ಅದಾನಿ ವಿವಾದ: ತಜ್ಞರ ಸಮಿತಿ ರಚನೆಗೆ ಕೇಂದ್ರ ಸರಕಾರದ ಸಲಹೆಯನ್ನು ಒಳಗೊಂಡ "ಮುಚ್ಚಿದ ಲಕೋಟೆ" ತಿರಸ್ಕರಿಸಿದ ಸುಪ್ರೀಂ
Update: 2023-02-17 12:40 GMT
ಹೊಸದಿಲ್ಲಿ: ಅದಾನಿ ಸಮೂಹದ ಶೇರುಗಳ ಕುಸಿತದ ನಂತರ ನಿಯಂತ್ರಕ ಕ್ರಮಗಳನ್ನು ಬಲಪಡಿಸಲು ಮತ್ತು ಹೂಡಿಕೆದಾರರನ್ನು ರಕ್ಷಿಸಲು ಸಮಿತಿಯೊಂದನ್ನು ರಚಿಸುವ ಕುರಿತಂತೆ ಕೇಂದ್ರ ಸರಕಾರದ ಸಲಹೆಯನ್ನು ಒಳಗೊಂಡ "ಮುಚ್ಚಿದ ಲಕೋಟೆ" ಯನ್ನು ಸ್ವೀಕರಿಸಲು ಶುಕ್ರವಾರ ಸುಪ್ರೀಂ ಕೋರ್ಟ್ ನಿರಾಕರಿಸಿದೆ, ಈ ವಿಷಯದಲ್ಲಿ "ಪೂರ್ಣ ಪಾರದರ್ಶಕತೆ" ಬೇಕು ಎಂದು ಹೇಳಿದೆ.
ಕೋಟಿಗಟ್ಟಲೆ ಹೂಡಿಕೆದಾರರ ಸಂಪತ್ತು ಕಳೆದುಕೊಳ್ಳಲು ಕಾರಣವಾದ ಅದಾನಿ ಗ್ರೂಪ್ ವಿರುದ್ಧದ ಹಗರಣ ಆರೋಪಗಳ ಬಗ್ಗೆ ಪರಿಶೀಲಿಸಲು ನ್ಯಾಯಾಧೀಶರನ್ನೊಳಗೊಂಡ ತಜ್ಞರ ಸಮಿತಿಯನ್ನು ರಚಿಸುವ ಕುರಿತು ನ್ಯಾಯಾಲಯವು ಕಳೆದ ವಾರ ಸಲಹೆಗಳನ್ನು ಕೇಳಿತ್ತು.
ಈ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಗೆ ಕರೆ ನೀಡಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸಮಿತಿಗೆ ಸಂಬಂಧಿಸಿದ ತನ್ನ ಆದೇಶವನ್ನು ಶುಕ್ರವಾರ ಕಾಯ್ದಿರಿಸಿದೆ.