ಮಾ.9ರಂದು ಅಂಕೋಲಾದಲ್ಲಿ 'ಮಸ್ನವೀ ಮಾಲಿಕಿ ಕ್ಯಾಂಪಸ್' ಉದ್ಘಾಟನೆ

Update: 2023-02-27 18:49 GMT

ಅಂಕೋಲಾ: ಮಸ್‌ನವೀ ಗ್ಲೋಬಲ್ ಅಕಾಡೆಮಿ(ರಿ)ಯ ಅಧೀನದಲ್ಲಿ ಹನಫಿ ದ‌ಅ್‌ವಾ ಕಾಲೇಜು 'ಮಸ್ನವೀ ಮಾಲಿಕಿ ಕ್ಯಾಂಪಸ್' ಉತ್ತರ ಕನ್ನಡ ಜಿಲ್ಲೆಯ ಅಂಕೋಲದ 'ಕೆಂತ್ರಿ'ಯಲ್ಲಿ ಮಾ.9ರಂದು ಸಂಜೆ 5 ಗಂಟೆಗೆ ಉದ್ಘಾಟನೆಗೊಳ್ಳಲಿದೆ.

ಶೈಖ್ ಅಬ್ದುಲ್ ಖಾದಿರ್ ಜೀಲಾನಿ (ಖ.ಸಿ.) ಅವರ  ಪರಂಪರೆಯಲ್ಲಿ ಜನಿಸಿ, ಇರಾ‌ಖ್‌ನ ಬಗ್ದಾದ್ ನಿಂದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಕ್ಕೆ ಬಂದು ನೆಲೆಸಿ, ಅಲ್ಲೇ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಪ್ರಸಿದ್ಧ ಸೂಫಿ ಸಂತ ಸಯ್ಯಿದ್ ಫತ್‌ಹುಲ್ಲಾ ಶಾಹ್ ಖಾದಿರಿ ಅಲ್ ಬಗ್ದಾದಿ (ರ) ಅವರ ಸ್ಮರಣಾರ್ಥ ಕ್ಯಾಂಪಸ್‌‌ಗೆ 'ಮರ್ಕಝ್ ಸಯ್ಯಿದ್ ಫತ್‌ಹುಲ್ಲಾ ಶಾಹ್ ಖಾದಿರಿ' ಎಂದು ನಾಮಕರಣ ಮಾಡಲಾಗಿದೆ.

'ಮಸ್ನವೀ ಗ್ಲೋಬಲ್ ಅಕಾಡೆಮಿ' ಪ್ರೆಸಿಡೆಂಟ್ ಸಯ್ಯಿದ್ ಇಸ್ಮಾಈಲ್ ಹಾದಿ ತಂಙಳ್ ಉಜಿರೆ ಸಂಸ್ಥೆಯನ್ನು ಉದ್ಘಾಟಿಸಲಿದ್ದು, ಹಝ್ರತ್ ಫತ್‌ಹುಲ್ಲಾ ಶಾಹ್ ಮಖಾಂನಲ್ಲಿ ನಡೆಯುವ ಮಾಸಿಕ 'ಮೆಹ್ಫಿಲೇ ಬಶಾಇರುಲ್ ಖೈರಾತ್' ಸ್ವಲಾತ್ ಮಜ್ಲಿಸ್‌ಗೆ ಅವರು ಚಾಲನೆ ನೀಡಲಿದ್ದಾರೆ.

ಪ್ರತಿ ತಿಂಗಳ ಎರಡನೇ ಶನಿವಾರ ಮಗ್ರಿಬ್ ನಮಾಝಿನ ಬಳಿಕ ಅಂಕೋಲ ದರ್ಗಾದ 'ಫತ್ಹ್ ಮಸ್ಜಿದ್' ನಲ್ಲಿ ಶೈಖ್ ಜೀಲಾನಿ (ರ) ವಿರಚಿತ 'ಬಶಾಇರುಲ್ ಖೈರಾತ್' ಸಲಾತ್ ಮತ್ತು ದುಆ ಮಜ್ಲಿಸ್ ನಡೆಯಲಿದೆ. ಮಸ್ನವೀ ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್, ಉತ್ತರ ಕನ್ನಡ ಜಿಲ್ಲಾ ಖಾಝಿ ಮೌಲಾನಾ ಇಶ್ತಿಯಾಖ್ ಅಹ್ಮದ್, ಇಹ್ಸಾನ್ ಕರ್ನಾಟಕ ಉಪಾಧ್ಯಕ್ಷ ಬಿ.ಎ.ಇಬ್ರಾಹಿಂ ಸಖಾಫಿ ದಾವಣಗೆರೆ ಮುಖ್ಯ ಭಾಷಣ ಮಾಡಲಿದ್ದಾರೆ.

