ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಕುರಿತು ಹೆಚ್ಚು ಪ್ರಚಾರ ನೀಡಿ: ಕೇಂದ್ರ ಸಚಿವೆ ಶೋಭಾ ಕರಾಂದ್ಲಾಜೆ

Update: 2023-02-03 17:31 GMT

ಕುಂದಾಪುರ: ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರವನ್ನು ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ತರಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಪ್ರತಿ ಮನೆಗಳನ್ನು ಸಂಪರ್ಕಿಸುವುದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಕುರಿತಾಗಿ ಹೆಚ್ಚು ಪ್ರಚಾರ ನೀಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಬಿಜೆಪಿಯ ಕುಂದಾಪುರ ಮಂಡಲದ ತೆಕ್ಕಟ್ಟೆ ಶಕ್ತಿ ಕೇಂದ್ರ ವ್ಯಾಪ್ತಿಯ ಬೂತ್ ಸಂಖ್ಯೆ 182ರಲ್ಲಿ ಶುಕ್ರವಾರ ನಡೆದ ಬೂತ್ ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರತಿ ಬೂತ್‌ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಮತ್ತು ಸ್ಥಳೀಯ ಶಾಸಕರ ಸಾಧನೆಗಳ ಸಮಗ್ರ ಮಾಹಿತಿ ಇರುವ ಕರಪತ್ರವನ್ನು ಮನೆ ಮನೆಗೆ ತಲುಪಿಸಿ ಬಿಜೆಪಿ ಸರಕಾರದ ಜನಪರ ಯೋಜನೆಗಳನ್ನು ತಿಳಿಸಬೇಕು. ಆ ಮೂಲಕ ಪ್ರತಿ ಬೂತ್ ಗಳಲ್ಲೂ ಅತೀ ಹೆಚ್ಚು ಮತಗಳ ಅಂತರ ಪಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಅವರು ಬೂತ್ ಅಧ್ಯಕ್ಷರ ಮನೆ ಮತ್ತು ಬೂತ್‌ನ ಹತ್ತಾರು ಮನೆಗಳನ್ನು ಸಂಪರ್ಕಿಸಿ ಗೋಡೆ ಬರಹ ಹಾಗೂ ಪಕ್ಷದ ಸ್ಟಿಕರ್ ಅಳವಡಿಸಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆ ಮತ್ತು ಸಾಧನೆಗಳ ಕುರಿತು ಮಾಹಿತಿ ನೀಡಿದರು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿದರು.

ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ರಾಜ್ಯ ಆಹಾರ ನಿಗಮ ಮಂಡಳಿ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಕುಂದಾಪುರ ಮಂಡಲ ಪ್ರಭಾರಿ ಸುಪ್ರಸಾದ್ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ, ಸುರೇಶ್ ಶೆಟ್ಟಿ, ಶಕ್ತಿಕೇಂದ್ರ ಅಧ್ಯಕ್ಷ ಕಿರಣ್ ಪೂಜಾರಿ, ಬೂತ್ ಅಧ್ಯಕ್ಷ ಶ್ರೀನಾಥ್ ಶೆಟ್ಟಿ, ಅಭಿಯಾನದ ಮಂಡಲ ಪ್ರಮುಖರಾದ ಸುರೇಂದ್ರ ಕಾಂಚನ್, ವಿದ್ಯಾ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು.

Similar News