ಪಾಶ್ಚಾತ್ಯ ದೇಶಗಳೇ ಉಕ್ರೇನ್ ಯುದ್ಧ ಆರಂಭಿಸಿದ್ದವು: ಪುಟಿನ್

ಉಕ್ರೇನ್ ಸಂಘರ್ಷಕ್ಕೆ 1 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ‘ರಾಷ್ಟ್ರವನ್ನುದ್ದೇಶಿಸಿ ರಶ್ಯ ಅಧ್ಯಕ್ಷ ಭಾಷಣ

Update: 2023-02-21 18:08 GMT

ಮಾಸ್ಕೊ, ಫೆ.21: ಉಕ್ರೇನ್ ಸಂಘರ್ಷವನ್ನು ಪಾಶ್ಚಾತ್ಯ ರಾಷ್ಟ್ರಗಳೇ ಆರಂಭಿಸಿದ್ದವು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಮಂಗಳವಾರ ಆಪಾದಿಸಿದ್ದಾರೆ. ಅಮೆರಿಕದ ನೇತೃತ್ವದ ಪಾಶ್ಚಾತ್ಯ ದೇಶಗಳು ಜಾಗತಿಕ ವ್ಯವಹಾರಗಳಲ್ಲಿ ‘‘ಅಮಿತ ಅಧಿಕಾರವನ್ನು’’ ಹೊಂದಲು ಬಯಸುತ್ತಿವೆ ಎಂದವರುಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಕ್ರೇನ್ ಯುದ್ದಕ್ಕೆ  ಒಂದು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಮಂಗಳವಾರ ಮಾಸ್ಕೊದ ‘ಗೊಸ್ತಿನಿ  ಡ್ವೊರ್’ ವಸ್ತುಪ್ರದರ್ಶನ ಕೇಂದ್ರದ ಸಭಾಭವನದಲ್ಲಿ  ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಪುಟಿನ್,ಪಾಶ್ಚಾತ್ಯ ದೇಶಗಳು  ಹಿಂದೆಂದೂ ಇಲ್ಲದಂತಹ ನಿರ್ಬಂಧಗಳ ಪ್ಯಾಕೇಜ್ಗಳನ್ನು ಹೇರುವ ಮೂಲಕ ರಶ್ಯದ ಆರ್ಥಿಕತೆಯನ್ನು ಭಗ್ನಗೊಳಿಸಲು  ಯತ್ನಿಸುತ್ತಿವೆ. ಇದರಿಂದಾಗಿ ಪಶ್ಚಿಮದ ದೇಶಗಳ ಸಾವಿರಾರು ಕೋಟಿ ಡಾಲರ್ಗಳು  ಅಪಾಯಕ್ಕೆ ಸಿಲುಕಿವೆ. ಆದರೆ ರಶ್ಯದ ಆದಾಯದ ಹರಿವು ಬತ್ತಿಹೋಗಿಲ್ಲವೆಂದವರು ಸಂತೃಪ್ತಿ  ವ್ಯಕ್ತಪಡಿಸಿದರು.

‘‘ ನಮಗೆಲ್ಲರಿಗೂ ತಿಳಿದಂತೆ  ನಮ್ಮ ದೇಶಕ್ಕೆ ಈಗ ಸಂಕಷ್ಟದ ಹಾಗೂ ನಿರ್ಣಾಯಕವಾದ ಕ್ಷಣವಾಗಿದೆ. ನಮ್ಮ ದೇಶವನ್ನು ಹಾಗೂ ನಮ್ಮ ಜನತೆಯನ್ನು ರೂಪಿಸುವ  ಅತ್ಯಂತ ಮಹತ್ವದ ಐತಿಹಾಸಿಕ ಘಟನೆಗಳು ನಡೆಯುತ್ತಿರುವ ಸಮಯವಿದು’’ ಎಂದು ಪುತಿನ್ ಹೇಳಿದ್ದಾರೆ. 

‘‘ಶಾಂತಿಯುತ ಮಾರ್ಗಗಳಿಂದ ಉಕ್ರೇನ್ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿದ್ದುದೆಲ್ಲವನ್ನೂ ನಾವು  ಮಾಡಿದ್ದೇವೆ. ನಾವು ತಾಳ್ಮೆಯಿಂದ ವರ್ತಿಸಿದ್ದೆವು. ಈ ಕಠಿಣವಾದ ಸಂಘರ್ಷದಿಂದ ಹೊರಬರಲು ಶಾಂತಿಯುತ ಮಾರ್ಗವನ್ನು ಕಂಡುಕೊಳ್ಳಲು ನಾವು ಸಂಧಾನ ನಡೆಸಿದ್ದೆವು. ಆದರೆ ನಮ್ಮ ಬೆನ್ನಹಿಂದೆ ಸಂಪೂರ್ಣವಾಗಿ ಬೇರೆಯೇ ಆದ ಸನ್ನಿವೇಶವೊಂದನ್ನು ಸಿದ್ಧಪಡಿಸಲಾಗಿತ್ತು ಎಂದರು.

