ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಖ್ಯಾತ ಗಾಯಕಿ ವಾಣಿ ಜಯರಾಂ

Update: 2023-02-04 16:30 GMT

ಚೆನ್ನೈ: ಹಿರಿಯ ಹಾಗೂ ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ (Vani Jairam) ಇಂದು ಚೆನ್ನೈ ನಗರದ ತಮ್ಮ ನಿವಾಸದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು  ವರದಿಯಾಗಿದೆ.

ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಚೆನ್ನೈಯ ನುಂಗಂಬಾಕ್ಕಾಂನ ಹ್ಯಾಡೋಸ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ವಾಣಿ ಜಯರಾಮ್ ಅವರು ಶವವಾಗಿ ಪತ್ತೆಯಾಗಿದ್ದು, ಅವರ ಹಣೆಯ ಮೇಲೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಣಿ ಜಯರಾಮ್ ಅವರು ಸಾವನ್ನಪ್ಪುವ ಸಂದರ್ಭ ಒಬ್ಬರೇ ಇದ್ದರು. ಅವರ ಮನೆ ಕೆಲಸದಾಕೆ ಮಲರ್ಕೋಡಿ ಶನಿವಾರ ಬೆಳಗ್ಗೆ ಆಗಮಿಸಿದಾಗ ಮನೆಯ ಬಾಗಿಲಿನ ಚಿಲಕವನ್ನು ಒಳಗಿನಿಂದ ಹಾಕಲಾಗಿತ್ತು. ಕರೆ ಗಂಟೆ ಒತ್ತಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅವರು ನೆರಮನೆಗೆ ತೆರಳಿ ಮಾಹಿತಿ ನೀಡಿದರು. 

ನೆರೆ ಮನೆಯವರು ವಾಣಿ ಜಯರಾಮ್ ಅವರ ಸಹೋದರಿ ಉಮಾ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಅಲ್ಲದೆ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಕೂಡಲೇ ಅಲ್ಲಿಗೆ ಆಗಮಿಸಿದರು. ಅದೇ ಸಂದರ್ಭ ಅಲ್ಲಿಗೆ ಆಗಮಿಸಿದ್ದ ಉಮಾ ಅವರಲ್ಲಿದ್ದ ಇನ್ನೊಂದು ಕೀಲಿ ಕೈ ಬಳಸಿ ಬಾಗಿಲು ತೆರೆದರು ಎಂದು ಚೆನ್ನೈ ಪೊಲೀಸ್ನ ಮೂಲಗಳು ತಿಳಿಸಿವೆ. ಜಯರಾಮ್ ಅವರು ಕೆಳಗೆ ಬಿದ್ದಿದ್ದಾರೆ. 

ಈ ಸಂದರ್ಭ ಅವರ ತಲೆ ಮೇಜಿಗೆ ಢಿಕ್ಕಿಯಾಗಿ ಸಾವು ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರು ವಾಣಿ ಜಯರಾಮ್ ಅವರ ಸಾವನ್ನು ಅನೈಸರ್ಗಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ ಹಾಗೂ ತನಿಖೆ ಆರಂಭಿಸಿದ್ದಾರೆ. 

ವಾಣಿ ಜಯರಾಮ್ ಅವರು ತಮಿಳುನಾಡಿನ ಅಯ್ಯಂಗಾರ್ ಕುಟುಂಬದಲ್ಲಿ ವೆಲ್ಲೂರಿನ ಇಡಂಗು ಗ್ರಾಮದಲ್ಲಿ 1945 ನವೆಂಬರ್ 30ರಂದು ಜನಿಸಿದರು. ಅವರು ತಮ್ಮ ಐದನೇ ವಯಸ್ಸಿನಲ್ಲಿ ಕಡಲೂರು ಶ್ರೀನಿವಾಸ ಅಯ್ಯಂಗಾರರ ಬಳಿ ಸಂಗೀತಾಭ್ಯಾಸ ಆರಂಭಿಸಿದರು. ಏಳನೇ ವಯಸ್ಸಿನಲ್ಲಿ ದೇಶಿಕಾಚಾರ್ ಕೃತಿಗಳನ್ನು ಸರಾಗವಾಗಿ ಸ್ಫುಟವಾಗಿ ಹಾಡುತ್ತಿದ್ದರು.

8ನೇ ವಯಸ್ಸಿನಲ್ಲಿ ಆಕಾಶವಾಣಿಯಲ್ಲಿ ಇವರ ಧ್ವನಿ ಪ್ರಸಾರವಾಗಿತ್ತು. 10ನೇ ವರ್ಷದಲ್ಲಿ ಅವರು ತಿರುವನಂತಪುರದಲ್ಲಿ ಸಂಗೀತ ಕಚೇರಿ ನಡೆಸಿದ್ದರು. 10 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ ವಾಣಿ ಜಯರಾಮ್ ಅವರಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳು ದೊರಕಿದ್ದವು. ಕೇಂದ್ರ ಸರಕಾರ ಕಳೆದ ತಿಂಗಳು ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಘೋಷಿಸಿತ್ತು. ವಾಣಿ ಜಯರಾಮ್ ಅವರ ನಿಧನಕ್ಕೆ ಸಿನಮಾ, ಸಂಗೀತ ಕ್ಷೇತ್ರದ ಗಣ್ಯರು ಹಾಗೂ ಇತರರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಿನೆಮಾಗಳಿಗೆ ವಾಣಿ ಜಯರಾಮ್ ಅವರು ಅನೇಕ ಹಾಡುಗಳನ್ನು ಹಾಡಿದ್ದಾರೆ. ‘ಅನುಭವ’ ಸಿನೆಮಾದ ‘ಹೋದೆಯ ದೂರ ಓ ಜೊತೆಗಾರ’, ‘ಇವ ಯಾವ ಸೀಮೆ ಗಂಡು ಕಣಮ್ಮಾ’, ‘ಏನೇನೋ ಆಸೆ’, ‘ಕವಿರತ್ನ ಕಾಳಿದಾಸ’ ಸಿನೆಮಾದ ‘ಸದಾ ಕಣ್ಣಲಿ ಪ್ರಣಯದ ಕವಿತೆ’ ಸೇರಿದಂತೆ ಹಲವು ಹಿಟ್ ಗೀತೆಗಳಿಗೆ ವಾಣಿ ಜಯರಾಮ್ ಅವರು ಧ್ವನಿ ನೀಡಿದ್ದಾರೆ. 

Similar News