ಕೇರಳ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಅಭ್ಯರ್ಥಿಯ ಶೈಕ್ಷಣಿಕ ಹಿನ್ನೆಲೆ ನೋಡಿ ಮತ ನೀಡುವುದಿಲ್ಲ: ಸುಪ್ರೀಂ

Update: 2023-02-21 08:37 GMT

ಹೊಸದಿಲ್ಲಿ: ಭಾರತೀಯ ಚುನಾವಣೆಗಳಲ್ಲಿ ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆಗಳು ಅಪ್ರಸ್ತುತವಾಗುತ್ತದೆ ಮತ್ತು ಕೇರಳ ರಾಜ್ಯ ಮಾತ್ರ ಇದಕ್ಕೆ ಹೊರತಾಗಿರಬಹುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ.

ಹೆಚ್ಚಿನ ಮತದಾರರು ಮತ ಚಲಾಯಿಸುವ ಮೊದಲು ಅಭ್ಯರ್ಥಿಯ ಶೈಕ್ಷಣಿಕ ಹಿನ್ನೆಲೆಯನ್ನು ನೋಡುವುದಿಲ್ಲ ಎಂದು ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರ ಪೀಠ ಟೀಕಿಸಿದೆ.

ಭಾರತೀಯ ಜನತಾ ಪಕ್ಷದ ಶಾಸಕ ಹರ್ಷವರ್ಧನ್ ಬಾಜಪೇಯಿ ಅವರು ತಮ್ಮ ಶೈಕ್ಷಣಿಕ ಅರ್ಹತೆಯ ಬಗ್ಗೆ 2017 ರಲ್ಲಿ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿ ಪೀಠವು ವಿಚಾರಣೆ ನಡೆಸುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 2017 ರಲ್ಲಿ ಉತ್ತರ ಪ್ರದೇಶ ವಿಧಾನಸಭೆಗೆ ಬಾಜಪೇಯಿ ಅವರ ಆಯ್ಕೆಯನ್ನು ಅನೂರ್ಜಿತ ಮತ್ತು ಅಸಿಂಧು ಎಂದು ಘೋಷಿಸಬೇಕೆಂದು ಮಾಜಿ ಕಾಂಗ್ರೆಸ್ ಶಾಸಕ ಅನುಗ್ರಹ ನಾರಾಯಣ್ ಸಿಂಗ್ ಅವರು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.

ಸಿಂಗ್ ಪ್ರಕಾರ, ಬಾಜಪೇಯಿ ಅವರು 2007, 2012 ಮತ್ತು 2017 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳಿಗೆ ತಮ್ಮ ನಾಮಪತ್ರಗಳ ಜೊತೆಗೆ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ತಮ್ಮ ಸರಿಯಾದ ಶೈಕ್ಷಣಿಕ ಅರ್ಹತೆ ಮತ್ತು ಹೊಣೆಗಾರಿಕೆಗಳನ್ನು ಬಹಿರಂಗಪಡಿಸಿಲ್ಲ ಎಂಬ ಆರೋಪಗಳಿವೆ.

ಇಂಗ್ಲೆಂಡ್‌ನಲ್ಲಿರುವ ಸೆಫರ್ಡ್ ಎಂಬ ಅಸ್ತಿತ್ವದಲ್ಲಿಲ್ಲದ ವಿಶ್ವವಿದ್ಯಾನಿಲಯದಿಂದ ಬ್ಯಾಚುಲರ್ ಆಫ್ ಟೆಕ್ನಾಲಜಿ ಪದವಿಯನ್ನು ಹೊಂದುವುದಾಗಿ ಬಾಜ್‌ಪೇಯಿ ಹೇಳಿಕೊಂಡಿದ್ದಾರೆ ಎಂದು ಅವರು ವಾದಿಸಿದರು. 2006 ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ ಎಂದು ಬಾಜ್‌ಪೇಯಿ ಹೇಳಿಕೊಂಡರು, ಅದೇ ವರ್ಷ ಬಿಟೆಕ್ ಪರೀಕ್ಷೆಯಲ್ಲಿ ತೇರ್ಗಡೆಯಾದಾಗಿದ್ದು ಅಸಾಧ್ಯ ಎಂದು ಸಿಂಗ್ ಆರೋಪಿಸಿದರು.

Similar News