‘‘ಉಕ್ರೇನ್ ಸಂಘರ್ಷವನ್ನು ರಶ್ಯದೊಂದಿಗಿನ ಜಾಗತಿಕ ಯುದ್ಧವಾಗಿ  ಪರಿವರ್ತಿಸಲು ಪಾಶ್ಚಾತ್ಯದೇಶಗಳು ಯತ್ನಿಸುತ್ತಿವೆ.  ಇದರಿಂದಾಗಿ ರಶ್ಯದ ಅಸ್ತಿತ್ವ ಅಪಾಯಕ್ಕೊಳಗಾಗಿದೆ. ನಮಗೆ ಅದು ಅರಿವಾಗಿದೆ ಹಾಗೂ ಅದಕ್ಕೆ ತಕ್ಕುದಾದ ರೀತಿಯಲ್ಲಿ ಪ್ರತಿಕ್ರಿಯಿಸಲಿದ್ದೇವೆ’’ ಎಂದು ಪುತಿನ್ ಸಂಸದರನ್ನು ಒಳಗೊಂಡ ಸಭೆಯಲ್ಲಿ ಹೇಳಿದರು.

ಉಕ್ರೇನ್ನಲ್ಲಿ ತಾನು ಒಂದು ವರ್ಷದಿಂದ ನಡೆಸುತ್ತಿರುವ ಯುದ್ಧವನ್ನು ಮುಂದುವರಿಸುವುದಾಗಿ ಪುಟಿನ್  ಪ್ರತಿಜ್ಞೆಗೈದರು. ರಶ್ಯವನ್ನು ಸೋಲಿಸಬಹುದು ಎಂಬ ತಪ್ಪು ಗ್ರಹಿಕೆಯೊಂದಿಗೆ ಅಮೆರಿಕ ನೇತೃತ್ವದ ನ್ಯಾಟೊ ಮೈತ್ರಿಕೂಟವು ಸಂಘರ್ಷದ ಜ್ವಾಲೆಗೆ ತುಪ್ಪ್ಪ ಸುರಿಯುತ್ತಿವೆ ಎಂದು ಅವರು  ಆರೋಪಿಸಿದರು.ಜಗತ್ತಿನಾದ್ಯಂತದ ಹಲವಾರು ಪ್ರಾಂತಗಳಲ್ಲಿ ಪಾಶ್ಚಾತ್ಯ ದೇಶಗಳು ಅರಾಜಕತೆ ಹಾಗೂ ಯುದ್ದಗಳ ಪೆಡಂಭೂತವನ್ನು ಬಿಟ್ಟಿವೆ ಎಂದವರು ಹೇಳಿದರು.

ಕಳೆದ ವರ್ಷ ಉಕ್ರೇನ್ನ ನಾಲ್ಕು ಪ್ರಾಂತಗಳನ್ನು ರಶ್ಯವು ಸ್ವಾಧೀನಪಡಿಸಿಕೊಂಡಿದೆಯೆಂದು ಪುಟಿನ್ ಘೋಷಿಸಿದಾಗ ಇಡೀ ಸಭಾಭವನವು  ಕರತಾಡನದ ಮೂಲಕ  ಬೆಂಬಲ ವ್ಯಕ್ತಪಡಿಸಿತು.ಉಕ್ರೇನ್ ಯುದ್ಧದಲ್ಲಿ ಮೃತಪಟ್ಟ ರಶ್ಯನ್ ಯೋಧರ ಗೌರವಾರ್ಥವಾಗಿ ಎದ್ದು ನಿಲ್ಲುವಂತೆ ಅವರು ಸಂಸದರು, ಸೈನಿಕರು, ಬೇಹುಗಾರಿಕಾ ವರಿಷ್ಠರು ಹಾಗೂ ಸರಕಾರಿ ಸ್ವಾಮ್ಯದ ಸಂಸ್ಥೆಗಳ ವರಿಷ್ಛರನ್ನೊಳಗೊಂಡ ಸಭೆಗೆ ಮನವಿ ಮಾಡಿದರು. ಯುದ್ಧದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ವಿಶೇಷ ನಿಧಿಯ ಭರವಸೆಯನ್ನು ಕೂಡಾ ಪುಟಿನ್  ಪ್ರಕಟಿಸಿದರು.

Similar News