×
Ad

ಸರಕಾರಕ್ಕೆ ಆರ್ಥಿಕ ಸಂಕಷ್ಟ: 114 ಖಾಸಗಿ ಶಾಲಾ, ಕಾಲೇಜುಗಳ ಸಹಾಯಾನುದಾನ ಪ್ರಸ್ತಾವ ನಿರಾಕರಣೆ

Update: 2023-02-10 08:32 IST

ಬೆಂಗಳೂರು: ಅಬಕಾರಿ, ಜಿಎಸ್‌ಟಿ ಸೇರಿದಂತೆ ಇನ್ನಿತರ ಮೂಲಗಳಿಂದ ಸಾವಿರಾರು ಕೋಟಿ ರೂ. ಸಂಗ್ರಹಿಸಲಾಗಿದೆ ಎಂದು ಭರ್ಜರಿ ಪ್ರಚಾರ ಪಡೆದುಕೊಂಡಿರುವ ರಾಜ್ಯ ಸರಕಾರವು ಪ್ರಸಕ್ತ ರಾಜಸ್ವ ಕೊರತೆಯತ್ತ ಸಾಗುವ ಮೂಲಕ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.

 ರಾಜಸ್ವ ಕೊರತೆ ಮತ್ತು ಆರ್ಥಿಕ ಸಂಕಷ್ಟವನ್ನು ಮುಂದೊಡ್ಡಿರುವ ಆರ್ಥಿಕ ಇಲಾಖೆಯು ಶಿಕ್ಷಣ ಇಲಾಖೆಯು ಸಲ್ಲಿಸಿದ್ದ ೧೧೪ ಖಾಸಗಿ ಶಾಲಾ, ಕಾಲೇಜುಗಳ ಸಹಾಯಾನುದಾನಕ್ಕೆ ಒಳಪಡಿಸುವ ಪ್ರಸ್ತಾವನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ನಿರ್ಧರಿಸಿದೆ.

ಶಿಕ್ಷಣ ಇಲಾಖೆಯ ಪ್ರಸ್ತಾವನೆಯನ್ನು ತಿರಸ್ಕರಿಸಲು ಆರ್ಥಿಕ ಇಲಾಖೆಯು ಕೈಗೊಂಡಿರುವ ತೀರ್ಮಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಅನುಮೋದಿಸಿದ್ದಾರೆ. ಹಲವು ವರ್ಷಗಳಿಂದ ಸಹಾಯಾನುದಾನದ ನಿರೀಕ್ಷೆ ಇಟ್ಟುಕೊಂಡಿದ್ದ ಖಾಸಗಿ ಶಾಲೆ ಕಾಲೇಜುಗಳ ಬೋಧಕ, ಬೋಧಕೇತರ ಸಿಬ್ಬಂದಿ ಭವಿಷ್ಯ ಮತ್ತೆ ಮುಸುಕಾದಂತಾಗಿದೆ.

೧೯೮೭ ಜೂನ್ ೧ರಿಂದ ೧೯೯೪-೯೫ನೇ ಸಾಲಿನ ಅವಧಿಯಲ್ಲಿ ಪ್ರಾರಂಭವಾಗಿರುವ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆ, ಅರೇಬಿಕ್ ಶಾಲೆಗಳಿಗೆ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಸಹಾಯಾನುದಾನಕ್ಕೆ ಒಳಪಡಿಸುವ ಸಂಬಂಧ ಆರ್ಥಿಕ ಇಲಾಖೆಯು ಶಿಕ್ಷಣ ಇಲಾಖೆಗೆ ೨೦೨೩ರ ಜನವರಿ ೧೯ರಂದು ನೀಡಿರುವ ಅಭಿಪ್ರಾಯದಲ್ಲಿ ರಾಜಸ್ವ ಕೊರತೆ ಮತ್ತು ಅರ್ಥಿಕ ಸಂಕಷ್ಟದ ಕುರಿತು ಪ್ರಸ್ತಾಪಿಸಲಾಗಿದೆ. ಆರ್ಥಿಕ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ನೀಡಿರುವ ಅಭಿಪ್ರಾಯದ ಪ್ರತಿಯು (ಆಇ ೩೩ ವೆಚ್ಚ-೮ ೨೦೨೨, ಇಪಿ ೧೧೭ಪಿಎಂಸಿ ೨೦೨೨, ಇಪಿ ೦೧ ಎಸ್‌ಇಪಿ ೨೦೨೨ರ) ‘the-file.in’ಗೆ ಲಭ್ಯವಾಗಿದೆ.

