ಮಗಳ ಮದುವೆಗೆ 1 ಕೋಟಿ ರೂ‌. ಖರ್ಚು ಮಾಡಿ: ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿದ ವ್ಯಕ್ತಿ ವೀಡಿಯೊದಲ್ಲಿ ಹೇಳಿದ್ದೇನು?

Update: 2023-01-29 14:12 GMT

ಭೋಪಾಲ್: ತನ್ನ ಪತ್ನಿಯನ್ನು ಕೊಂದು, ತಾನೂ ಗುಂಡಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ನಗರದ ಪ್ರಮುಖ ಉದ್ಯಮಿಯೊಬ್ಬರು, ಅದಕ್ಕೂ ಮುನ್ನ "ದಯವಿಟ್ಟು ನನ್ನ ಮಕ್ಕಳಿಗಾಗಿ ಮತ್ತು ನನ್ನ ಮಗಳ ಮದುವೆಗಾಗಿ ನನ್ನ ಹಣವನ್ನು ಮರಳಿಸಿ. ಆಕೆಯ ವಿವಾಹವನ್ನು ರೂ. 50 ಲಕ್ಷದಿಂದ ರೂ. 1 ಕೋಟಿ ವೆಚ್ಚ ಮಾಡಿ ನೆರವೇರಿಸಿ. ನನ್ನ ಮಗಳ ಹೆಸರಿನಲ್ಲಿ ಲಾಕರ್‌ನಲ್ಲಿ ರೂ. 29 ಲಕ್ಷವಿದೆ. ನಾನು ಮತ್ತು ನನ್ನ ಪತ್ನಿ ಬದುಕಲು ಸಾಧ್ಯವಿಲ್ಲದೆ ಇರುವುದರಿಂದ ಲೋಕ ತೊರೆಯುತ್ತಿದ್ದೇವೆ. ನನ್ನ ಮಗಳು ಹಾಗೂ ಮಕ್ಕಳಿಗಾಗಿ ಸಾಕಷ್ಟು ಆಭರಣಗಳಿವೆ. ನನ್ನನ್ನು ಕ್ಷಮಿಸಿ" ಎಂದು ಅಳುತ್ತಾ ವಿಡಿಯೊವೊಂದನ್ನು ಚಿತ್ರೀಕರಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ ಎಂದು ndtv.com ವರದಿ ಮಾಡಿದೆ.

ಮಧ್ಯಪ್ರದೇಶದ ಪನ್ನಾ ನಗರದ ಪ್ರಮುಖ ಜವಳಿ ವ್ಯಾಪಾರೋದ್ಯಮಿಯಾದ ಸಂಜಯ್ ಸೇಠ್, ತನ್ನ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬಗೇಶ್ವರ್ ಧಾಮ್ ಸ್ವಾಮೀಜಿಗೂ ಪತ್ರ ಬರೆದಿದ್ದಾರೆ. "ಗುರೂಜಿ, ನನ್ನನ್ನು ಕ್ಷಮಿಸಿ ಬಿಡಿ. ನನಗೆ ಮರು ಜನ್ಮವೇನಾದರೂ ದೊರೆತರೆ, ನಾನು ನಿಮ್ಮ ನಿಷ್ಠಾವಂತ ಭಕ್ತನಾಗಿಯೇ ಅದನ್ನು ಪಡೆಯುತ್ತೇನೆ" ಎಂದೂ ಪತ್ರ ಬರೆದಿಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪನ್ನಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮರಾಜ್ ಮೀನಾ, ಮೇಲ್ನೋಟಕ್ಕೆ ಈ ಘಟನೆಯು ಕೌಟುಂಬಿಕ ಜಗಳದಿಂದ ನಡೆದಿರುವಂತೆ ಕಾಣುತ್ತಿದೆ. ನಮ್ಮ ತನಿಖೆಯು ಪ್ರಗತಿಯಲ್ಲಿದೆ. ಸದ್ಯಕ್ಕೆ ಈ ಘಟನೆಯಲ್ಲಿ ಹೊರಗಿನವರಾರೂ ಭಾಗಿಯಾಗಿದ್ದಂತೆ ಕಂಡು ಬಂದಿಲ್ಲ. ದಂಪತಿಗಳು ಮಾತ್ರ ಕೋಣೆಯಲ್ಲಿ ಏಕಾಂಗಿಯಾಗಿದ್ದರು. ಈ ಘಟನೆ ಕುರಿತು ನಾವು ಎಲ್ಲ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಬಿಸಿ ಸಾಕ್ಷ್ಯಚಿತ್ರ ವಿವಾದ: ಒಡಕು ಮೂಡಿಸುವ ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡಿದ ಪ್ರಧಾನಿ

Similar News