ಕೇಂದ್ರದಿಂದ ಎಲ್ಐಸಿಯನ್ನು ದೋಚಲು ಉದ್ಯಮಿ ಮಿತ್ರರಿಗೆ ಅವಕಾಶ: ಕಾಂಗ್ರೆಸ್ ಆರೋಪ
Update: 2023-01-30 15:58 GMT
ಹೊಸದಿಲ್ಲಿ, ಜ.30: ಹಿಂಡನ್ಬರ್ಗ್ ರೀಸರ್ಚ್ ವರದಿ ಮತ್ತು ಅದಾನಿ ಗ್ರೂಪ್ ನಲ್ಲಿ ಎಲ್ಐಸಿಯ ಹೂಡಿಕೆ ಕುರಿತು ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಕಟುವಾಗಿ ಟೀಕಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಮೋದಿ ಸರಕಾರವು ಎಲ್ಐಸಿಯನ್ನು ಕೊಳ್ಳೆ ಹೊಡೆಯಲು ತನ್ನ ಉದ್ಯಮಿ ಮಿತ್ರರಿಗೆ ಅವಕಾಶ ಕಲ್ಪಿಸಿದೆ ಎಂದು ಹೇಳಿದ್ದಾರೆ.
ದೇಶದ ಅತ್ಯಂತ ದೊಡ್ಡ ಜೀವವಿಮೆ ಸಂಸ್ಥೆಯಾಗಿರುವ ಎಲ್ಐಸಿಯು ಹಿಂಡನ್ಬರ್ಗ್ ವರದಿ ಪ್ರಕಟಗೊಂಡ ಎರಡೇ ದಿನಗಳಲ್ಲಿ 22,442 ಕೋ.ರೂ.ಗಳನ್ನು ಕಳೆದುಕೊಂಡಿದ್ದರೂ ಅದಾನಿ ಗ್ರೂಪ್ ಕಂಪನಿಗಳಲ್ಲಿ ಹೂಡಿಕೆಯನ್ನು ಮುಂದುವರಿಸಿದೆ ಎಂದು ಖರ್ಗೆ ಟ್ವೀಟಿಸಿದ್ದಾರೆ.
ಅದಾನಿ ಗ್ರೂಪ್ ನಲ್ಲಿ ಹೂಡಿಕೆಯಿಂದಾಗಿ ಎಲ್ಐಸಿ ಮತ್ತು ಎಸ್ಬಿಐ ಮಾರುಕಟ್ಟೆ ಬಂಡವಾಳದಲ್ಲಿ 78,000 ಕೋ.ರೂ.ಗೂ ಅಧಿಕ ಹಣವನ್ನು ಕಳೆದುಕೊಂಡಿದ್ದರೂ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ತನಿಖಾ ಸಂಸ್ಥೆಗಳ ಮೌನವನ್ನು ಕಾಂಗ್ರೆಸ್ ಪ್ರಶ್ನಿಸಿದೆ.