×
Ad

ಮದುವೆಯಾಗಲು ಒಪ್ಪದ ಬಾಲಕಿಗೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೂದಲು ‌ಹಿಡಿದು ಎಳೆದೊಯ್ಯುವ ವಿಡಿಯೋ ವೈರಲ್

ಆರೋಪಿ ಓಂಕಾರ್‌ ತಿವಾರಿ ಬಂಧನ

Update: 2023-02-19 22:46 IST

ರಾಯ್‌ಪುರ: ಛತ್ತೀಸ್‌ಗಢದ ರಾಯ್‌ಪುರದ ಗುಧಿಯಾರಿ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ರಸ್ತೆಯಲ್ಲಿ ಬಾಲಕಿಯ  ಕೂದಲು ‌ಹಿಡಿದು ಎಳೆದೊಯ್ಯುವ ವಿಡಿಯೋ ವೈರಲ್ ಆಗಿದ್ದು, ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.

ಛತ್ತೀಸ್‌ಗಢದ ರಾಜಧಾನಿಯ ಗುಧಿಯಾರಿ ಪ್ರದೇಶದಲ್ಲಿ ಶನಿವಾರ ಸಂಜೆ ಮಧ್ಯವಯಸ್ಕನೊಬ್ಬ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಎಳೆದುಕೊಂಡು ಹೋಗುತ್ತಿರುವ  ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ಸಂಬಂಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಗುಧಿಯಾರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಯ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಪ್ರಶಾಂತ್ ಅಗರವಾಲ್ ಪ್ರಕಾರ, ಸಂತ್ರಸ್ತೆ ಆರೋಪಿಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಆರೋಪಿಯನ್ನು ಓಂಕಾರ್ ತಿವಾರಿ ಅಲಿಯಾಸ್ ಮನೋಜ್ (47) ಎಂದು ಗುರುತಿಸಲಾಗಿದೆ.

"ಘಟನೆ ಬೆಳಕಿಗೆ ಬರುತ್ತಿದ್ದಂತೆ, ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ" ಎಂದು ಎಸ್‌ಎಸ್‌ಪಿ ಹೇಳಿದರು.

ಕೆಲಸ ತೊರೆಯುವುದಾಗಿ ಸಂತ್ರಸ್ತೆ ಹೇಳಿಕೊಂಡಿದ್ದರಿಂದ ಕೋಪಗೊಂಡ ಅಂಗಡಿ ಮಾಲಿಕ ಓಂಕಾರ್‌ ತಿವಾರಿ, ಅಪ್ರಾಪ್ತ ಬಾಲಕಿಯ ಮೇಲೆ ಹಲ್ಲೆ ನಡೆಸಿದ್ದಾನೆ  ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.

ಈ ನಡುವೆ, ಆರೋಪಿಯು ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಲು ಮುಂದಾಗಿದ್ದ ಆದರೆ, ಸಂತ್ರಸ್ತೆಯ ತಾಯಿ ಅದನ್ನು ನಿರಾಕರಿಸಿದ್ದರು ಎನ್ನುವುದೂ ತನಿಖೆಯ ವೇಳೆ ಬಹಿರಂಗಗೊಂಡಿದೆ.  ಇದೇ ಕಾರಣಕ್ಕೆ ಬಾಲಕಿ ಕೆಲಸ ತೊರೆಯುವುದಾಗಿ ಹೇಳಿರಬಹುದು ಎಂದು ಅಂದಾಜಿಸಲಾಗಿದೆ. ತನ್ನ ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ದೂ ಆರೋಪಿಯ ಆಕ್ರೋಶಕ್ಕೆ ಕಾರಣವಾಗಿರಬಹುದು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿದೆ.

ಇದನ್ನೂ ಓದಿ: ಯಾರದ್ದು ಚಡ್ಡಿ ಗಟ್ಟಿ ಇದೆಯೋ ಅವರಿಗೆ ಟಿಕೆಟ್: ಸತೀಶ್ ಜಾರಕಿಹೊಳಿ

Similar News