ಹೆಸರು ಬದಲಾವಣೆಯಿಂದ ದೇಶದ ಸಮಸ್ಯೆ ಪರಿಹಾರವಾಗದು: ಮಾಯಾವತಿ

Update: 2023-01-29 17:49 GMT

ಹೊಸದಿಲ್ಲಿ, ಜ. 29: ಹೆಸರು ಬದಲಾವಣೆಯಿಂದ ದೇಶದ ಹಾಗೂ ಇಲ್ಲಿನ ಜನರ ಸಮಸ್ಯೆ ಪರಿಹಾರವಾಗದು ಎಂದು ಬಿಎಸ್ಪಿ(BSP) ವರಿಷ್ಠೆ ಮಾಯಾವತಿ (Mayawati) ರವಿವಾರ ಹೇಳಿದ್ದಾರೆ. ರಾಷ್ಟ್ರಪತಿ ಭವನದಲ್ಲಿರುವ ಮೊಗಲ್ ಉದ್ಯಾನ(Mughal Garden)ದ ಹೆಸರನ್ನು ಅಮೃತ್ ಉದ್ಯಾನ(Amrith Garden) ಎಂದು ಬದಲಾಯಿಸಿದ ಒಂದು ದಿನದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

‘‘ಬೆರಳೆಣಿಕೆಯಷ್ಟು ಜನರನ್ನು ಹೊರತುಪಡಿಸಿ ದೇಶದ ಎಲ್ಲ ಜನರು ಬೆಲೆ ಏರಿಕೆ, ಬಡತನ ಹಾಗೂ ನಿರುದ್ಯೋಗದ ಕಾರಣದಿಂದ ಒತ್ತಡದ ಜೀವನ ನಡೆಸುತ್ತಿದ್ದಾರೆ. ಈ ಸಮಸ್ಯೆಗಳನ್ನು ಪರಿಹರಿಸಲು ಗಮನ ಕೇಂದ್ರೀಕರಿಸುವ ಬದಲು, ಮತಾಂತರ, ಮರು ನಾಮಕರಣ, ಬಹಿಷ್ಕಾರ, ದ್ವೇಷ ಭಾಷಣದ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಅನ್ಯಾಯ ಮತ್ತು ವಿಷಾದಕರ’’ ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.

ಇನ್ನೊಂದು ಟ್ವೀಟ್ ನಲ್ಲಿ ಅವರು, ‘‘ರಾಷ್ಟ್ರಪತಿ ಭವನದಲ್ಲಿರುವ ಪ್ರಖ್ಯಾತ ಮೊಗಲ್ ಉದ್ಯಾನದ ಹೆಸರು ಬದಲಾಯಿಸಿದರೆ ದೇಶ ಹಾಗೂ ಇಲ್ಲಿನ ಕೋಟ್ಯಂತರ ಜನರು ಎದುರಿಸುತ್ತಿರುವ ಸಮಸ್ಯೆಗಳು ಪರಿಹಾರವಾಗುವುದೇ ?’’ ಎಂದು ಪ್ರಶ್ನಿಸಿದ್ದಾರೆ. 

Similar News