ರವೀಂದ್ರ ಜಡೇಜ ಬೆರಳಿಗೆ ನೋವು ನಿವಾರಕ ಕ್ರೀಮ್ ಹಚ್ಚಿಕೊಂಡಿದ್ದರು: ಊಹಾಪೋಹಕ್ಕೆ ತೆರೆ ಎಳೆದ ಟೀಮ್ ಇಂಡಿಯಾ

Update: 2023-02-10 09:37 GMT

ಮುಂಬೈ: ನಾಗ್ಪುರದಲ್ಲಿ ಭಾರತ ಹಾಗೂ  ಆಸ್ಟ್ರೇಲಿಯ ನಡುವಿನ ಮೊದಲ ಟೆಸ್ಟ್‌ನ ಮೊದಲ ದಿನದಾಟದ ಸಮಯದಲ್ಲಿ ರವೀಂದ್ರ ಜಡೇಜ ಕೈಗೆ ಕ್ರೀಮ್ ಹಚ್ಚಿಕೊಳ್ಳುತ್ತಿರುವ  ದೃಶ್ಯಗಳು ಭಾರೀ ವೈರಲ್ ಆಗಿದ್ದು, ಇದು ಚರ್ಚೆಗೆ ಗ್ರಾಸವಾಗಿತ್ತು.  ಇದು ನೋವು ನಿವಾರಕ ಕ್ರೀಮ್ ಆಗಿತ್ತು ಎಂದು ಬಹಿರಂಗಪಡಿಸುವ ಮೂಲಕ ಭಾರತೀಯ ಟೀಮ್ ಮ್ಯಾನೇಜ್ ಮೆಂಟ್ ಎಲ್ಲಾ ಊಹಾಪೋಹಕ್ಕೆ ತೆರೆ ಎಳೆದಿದೆ.

ಗುರುವಾರದಂದು ಜಡೇಜ  ಅವರು ಸಹ ಆಟಗಾರ ಮುಹಮ್ಮದ್ ಸಿರಾಜ್ ಅವರಿಂದ ಏನೋ ಒಂದು ವಸ್ತು ತೆಗೆದುಕೊಂಡು ತಮ್ಮ ಬೆರಳಿಗೆ ಅದನ್ನು ಲೇಪಿಸಿಕೊಂಡಿದ್ದರು. ಈ ದೃಶ್ಯವು  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಆದರೆ ESPNcricinfo ವರದಿ ಮಾಡಿದಂತೆ, ಇದು ನೋವು ನಿವಾರಕ ಕ್ರೀಮ್ ಆಗಿತ್ತು.  ಪಂದ್ಯದ ರೆಫರಿ ಆಂಡಿ ಪೈಕ್ರಾಫ್ಟ್‌ಗೆ ಭಾರತ ಕ್ರಿಕೆಟ್ ತಂಡವು ಈ ಕುರಿತು ಮಾಹಿತಿ ನೀಡಿದೆ. ವರದಿಯ ಪ್ರಕಾರ, ಆಸ್ಟ್ರೇಲಿಯ ತಂಡವು ಈ ವಿಚಾರವನ್ನು ಮ್ಯಾಚ್ ರೆಫರಿಯ ಗಮನಕ್ಕೆ ತಂದಿಲ್ಲ.

ಆ ಹಂತದಲ್ಲಿ ಆಸ್ಟ್ರೇಲಿಯ 5 ವಿಕೆಟ್ ಗೆ  120 ರನ್ ಗಳಿಸಿತ್ತು, ಜಡೇಜ ಅದಾಗಲೇ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು.

ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ  ಮರಳಿದ್ದ ಸ್ಟಾರ್ ಎಡಗೈ ಸ್ಪಿನ್ನರ್, ಮೊದಲ ಇನಿಂಗ್ಸ್‌ನಲ್ಲಿ ಇನ್ನಿಬ್ಬರು ಆಸ್ಟ್ರೇಲಿಯನ್‌ಆಟಗಾರರನ್ನು ಔಟ್ ಮಾಡಿ ಐದು ವಿಕೆಟ್‌ಗಳ (5/47) ಗೊಂಚಲು ಪಡೆದರು.

ಮೊದಲ ದಿನ ಆಸ್ಟ್ರೇಲಿಯ 177 ರನ್‌ಗಳಿಗೆ ಆಲೌಟ್ ಆಗಿತ್ತು.

Similar News