ಶರಣ್ ಪಂಪ್ ವೆಲ್ ಸಮಾಜಕ್ಕೆ ಅಗತ್ಯ ಇರುವ ಕೆಲಸ ಮಾಡಲಿ: ಸದಾಶಿವ ಉಳ್ಳಾಲ್

Update: 2023-01-31 09:09 GMT

ಉಳ್ಳಾಲ: ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ವಿವಾದಾತ್ಮಕ ಹೇಳಿಕೆ ನೀಡಿ ಸಮಾಜದಲ್ಲಿ ಅರಾಜಕತೆ ಸೃಷ್ಟಿ ಮಾಡಲು ಹೊರಟಿದ್ದಾರೆ. ಈ ರೀತಿಯ ಹೇಳಿಕೆ ಸೌಹಾರ್ದದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಹೇಳಿಕೆ  ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕಾಗಿಲ್ಲ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.

ಅವರು ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ಸೌಹಾರ್ದ ಬದುಕನ್ನು ಬಯಸುತ್ತೇವೆ. ಶರಣ್ ಪಂಪ್ ವೆಲ್ ಕೆಲವು ಹೇಳಿಕೆಗಳನ್ನು ಗಮನಿಸಿದರೆ ಅವರು ಹಿಂದೂ ಸಂಘಟನೆಗಳನ್ನು ಗುತ್ತಿಗೆ ಪಡೆದ ರೀತಿಯಲ್ಲಿ ಮಾತನಾಡುತ್ತಾರೆ. ಸಮಾಜಕ್ಕೆ ಈಗ ಏನು ಅಗತ್ಯ ಇದೆಯೋ ಅದನ್ನು ಅವರು ಮಾಡಲಿ. ಅದುಬಿಟ್ಟು ಸಮಾಜದಲ್ಲಿ ವಿಷಬೀಜ ಬಿತ್ತುವ ರೀತಿಯಲ್ಲಿ ಅವರು ಮಾತನಾಡುವುದು ಖಂಡನೀಯ ಎಂದರು.

ಅವರು ಮಂಗಳೂರು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಇದ್ದರೆ ಸ್ಪರ್ಧಿಸಲಿ. ಇದಕ್ಕೆ ನಮ್ಮ ವಿರೋಧ ಇಲ್ಲ. ಸಮಾಜದಲ್ಲಿ ಒಡಕನ್ನುಂಟು ಮಾಡುವ ಹೇಳಿಕೆ ನೀಡುವುದು ಬೇಡ. ಶರಣ್ ಪಂಪ್ ವೆಲ್ ಇಂತಹ ಹೇಳಿಕೆ ನೀಡುವ ಬದಲು ಇತ್ತೀಚೆಗೆ ಬಲಿಯಾದ ಪರೇಶ್ ಮೇಸ್ತ ಅವರ ಮನೆಗೆ ತೆರಳಿ ಸಾಂತ್ವನ ಹೇಳುವ ಕೆಲಸ ಮಾಡಲಿ ಎಂದರು.

ಕಾಂಗ್ರೆಸ್ ಮುಖಂಡ ಸುರೇಶ್ ಭಟ್ ನಗರ್ ಮಾತನಾಡಿ, ಶರಣ್ ಪಂಪ್ ವೆಲ್ ವಿವಾದಾತ್ಮಕ ಹೇಳಿಕೆ ನೀಡಿದ್ದು ಖಂಡನೀಯ. ಹೇಳಿಕೆ ಕೊಡಲು ಇಷ್ಟ ಇದ್ದರೆ ಅಭಿವೃದ್ಧಿ ಬಗೆ ಹೇಳಿಕೆ ಕೊಡಲಿ ಎಂದು ಹೇಳಿದರು.

ಸುದ್ದಿ ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ರಾದ ದೀಪಕ್ ಪಿಲಾರ್  ಪುರುಷೋತ್ತಮ ಪಿಲಾರ್,  ಹರೀಶ್ ಉಪಸ್ಥಿತರಿದ್ದರು.

Similar News