ಜಮ್ಮಾ, ಕಾಣೆ, ಬಾಣೆ, ಬೆಟ್ಟ, ಹಾಡಿ ಜಮೀನು ಮಂಜೂರು ಮಾಡಲು ಕಾಯ್ದೆಗೆ ತಿದ್ದುಪಡಿ

ಸಚಿವ ಸಂಪುಟ ಉಪ ಸಮಿತಿ ಸೂಚನೆ

Update: 2023-01-29 18:50 GMT

ಬೆಂಗಳೂರು, ಜ.30: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಮ್ಮಾ, ಕಾಣೆ, ಬಾಣೆ ಜಮೀನು, ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಟ್ಟ, ಹಾಡಿ, ಮೈಸೂರು ಪ್ರಾಂತ್ಯದಲ್ಲಿ ಕಾಣೆ, ಸೊಪ್ಪಿನಬೆಟ್ಟ, ಕೊಡಗು ಜಿಲ್ಲೆಯಲ್ಲಿ ಜಮ್ಮಾ ಮತ್ತು ಬಾಣೆ ಜಮೀನುಗಳನ್ನು ಅಧಿಬೋಗದಾರರಿಗೆ ಮಂಜೂರು ಮಾಡುವ ಸಂಬಂಧ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 79(2)ಕ್ಕೆ ತಿದ್ದುಪಡಿ ತರಲು ಸಚಿವ ಸಂಪುಟ ಉಪ ಸಮಿತಿ ಸೂಚಿಸಿದೆ.

ಗೋಮಾಳ, ಗಾಯರಾಣ, ಹುಲ್ಲಬನ್ನಿ, ಸೊಪ್ಪಿನ ಬೆಟ್ಟ ಸೇರಿದಂತೆ ಗ್ರಾಮೀಣ ಪ್ರದೇಶದ ರ್ಕಾರಿ ಜಮೀನುಗಳನ್ನು ಮಂಜೂರು ಮಾಡುವ ಕುರಿತು ನೀತಿ ರೂಪಿಸಲು ರಚಿಸಲು ಕಂದಾಯ ಸಚಿವ ಆರ್.ಅಶೋಕ್ ಅವರ ಅಧ್ಯಕ್ಷತೆಯಲ್ಲಿ ರಚಿಸಿರುವ ಸಚಿವ ಸಂಪುಟ ಉಪ ಸಮಿತಿಯು 2023ರ ಜನವರಿ 24ರಂದು ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.  ಸಚಿವ ಸಂಪುಟ ಉಪ ಸಮಿತಿಯ ಸಭೆ ನಡವಳಿಗಳು (ಸಂಖ್ಯೆ ಆರ್‌ಡಿ 05 ಎಲ್‌ಜಿಪಿ 2022)  "the-file.in''ಗೆ ಲಭ್ಯವಾಗಿವೆ.

‘ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 79(2) ರಲ್ಲಿರುವ ವಿಶೇಷಾಧಿಕಾರಗಳನ್ನು ಮುಂದು ವರಿಸುತ್ತಾ ಅವುಗಳನ್ನು ಅಧಿಭೋಗದಾರರಿಗೆ ಅವರ ಹಿಡುವಳಿ ಜಮೀನನ್ನು ಹೊರತುಪಡಿಸಿ 5 ಎಕರೆಗೆ ಮೀರದಂತೆ ಸರಕಾರವು ನಿರ್ಧರಿಸಬಹುದಾದಂತಹ ಗುತ್ತಿಗೆ ಮೌಲ್ಯವನ್ನು ವಿಧಿಸಿ 30 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲು ಅನುವಾಗುವಂತೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964ಕ್ಕೆ ತಿದ್ದುಪಡಿ ತರಲು ಕ್ರಮ ವಹಿಸಬೇಕು,’ ಎಂದು ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಕಂದಾಯ ಸಚಿವ ಆರ್ ಅಶೋಕ್ ಅವರು ಇಲಾಖೆಯ ಅಧಿಕಾರಿಗಳಿಗೆ ನಿದೇಶಿಸಿರುವುದು ಸಭೆ ನಡವಳಿಯಿಂದ ತಿಳಿದು ಬಂದಿದೆ.