’ರಾಜ್ಯ ಸರಕಾರವು  ಈಗಾಗಲೇ ಸಹಾಯಾನುದಾನಕ್ಕೆ ಒಳಪಟ್ಟಿರುವ ಖಾಸಗಿ ಅನುದಾನಿತ ಶಾಲಾ/ಕಾಲೇಜುಗಳ ಸಿಬ್ಬಂದಿ ವೇತನಕ್ಕಾಗಿ ವಾರ್ಷಿಕ  ೧,೮೦೦ ಕೋಟಿಗಳಿಗೂ ಹೆಚ್ಚು ಹಣವನ್ನು ವೆಚ್ಚ ಮಾಡುತ್ತಿದೆ. ರಾಜ್ಯ ಸರಕಾರವು ಪ್ರಸ್ತುತ ರಾಜಸ್ವ ಕೊರತೆಯತ್ತ ಸಾಗುತ್ತಿದ್ದು (revenue deficit) ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಸರಕಾರಿ ಶಾಲೆಗಳಲ್ಲಿ ಇರುವ ಸಾಮರ್ಥ್ಯವನ್ನು ಸಂಪೂರ್ಣ/ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆಡಳಿತ ಇಲಾಖೆ ಸಲ್ಲಿಸಿರುವ ೧೧೪ ಖಾಸಗಿ ಶಾಲಾ/ಕಾಲೇಜುಗಳನ್ನು ಸಹಾಯಾನುದಾನಕ್ಕೆ ಒಳಪಡಿಸುವ ಪ್ರಸ್ತಾವನೆಯನ್ನು ಒಪ್ಪಲು ಸಾಧ್ಯವಿರುವುದಿಲ್ಲ’ ಎಂದು ಅಭಿಪ್ರಾಯ ನೀಡಿರುವುದು ಗೊತ್ತಾಗಿದೆ.

೧೯೮೭ರ ಜೂನ್ ೧ರಿಂದ ೧೯೯೪-೯೫ನೇ ಸಾಲಿನ ಅವಧಿಯಲ್ಲಿ ಪ್ರಾರಂಭವಾಗಿ ಸಹಾಯಾನುದಾನಕ್ಕೆ ಒಳಪಡಿಸಲು ಇನ್ನೂ ೭೭ ಪ್ರಾಥಮಿಕ ಶಾಲೆಗಳು, ೫ ಅರೇಬಿಕ್ ಶಾಲೆಗಳು, ೩೧ ಪ್ರೌಢಶಾಲೆಗಳು ಮತ್ತು ೧ ಅರೇಬಿಕ್ ಕಾಲೇಜು ಸೇರಿದಂತೆ ಒಟ್ಟು ೧೧೪ ಶಾಲಾ ಕಾಲೇಜುಗಳ ೫೪೭ ಶಿಕ್ಷಕ/ಉಪನ್ಯಾಸಕ ಹುದ್ದೆಗಳನ್ನು ಹಾಗೂ ೨೯ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ಸಹಾಯಾನುದಾನಕ್ಕೆ ಒಳಪಡಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪ್ರಸ್ತಾವನೆ ಸಲ್ಲಿಸಿತ್ತು.

ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸಹಾಯಾನುದಾನಕ್ಕೆ ಒಳಪಡಿಸಲು ಅವಕಾಶ ಕಲ್ಪಿಸಲು ೨೦೦೭ರ ಅಕ್ಟೋಬರ್ ೬ರಂದು ಆದೇಶ ಹೊರಡಿಸಿ ೧೧ ವರ್ಷಗಳಾದರೂ ಸಹಾಯಾನುದಾನಕ್ಕೆ ಒಳಪಡಿಸುವ ಪ್ರಸ್ತಾವನೆಗಳು ಸರಕಾರಕ್ಕೆ ನಿರಂತರವಾಗಿ ಸಲ್ಲಿಕೆಯಾಗುತ್ತಿವೆ. ಈ ಕುರಿತು ಅಂದಿನ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಕರ್ನಾಟಕ ವಿಧಾನಪರಿಷತ್‌ನ ಸಭಾಪತಿ, ಶಿಕ್ಷಣ ಕ್ಷೇತ್ರ ಪ್ರತಿನಿಧಿಸುವ ವಿಧಾನಪರಿಷತ್ ಸದಸ್ಯರುಗಳೊಂದಿಗೆ ೨೦೧೮ರ ಸೆ.೨೮ರಂದು ಸಭೆ ಕೂಡ ನಡೆದಿತ್ತು.

ಸಹಾಯಾನುದಾನಕ್ಕೆ ಒಳಪಡಿಸಲು ಸರಕಾರದ ಹಂತದಲ್ಲಿ ಆ ಸಮಯದಲ್ಲಿ ಬಾಕಿ ಇದ್ದ ೧೧೬ ಪ್ರಾಥಮಿಕ ಶಾಲೆಗಳು, ೩೨ ಪ್ರೌಢಶಾಲೆಗಳು, ೨೯ ಪದವಿಪೂರ್ವ ಕಾಲೇಜುಗಳು ಸೇರಿದಂತೆ ಒಟ್ಟು ೧೧೭ ಶಾಲಾ ಕಾಲೇಜುಗಳನ್ನು ಮಾತ್ರ ವೇತನಾನುದಾನಕ್ಕೆ ಒಳಪಡಿಸಲು ಮತ್ತು ಇನ್ನೂ ಮುಂದೆ ೧೯೮೭ರ ಜೂನ್ ೧ರಿಂದ ೧೯೯೪-೯೫ನೇ ಸಾಲಿನ ಅವಧಿಯಲ್ಲಿ ಪ್ರಾರಂಭವಾದ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಪ್ರಸ್ತಾವನೆಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಬಾರದು ಎಂದು ಆಡಳಿತ ಇಲಾಖೆಗೆ ಆರ್ಥಿಕ ಇಲಾಖೆಯು ನಿರ್ದೇಶಿಸಿತ್ತು ಎಂದು ಗೊತ್ತಾಗಿದೆ.

Similar News