ತಮಿಳುನಾಡಿನಲ್ಲಿ ಓಲಾ ಹೂಡಿಕೆ: ಕರ್ನಾಟಕದ ಕೈ ತಪ್ಪಿದ್ದಕ್ಕೆ ಸರ್ಕಾರವನ್ನು ತರಾಟೆಗೆಳೆದ ಪ್ರತಿಪಕ್ಷ, ಉದ್ಯಮಿಗಳು

Update: 2023-02-21 07:19 GMT

ಹೊಸದಿಲ್ಲಿ: ಎಲೆಕ್ಟ್ರಿಕ್‌ ವಾಹನಗಳ ಉತ್ಪಾದಕ ಓಲಾ ಎಲೆಕ್ಟ್ರಿಕ್‌ ಕಂಪನಿಯು ತಮಿಳುನಾಡಿನಲ್ಲಿ 7,614 ಕೋಟಿ ರೂ. ಹೂಡಿಕೆ ಮಾಡಿ ವಿಶ್ವದ ಬೃಹತ್‌ ಎಲೆಕ್ಟ್ರಿಕ್‌ ವಾಹನ ಹಬ್‌ ಸೃಷ್ಟಿಸುವುದಾಗಿ ಘೋಷಿಸಿದೆ. ಇದು 2,000 ನೇರ ಉದ್ಯೋಗಗಳು ಸೃಷ್ಟಿ ಮಾಡುವ ನಿರೀಕ್ಷೆ ಇದೆ.

ಸದ್ಯ ಈ ಸುದ್ದಿ, ರಾಜಕೀಯ ಸದ್ದು ಮಾಡಿದ್ದು, ಇಷ್ಟು ದೊಡ್ಡ ಮಟ್ಟದ ಹೂಡಿಕೆಯು ಕರ್ನಾಟಕದ ಪಾಲಾಗದೆ ತಮಿಳುನಾಡು ಪಾಲಾಗಿರುವುದು ಹೇಗೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವನ್ನು ಪ್ರತಿಪಕ್ಷಗಳು ಮತ್ತು ಉದ್ಯಮದ ಗಣ್ಯರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆಯವರು ಟ್ವೀಟ್ ಮಾಡಿ, ಬೆಂಗಳೂರಿನಲ್ಲಿ ತಮ್ಮ ಹಲ್ಲುಗಳನ್ನು ಕತ್ತರಿಸಿಕೊಂಡ ಯುನಿಕಾರ್ನ್ ಈಗ ತಮಿಳುನಾಡಿನಲ್ಲಿ ಭಾರಿ ಹೂಡಿಕೆ ಮಾಡುತ್ತಿದೆ ಮತ್ತು ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿದೆ. ಕಠಿಣ ನೀತಿಗಳಿಂದಾಗಿ ಕರ್ನಾಟಕ ಹೂಡಿಕೆದಾರರ ಮನವೊಲಿಸಲು, ಅನುಕೂಲಕರ ಪರಿಸರ ವ್ಯವಸ್ಥೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿ ವ್ಯವಹಾರ ನಡೆಸುವುದು ಕೇವಲ ಶೇ.40 ಕಮಿಷನ್ ಮಾತ್ರವೇ? ಮುಖ್ಯಮಂತ್ರಿಗಳೇ ಎಚ್ಚೆತ್ತುಕೊಳ್ಳಿ ಎಂದು ಕಿಡಿ ಕಾರಿದ್ದಾರೆ.

ಇವಿ ತಯಾರಿಕೆ ಮತ್ತು ಬ್ಯಾಟರಿ ಉತ್ಪಾದನಾ ನೀತಿಯೊಂದಿಗೆ ಬಂದ ಮೊದಲ ರಾಜ್ಯ ಕರ್ನಾಟಕ. ಓಲಾ ತಮಿಳುನಾಡು ರಾಜ್ಯದಲ್ಲಿ ಹೂಡಿಕೆ ಮಾಡಿರುವುದನ್ನು ನೋಡಿದರೆ, ಬಿಜೆಪಿ ಸರ್ಕಾರದಲ್ಲಿ ವ್ಯವಹಾರವನ್ನು ಸುಲಭಗೊಳಿಸುವುದು ಕೇವಲ ಕಲ್ಪನೆಗಳಷ್ಟೇ. ಇಷ್ಟು ದೊಡ್ಡ ಮೊತ್ತದ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ ನಾಶಗೊಂಡಿರುವುದಕ್ಕೆ ಯಾರು ಹೊಣೆ? ಯುವಕರಿಗೆ ಉದ್ಯೋಗ ಬೇಕು. ಆದರೆ, ಬಿಜೆಪಿ ಅವರನ್ನು ಗೋರಕ್ಷಕರನ್ನಾಗಿ ಮಾಡುತ್ತಿದೆ ಎಂದು ಪ್ರಿಯಾಂಕ್‌ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಇನ್ಫೋಸಿಸ್‌ನ ಮಾಜಿ ನಿರ್ದೇಶಕ ಮೋಹನ್‌ದಾಸ್ ಪೈ ಅವರು, “ಕರ್ನಾಟಕ ರಾಜ್ಯ ದೊಡ್ಡ ಹೂಡಿಕೆಯನ್ನು ‌ಕಳೆದುಕೊಂಡಿದೆ. ಇವಿ ಕ್ಷೇತ್ರದಲ್ಲಿ ಹೂಡಿಕೆಯನ್ನು ಕರ್ನಾಟಕ ಕಳೆದುಕೊಂಡಿದ್ದು ಏಕೆ? ಕರ್ನಾಟಕ ದೇಶದಲ್ಲೇ ಮೊದಲು ಇವಿ ನೀತಿಯನ್ನು ಜಾರಿಗೊಳಿಸಿದೆ. ಹೂಡಿಕೆ ‌ಆಕರ್ಷಿಸುವ ಬಗ್ಗೆ ಗಮನ‌ ಕೊಡುವ ಕೊರತೆಯೇ” ಎಂದು ಪ್ರಶ್ನಿಸಿದ್ದಾರೆ.

Similar News