 ಅದೇ ರೀತಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 79(2)ರ ಅಡಿ ಯಾವುದೇ ಭೂಮಿಯನ್ನು ಅರಣ್ಯವೆಂದು ಸ್ವೀಕರಿಸಲ್ಪಟ್ಟಿಲ್ಲ. ಇದೇ ಕಾಯ್ದೆ ಕಲಂ 94 ಬಿ ಅಡಿ ಅನಧಿಕೃತ ಸಾಗುವಳಿದಾರರಿಗೆ ಸರಕಾರಿ ಜಮೀನುಗಳನ್ನು ಮಂಜೂರು ಮಾಡುವಾಗ ಕಲಂ 94 ಬಿ (3)ರಡಿ ಅರಣ್ಯ ಭೂಮಿಯೆಂದು ಸ್ವೀಕೃತವಾಗಿರುವ 79ನೇ ಪ್ರಕರಣದ ಎರಡನೇ ಉಪ ಪ್ರಕರಣದದಲ್ಲಿ ಯಾವುದೇ ಭೂಮಿಯನ್ನು ಹೊರತುಪಡಿಸಿ ಇತರ ಅರಣ್ಯ ಭೂಮಿಗೆ ಅನ್ವಯಿಸತಕ್ಕದ್ದಲ್ಲ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಕಲಂ 79(2) ರಡಿಯಲ್ಲಿ ಉಲ್ಲೇಖಿಸಿರುವ ಎಲ್ಲ ಭೂಮಿಗಳನ್ನು ಅರಣ್ಯ ಎಂದು ಪರಿಗಣಿಸಲು ಬರುವುದಿಲ್ಲ ಎಂದು ಭೂಮಾಪನ ಕಂದಾಯ ವ್ಯವಸ್ಥೆ ಹಾಗೂ ಭೂ ದಾಖಲೆಗಳ ಆಯುಕ್ತರು ಸಭೆ ಗಮನಕ್ಕೆ ತಂದಿರುವುದು ನಡವಳಿಯಿಂದ ಗೊತ್ತಾಗಿದೆ.

ಆದರೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅಧಿಕಾರಿಗಳು ‘ಕರ್ನಾಟಕ ಭೂ ಕಂದಾಯ ಕಾಯ್ದೆ 3 1964ರ ಕಲಂ 94ಬಿ (3)ರಡಿ ಅರಣ್ಯ ಭೂಮಿಯೆಂದು ಸ್ವೀಕೃತವಾದ 79ನೇ ಪ್ರಕರಣದ ಉಪ ಪ್ರಕರಣದಡಿಯಲ್ಲಿ ತಿಳಿಸಿರುವುದರಿಂದ ಸದರಿ ಭೂಮಿಯ ಮಂಜೂರಾತಿಗೆ ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಅಡಿಯಲ್ಲಿ ಕೇಂದ್ರ ಸರಕಾರದ ಪೂರ್ವನುಮೋದನೆ ಅವಶ್ಯಕತೆ ಇದೆ,’ ಎಂದು ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.

ಜಮ್ಮಾ, ಬಾಣೆ, ಬೆಟ್ಟ, ಸೊಪ್ಪಿನ ಬೆಟ್ಟ, ಕಾಣೆಯಂತಹ ವಿಶೇಷ ಹಕ್ಕಿನ ಜಮೀನುಗಳನ್ನು ಅಧಿಬೋಗದಾರರಿಗೆ ಮಂಜೂರು ಮಾಡಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 79(2)ರಲ್ಲಿ ವಿಶೇಷಾಧಿಕಾರ ನೀಡಲಾಗಿದೆ.

ಕುಮ್ಕಿ, ಕಾನು, ಬೆಟ್ಟ, ಸೊಪ್ಪಿನಬೆಟ್ಟ, ಜುಮ್ಮಬಾನೆ, ಇತರ ಸರಕಾರಗಳ ಜಮೀನು ಮಂಜೂರಾತಿಗೆ ನಿರ್ಬಂಧ ವಿಧಿಸಿ ಕಂದಾಯ ಇಲಾಖೆ ಕಾರ್ಯದರ್ಶಿ 2010 ಮೇ 3ರಂದು ಹೊರಡಿಸಿದ ತಾತ್ಕಾಲಿಕ ಆದೇಶ ಹೊರಡಿಸಿದ್ದರು. ಕರ್ನಾಟಕ ಭೂ ಕಂದಾಯ ಕಾಯಿದೆ 1964ರ ಕಲಂ 79 (2)ರಲ್ಲಿ ಕುಮ್ಕಿ, ಕಾನು, ಬೆಟ್ಟ, ಸೊಪ್ಪಿನಬೆಟ್ಟ, ಜುಮ್ಮಾಬಾನೆ ರೈತರ ವಿಶೇಷ ಹಕ್ಕುಳ್ಳ ಜಮೀನು ಪ್ರದೇಶವಾಗಿದೆ. ನಿವೇಶನ, ಸಾಗುವಳಿ ಭೂ ಮಂಜೂರಾತಿ ಕೋರಿದ ಅರ್ಜಿ ಅವಧಿ 5 ವರ್ಷ ಮೀರಿದರೆ ನಿಯಮದ ಅನ್ವಯ ವಜಾಗೊಳಿಸಬೇಕು.

Similar News