ಶಾಲಾ ಕಾರ್ಯಕ್ರಮದಲ್ಲಿ ಗಾಂಧೀಜಿಯನ್ನು ಟೀಕಿಸುವ ಕವನ: ಭುಗಿಲೆದ್ದ ವಿವಾದ

Update: 2023-02-08 04:26 GMT

ಭೋಪಾಲ್: ಮಹಾತ್ಮ ಗಾಂಧೀಜಿಯವರನ್ನು ಟೀಕಿಸುವ ಪದ್ಯವೊಂದನ್ನು ಶಾಲಾ ವಿದ್ಯಾರ್ಥಿಯೊಬ್ಬ ಕಾರ್ಯಕ್ರಮದಲ್ಲಿ ಹಾಡಿರುವುದು ಮಧ್ಯಪ್ರದೇಶದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಸಿಯೋನಿಯ ಸಿಎಂ ರೈಸ್ ಶಾಲೆಯ ಕಾರ್ಯಕ್ರಮವೊಂದರಲ್ಲಿ ಈ ಹಾಡನ್ನು ಹಾಡಲಾಗಿದ್ದು, ಭಾರತ ವಿಭಜನೆ ವೇಳೆ ನಡೆಯುವ ಹಿಂಸಾಚಾರದ ಅವಧಿಯಲ್ಲಿ ಗಾಂಧೀಜಿ ಮೌನವಾಗಿದ್ದರು ಎಂಬ ಅಂಶ ಈ ಹಾಡಿನಲ್ಲಿ ಬಿಂಬಿತವಾಗಿದೆ. ನಮಗೆ ಬೋಧಿಸಿದಂತೆ ಕೇವಲ ಚರಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತೇ ಅಥವಾ ದೇಶಕ್ಕಾಗಿ ಎಷ್ಟು ಮಂದಿ ನೇಣುಗಂಬ ಏರಿದ್ದಾರೆ ಎಂದು ಕೂಡಾ ಕವನದಲ್ಲಿ ಪ್ರಶ್ನಿಸಲಾಗಿದೆ.

ಸಿಯೋಜಿ ಬಿಜೆಪಿ ಶಾಸಕ ದಿನೇಶ್ ರಾಯ್ ಮುನ್ಮನ್ ಕೂಡಾ ಈ ಹಾಡು ಹಾಡಿದ ವೇಳೆ ವೇದಿಕೆಯಲ್ಲಿದ್ದು, ಅವರು ಚಪ್ಪಾಳೆ ತಟ್ಟುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಮಧ್ಯಪ್ರದೇಶ ಸರ್ಕಾರ ಹಮ್ಮಿಕೊಂಡಿರುವ ವಿಕಾಸಯಾತ್ರೆ ಸಂಬಂಧ ಫೆಬ್ರುವರಿ 5ರಂದು ಹಮ್ಮಿಕೊಂಡ ಸಮಾರಂಭದಲ್ಲಿ ಈ ಹಾಡು ಹಾಡಲಾಗಿದೆ.

"ಗಾಂಧೀಜಿಯವರನ್ನು ಅಣಕಿಸುವುದಕ್ಕೆ ಕ್ಷಮೆ ಇಲ್ಲ. ಬಿಜೆಪಿ ಹಾಗೂ ಆರೆಸ್ಸೆಸ್‌ಗೆ ಗಾಂಧೀಜಿಯವರ ಬಗ್ಗೆ ಗೌರವ ಇಲ್ಲ" ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ರಾಜ್ ಕುಮಾರ್ ಖುರಾನ ಹೇಳಿದ್ದಾರೆ. ಇಲ್ಲಿ ತಪ್ಪು ಇರುವುದು ವಿದ್ಯಾರ್ಥಿಯಲ್ಲಲ್ಲ; ಬದಲಾಗಿ ಆ ಹಾಡು ಹೇಳಿಕೊಟ್ಟವರಲ್ಲಿ ಎಂದು ಅವರು ಹೇಳಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಹೊಣೆಯಿಂದ ಬಿಜೆಪಿ ಶಾಸಕ ಅಥವಾ ಪಕ್ಷ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಬಿಜೆಪಿ ಶಾಸಕ ಈ ಬಾಲಕನನ್ನು ಶ್ಲಾಘಿಸಿದ್ದಲ್ಲದೇ ಈ ಹಾಡಿಗೆ ಬಹುಮಾನವನ್ನು ನೀಡಲೂ ಮುಂದಾಗಿದ್ದಾರೆ ಎಂದು ಅವರು ಆಪಾದಿಸಿದ್ದಾರೆ.

ಈ ಹಡನ್ನು ಹೇಳಿಕೊಟ್ಟ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಶೋಕಾಸ್ ನೋಟಿಸ್ ನೀಡಿದ್ದು, ಶಾಲೆಯ ಪ್ರಾಚಾರ್ಯರಿಂದ ವರದಿ ಬಯಸಿದೆ. ದೇಶದ ಗಣ್ಯ ವ್ಯಕ್ತಿಗಳ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಬಾರದು ಅಥವಾ ಗೌರವಕ್ಕೆ ಚ್ಯುತಿ ತರಬಾರದು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಅಧಿಕಾರಿ ಕೆ.ಕೆ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

Similar News