ಕಾರ್ಕಳ: ಬಸ್ ನಿಲ್ದಾಣದಲ್ಲೇ ಹೊಡೆದಾಡಿಕೊಂಡ ಚಾಲಕ-ನಿರ್ವಾಹಕ

Update: 2023-01-30 10:23 GMT

ಕಾರ್ಕಳ: ಸರಕಾರಿ ಬಸ್ ಚಾಲಕ ಮತ್ತು ಖಾಸಗಿ ಬಸ್ ಕಂಡಕ್ಟರ್ ನಡುವೆ ಜಗಳ ನಡೆದು ಕೊನೆಗೆ ಇಬ್ಬರೂ ಬಸ್ ನಿಲ್ದಾಣದಲ್ಲೇ ಹೊಡೆದಾಡಿಕೊಂಡ ಘಟನೆ ಕಾರ್ಕಳ ಬಸ್ ನಿಲ್ದಾಣದಲ್ಲಿ ನಡೆದಿದೆ.

ಸಾರ್ವಜನಿಕ ಸ್ಥಳದಲ್ಲೇ ನಡೆದ ಈ ಇಬ್ಬರ ಜಗಳವನ್ನು ಬಸ್ ನಿಲ್ದಾಣದಲ್ಲಿದ್ದ ನೂರಾರು ಜನ ದಂಗಾಗಿ ನೋಡಿದ್ದಾರೆ. ಸರಕಾರಿ ಬಸ್ ಚಾಲಕ ಮೊಹಮ್ಮದ್ ಸೈಯದ್ ಮತ್ತು ಖಾಸಗಿ ಬಸ್ ಕಂಡಕ್ಟರ್ ನಡುವೆ ಈ ಹೊಡೆದಾಟ ನಡೆದಿದೆ. ಮೊದಲು ಬಸ್‌ಗೆ ಸೈಡ್ ಕೊಡುವ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ಶುರುವಾಗಿದೆ. ಈ ವೇಳೆ ಸರಕಾರಿ ಬಸ್ ಚಾಲಕನಿಗೆ ಖಾಸಗಿ ಬಸ್ ಕಂಡಕ್ಟರ್ ಅವಾಚ್ಯವಾಗಿ ನಿಂದಿಸಿದ್ದಾನೆ ಎನ್ನಲಾಗಿದೆ.

ಕೋಪಗೊಂಡ ಚಾಲಕ ಸೈಯದ್, ಖಾಸಗಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ. ಸದ್ಯ ಇವರ ಗಲಾಟೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Similar News