದು ಸರ್ಕಾರಕ್ಕೆ ಬೇಕಿಲ್ಲ. ಒಂದು ವೇಳೆ ಬಿಬಿಸಿಯ ಕೇಂದ್ರ ಕಚೇರಿಯೇನಾದರೂ ದಿಲ್ಲಿಯಲ್ಲಿದ್ದಿದ್ದರೆ ಇಷ್ಟೊತ್ತಿಗೆ ಜಾರಿ ನಿರ್ದೇಶನಾಲಯವು ಅವರ ಕಚೇರಿಯ ಬಾಗಿಲಲ್ಲಿರುತ್ತಿತ್ತೇನೋ?'" ಎಂದು ವ್ಯಂಗ್ಯವಾಡಿದ್ದಾರೆ.

ಈ ನಡುವೆ ಬಿಬಿಸಿಯ ಸಾಕ್ಷ್ಯಚಿತ್ರದ ವಿಡಿಯೋವನ್ನು ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರಾದ ಡೆರಿಕ್ ಒ'ಬ್ರಿಯನ್ ಹಾಗೂ ಮಹುವಾ ಮೋಯಿತ್ರಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ನಾನು ಈ ಮುನ್ನ ಹಂಚಿಕೊಂಡಿದ್ದ ಸಾಕ್ಷ್ಯಚಿತ್ರದ ಕೊಂಡಿಯನ್ನು ಬಳಸಿಕೊಂಡು ಲಕ್ಷಾಂತರ ವೀಕ್ಷಕರು ಆ ಸಾಕ್ಷ್ಯಚಿತ್ರವನ್ನು ವೀಕ್ಷಿಸಿದ್ದರು. ಆದರೆ, ಆ ಟ್ವೀಟ್ ಅನ್ನು ಟ್ವಿಟರ್ ತೆಗೆದು ಹಾಕಿದ್ದು, ಇದು ಸೆನ್ಸಾರ್‌ಶಿಪ್ ಆಗಿದೆ ಎಂದು ಟೀಕಿಸಿದ್ದಾರೆ. ಅಲ್ಲದೆ, ಅವರ ಮತ್ತೊಂದು ಟ್ವೀಟ್ ಕೇವಲ ಮೂರು ದಿನಗಳ ಕಾಲ ಮಾತ್ರ ವೀಕ್ಷಣೆಗೆ ಲಭ್ಯವಿತ್ತು ಎಂದು ಆರೋಪಿಸಿದ್ದಾರೆ.

ಲೋಕಸಭೆಯಲ್ಲಿ ತಮ್ಮ ತೀಕ್ಣ ಭಾಷಣಗಳಿಗೆ ಹೆಸರುವಾಸಿಯಾಗಿರುವ ಮತ್ತೊಬ್ಬ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಹುವಾ ಮೋಯಿತ್ರಾ, ಸರ್ಕಾರ ಅಸುರಕ್ಷಿತತೆ ಅನುಭವಿಸುತ್ತಿದೆ ಎಂದು ಘೋಷಿಸಿದ್ದು, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಚಕ್ರವರ್ತಿ ಮತ್ತು ಅವರ ಹಿಂಬಾಲಕರು ಅಸುರಕ್ಷಿತತೆ ಅನುಭವಿಸುತ್ತಿರುವುದು ನಾಚಿಕೆಗೇಡು ಎಂದು ಟೀಕಿಸಿ ಟ್ವೀಟ್ ಮಾಡಿದ್ದಾರೆ. ಕ್ಷಮಿಸಿ, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಸೆನ್ಸಾರ್‌ಶಿಪ್ ಅನ್ನು ಒಪ್ಪಿಕೊಳ್ಳಲು ನಾನು ಆಯ್ಕೆಯಾಗಿಲ್ಲ. ಇಲ್ಲಿದೆ ಸಾಕ್ಷ್ಯಚಿತ್ರದ ಕೊಂಡಿ. ನೀವು ಬಿಡುವಿದ್ದಾಗ ಇದನ್ನು ವೀಕ್ಷಿಸಿ ಎಂದು ಮತ್ತೊಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಆದರೆ, ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು, "ಕೆಲವು ಮಂದಿ ಈಗಲೂ ವಸಾಹತುಶಾಹಿ ನಂಜಿನಿಂದ ಹೊರ ಬಂದಿಲ್ಲ. ಅವರು ಬಿಬಿಸಿಯನ್ನು ಭಾರತದ ಸುಪ್ರೀಂಕೋರ್ಟ್‌ಗಿಂತಲೂ ಉನ್ನತ ಎಂದು ಭಾವಿಸುತ್ತಿದ್ದು, ತಮ್ಮ ಭೂತಕಾಲದ ನೈತಿಕ ಗುರುಗಳನ್ನು ಸಂಪ್ರೀತಗೊಳಿಸಲು ದೇಶದ ಘನತೆ ಹಾಗೂ ವ್ಯಕ್ತಿತ್ವವನ್ನು ಕುಗ್ಗಿಸಲು ಮುಂದಾಗಿದ್ದಾರೆ" ಎಂದು ತಮ್ಮ ಹಿಂದಿಯಲ್ಲಿನ ಟ್ವೀಟ್‌ನಲ್ಲಿ ಕಿಡಿ ಕಾರಿದ್ದಾರೆ.

ಇದಕ್ಕೂ ಮುನ್ನ ಬಿಬಿಸಿಯ ಸರಣಿ ಸಾಕ್ಷ್ಯಚಿತ್ರದಿಂದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅಂತರ ಕಾಯ್ದುಕೊಂಡಿದ್ದರು. ಭಾರತದ ಪ್ರಧಾನಿಯ ವ್ಯಕ್ತಿತ್ವ ಹರಣವನ್ನು ತಾನು ಒಪ್ಪುವುದಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ: ಭಯೋತ್ಪಾದನೆ ನಿಗ್ರಹ ಅಣಕು ಕಾರ್ಯಾಚರಣೆ; ನಿರ್ದಿಷ್ಟ ಸಮುದಾಯದ ಕುರಿತು ಘೋಷಣೆ ಕೂಗಿದ ಪೊಲೀಸ್ ಸಿಬ್ಬಂದಿ

Similar News