×
Ad

ಟಿಎಂಸಿ ವಕ್ತಾರ ಸಾಕೇತ್ ಗೋಖಲೆಯಿಂದ ಸಾರ್ವಜನಿಕರಿಂದ ಸಂಗ್ರಹಿಸಿದ ಹಣ ದುರ್ಬಳಕೆ: ಈಡಿ ಪ್ರತಿಪಾದನೆ

Update: 2023-01-26 14:12 IST

ಹೊಸದಿಲ್ಲಿ: ಸಾಮಾಜಿಕ ಸೇವೆಗೆಂದು ಸಾರ್ವಜನಿಕರಿಂದ ಸಂಗ್ರಹಿಸಿದ್ದ ಸುಮಾರು 1.07 ಕೋಟಿ ಮೊತ್ತದ ನಿಧಿಯನ್ನು ತೃಣಮೂಲ ಕಾಂಗ್ರೆಸ್ ಪಕ್ಷದ (TMC) ವಕ್ತಾರ ಸಾಕೇತ್ ಗೋಖಲೆ (Saket Gokhale)  ವೈಯಕ್ತಿಕ ಖರ್ಚಿಗೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಪ್ರತಿಪಾದಿಸಿದೆ. ಈ ಮೊತ್ತವು ರಾಹುಲ್ ಗಾಂಧಿ ನಿಕಟವರ್ತಿಯೊಬ್ಬರು ನೀಡಿದ್ದ ರೂ. 23 ಲಕ್ಷ ನಗದನ್ನೂ ಒಳಗೊಂಡಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ ಎಂದು ndtv.com ವರದಿ ಮಾಡಿದೆ.

ನಿಧಿ ದುರ್ಬಳಕೆಯ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು, 35 ವರ್ಷದ ಸಾಕೇತ್ ಗೋಖಲೆಯನ್ನು ಸಾಬರಮತಿ ಜೈಲಿನಿಂದ ಬಂಧಿಸಿದ ನಂತರ, ಬುಧವಾರದಂದು ಗುಜರಾತ್ ನ್ಯಾಯಾಲಯವೊಂದರ ಮುಂದೆ ಮೇಲಿನಂತೆ ಪ್ರತಿಪಾದಿಸಿದೆ.

ಸಾರ್ವಜನಿಕರಿಂದ ನಿಧಿ ಸಂಗ್ರಹ ಉಪಕ್ರಮದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಎರಡು ಬಾರಿ ಸಾಕೇತ್ ಗೋಖಲೆಯನ್ನು ಬಂಧಿಸಿದ್ದ ಗುಜರಾತ್ ಪೊಲೀಸರು, ಅವರನ್ನು ಸೆರೆವಾಸದಲ್ಲಿಟ್ಟಿದ್ದರು. ಜನವರಿ 31ರವರೆಗೆ ಸಾಕೇತ್ ಗೋಖಲೆಯನ್ನು ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿ, ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಇದರೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನಿಕಟವರ್ತಿಯಾಗಿರುವ ಅಲಂಕಾರ್ ಸವಾಯಿ ಎಂಬುವವರಿಗೆ ಈ ಸಂಬಂಧ ಜಾರಿ ನಿರ್ದೇಶನಾಲಯವು ಸಮನ್ಸ್ ಜಾರಿಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ವಿಚಾರಣೆಯ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮವನ್ನು ನಿರ್ವಹಿಸಲು ಅಲಂಕಾರ್ ಸವಾಯಿ ನನಗೆ ರೂ. 23.54 ಲಕ್ಷ ನೀಡಿದ್ದರು ಎಂದು ಸಾಕೇತ್ ಗೋಖಲೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ. 

2019-2022ರ ಅವಧಿಯಲ್ಲಿ ಸಾರ್ವಜನಿಕ ಸಂಗ್ರಹದ ಮೂಲಕ ರೂ. 1.07 ಕೋಟಿ ನಿಧಿ ಸಂಗ್ರಹಿಸಿರುವ ಸಾಕೇತ್ ಗೋಖಲೆ, ಆ ಮೊತ್ತವನ್ನು ವೈಯಕ್ತಿಕ ಖರ್ಚಿಗಾಗಿ ಬಳಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಕಾಂಗ್ರೆಸ್‌ನಿಂದ ಲೋಕಸಭಾ ಟಿಕೆಟ್‌ ಏಕೆ ನಿರೀಕ್ಷಿಸಬಾರದು ಎಂದ ಕಮಲ್ ಹಾಸನ್

Similar News