ಅಸ್ಸಾಂ: ಬಾಲ್ಯ ವಿವಾಹದ ಹಿನ್ನೆಲೆಯಲ್ಲಿ ಬಂಧನ; ಪೊಲೀಸ್ ಠಾಣೆ ಮುಂದೆ ಮಹಿಳೆಯರ ಪ್ರತಿಭಟನೆ

ಯಾವುದೇ ಅನುಕಂಪವಿಲ್ಲ ಎಂದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

Update: 2023-02-05 08:21 GMT

ಮೋರಿಗಾಂವ್: ಶನಿವಾರ ಬೆಳಗ್ಗೆ 11.30ರ ವೇಳೆಗೆ ನೂರಾರು ಮಹಿಳೆಯರು ಲಾಹರಿಘಾಟ್ ಪೊಲೀಸ್ ಠಾಣೆಯೆದುರು ಜಮಾಯಿಸಿ, ಠಾಣೆಯ ಗೇಟ್ ಅನ್ನು ತಳ್ಳಾಡುವುದರೊಂದಿಗೆ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಸಿಬ್ಬಂದಿಗಳು ಅವರನ್ನೆಲ್ಲ ಹಿಂದಕ್ಕೆ ನೂಕಿದರಾದರೂ, ಈ ಪೈಕಿ ಸುಮಾರು ಆರು ಮಂದಿ ಮಹಿಳೆಯರು ಠಾಣೆಯ ಆವರಣ ಪ್ರವೇಶಿಸುವುದರಲ್ಲಿ ಯಶಸ್ವಿಯಾಗಿ, ಠಾಣೆಯ ಅಂಗಳದಲ್ಲಿ ಅಂಗಾತ ಮಲಗಿ ಪ್ರತಿಭಟಿಸಿದರು. ಈ ಮಹಿಳೆಯರು ಶುಕ್ರವಾರ ಬಾಲ್ಯ ವಿವಾಹದ ಆರೋಪದಲ್ಲಿ ಬಂಧಿತನಾಗಿದ್ದ ಇಸ್ಲಾಂ ಎಂಬ ವ್ಯಕ್ತಿಯ ಸಂಬಂಧಿಕರಾಗಿದ್ದರು ಎಂದು indianexpress.com ವರದಿ ಮಾಡಿದೆ.

ಇವರೊಂದಿಗೆ, ಗೇಟಿನ ಹೊರಗೆ ಮೂರು ತಿಂಗಳ ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡಿದ್ದ ಮಹಿಳೆಯೊಬ್ಬರೂ ನಿಂತಿದ್ದರು. ಆಕೆಯ ಪತಿ ಹನೀಫ್ ಅನ್ನು ಶುಕ್ರವಾರ ಮಧ್ಯರಾತ್ರಿ ಬಂಧಿಸಲಾಗಿತ್ತು. ನಾವಿಬ್ಬರೂ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದೆವು ಎಂದು ಆಕೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

"ನಾನು ನನ್ನ ಮಗುವನ್ನು ಹೇಗೆ ನೋಡಿಕೊಳ್ಳುವುದೆಂದೇ ಚಿಂತೆಯಾಗಿದೆ. ನನ್ನ ಪತಿಯು ಕೃಷಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ನಾನು ಆತನನ್ನು ಮದುವೆಯಾಗಲು ಮನೆ ಬಿಟ್ಟು ಓಡಿ ಬಂದಿರುವುದರಿಂದ ನನಗೆ ಬೇರಾವುದೇ ಬೆಂಬಲವಿಲ್ಲ. ಸದ್ಯ ನನ್ನ ಬಳಿ ಒಂದು ರೂಪಾಯಿ ಕೂಡಾ ಇಲ್ಲ" ಎಂದು 18 ವರ್ಷದ ಆ ಮಹಿಳೆಯು ಅಳಲು ತೋಡಿಕೊಂಡಿದ್ದಾರೆ.

ಈ ನಡುವೆ, "ಬಾಲ್ಯ ವಿವಾಹಗಳ ಬಗ್ಗೆ ನನಗೆ ಶೂನ್ಯ ಸಹಾನುಭೂತಿಯಿದೆ. ಅಪ್ರಾಪ್ತ ಬಾಲಕಿ ಮದುವೆಯಾಗಿ ದೈಹಿಕ ಸಂಪರ್ಕವೇರ್ಪಟ್ಟರೆ, ನಾನದನ್ನು ಅತ್ಯಾಚಾರವೆಂದೇ ಕರೆಯುತ್ತೇನೆ. ಆ ಬಾಲಕಿ ಆ ಸಮಸ್ಯೆಯಲ್ಲೇ ಮುಂದುವರಿಯಲಿ ಎಂದು ನಾವು ಬಯಸಬೇಕೇ? ಭವಿಷ್ಯದಲ್ಲಿ ಲಕ್ಷಾಂತರ ಬಾಲಕಿಯರು ಇಂತಹ ಪರಿಸ್ಥಿತಿಯಿಂದ ನರಳುವುದನ್ನು ತಪ್ಪಿಸಲು ಒಂದು ತಲೆಮಾರು ನರಳಲೇಬೇಕಿದೆ" ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.

ಅಸ್ಸಾಂ ರಾಜ್ಯ ಸರ್ಕಾರ ಬಾಲ್ಯ ವಿವಾಹದ ವಿರುದ್ಧ ಕಾರ್ಯಾಚರಣೆ ಆರಂಭಿಸಿದಾಗಿನಿಂದ ಈವರೆಗೆ 2,258 ಮಂದಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಪತ್ನಿಯ ತಲೆಗೆ ಹೊಡೆದ ಆರೋಪ: ವಿನೋದ್ ಕಾಂಬ್ಳಿ ವಿರುದ್ಧ ಪ್ರಕರಣ

Similar News