ಅಂಕೋಲ ಮಸ್ನವೀ ಕ್ಯಾಂಪಸ್ ಪ್ರಿನ್ಸಿಪಾಲ್ ಸೆಯ್ದಲವಿ ಸಖಾಫಿ ಗಂಗಾವಳಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು ಮಸ್ನವೀ ಜನರಲ್ ಮ್ಯಾನೇಜರ್  ನೌಫಲ್ ಮದನಿ ನೇಜಾರ್ ಕಾರ್ಯಕ್ರಮ ನಿರ್ವಹಿಸುವರು.

ಅಂಕೋಲ ಅಂಜುಮನ್‌-ಎ- ಇಸ್ಲಾಂ ಅಧ್ಯಕ್ಷ ಮಂಝರ್ ಹುಸೈನ್ ‌ಸಯ್ಯದ್, ಜಿಲ್ಲಾ‌ ವಖ್ಫ್ ಸಲಹಾ ಮಂಡಳಿ ಉಪಾಧ್ಯಕ್ಷ ನವಾಝ್ ಅಂಕೋಲ, ಡಾ.ಸಯ್ಯಿದ್ ಇರ್ಫಾನ್ ಪೀರ್ಝಾದೆ, ಸಯ್ಯಿದ್ ಅಬ್ದುಲ್ ರಝಾಖ್ ಖಾದಿರಿ, ಉತ್ತರ ಕನ್ನಡ ಜಿಲ್ಲಾ ಮುಸ್ಲಿಂ ಜಮಾಅತ್ ಅಧ್ಯಕ್ಷ ಬಿ.ನೂರುಲ್ಲಾ ಕುಮಟಾ, ಶಿರಸಿ ಮದೀನತುನ್ನಬಿ ಸಂಸ್ಥೆಯ ನೂರ್ ಅಹ್ಮದ್ ಕಣವಳ್ಳಿ, ಎಸ್.ವೈ.ಎಸ್.ಉ.ಕ. ಜಿಲ್ಲಾಧ್ಯಕ್ಷ ಕೆ.ಎಂ.ಶರೀಫ್ ಭಟ್ಕಲ್, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಆರಿಫ್ ಸ‌ಅದಿ, ಗಂಗಾವಳಿ ಜಾಮಿಅ ಮಸ್ಜಿದ್ ಅಧ್ಯಕ್ಷ ನಝೀರ್ ಅಬ್ದುಲ್ ಖಾದಿರ್, ಖತೀಬ್ ಅಬ್ದುಲ್ ಕಲಾಂ ಸ‌ಅದಿ, ಅಂಕೋಲ ಪುರಸಭೆ ಸದಸ್ಯ ನಾಗರಾಜ್ ಐಗಲ್, ದಾಂಡೇಲಿ ಅಂಜುಮನ್ ಎ ಇಸ್ಲಾಂ ಕಾರ್ಯದರ್ಶಿ ಇಖ್‌ಬಾಲ್ ಶೈಖ್, ಹಂಝ ಪಟೇಲ್ ಹೊನ್ನಾವರ, ಮಖ್‌ಬೂಲ್ ಹಲ್‌ವಾಯಿಗರ್ ಯಲ್ಲಾಪುರ, ಅಬ್ದುಲ್ ಖಾದರ್ ಜೀಲಾನಿ ಕೆಂತ್ರಿ, ಮಂಗಳೂರು ಮಸ್ನವೀ ಖುರಾನಿಕ್ ಸೆಂಟರ್ ಡೈರೆಕ್ಟರ್ ಹಾಜಿ ಮೊಯ್ದೀನ್ ಅಲ್‌ ಸಫರ್, ಮ್ಯಾನೇಜರ್ ಕೆ.ಎಂ.ರಶೀದ್ ಬೋಳಾರ್  ಮುಖ್ಯ ಅತಿಥಿಗಳಾಗಿರುವರು.

ಸಮುದಾಯದ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ  ಬಹುಮುಖ  ಯೋಜನೆಗಳೊಂದಿಗೆ ಮಂಗಳೂರು ಕೇಂದ್ರವಾಗಿ ಕಾರ್ಯಾಚರಿಸುವ 'ಮಸ್ನವೀ'ಯ ಹನಫಿ ಕ್ಯಾಂಪಸ್ ಇದಾಗಿದ್ದು, ಹತ್ತನೇ ತರಗತಿ ಮುಗಿಸಿದ ಬಾಲಕರಿಗೆ ಧಾರ್ಮಿಕ ಮತ್ತು ಲೌಕಿಕ ಪದವಿ ಶಿಕ್ಷಣ ನೀಡಲಾಗುವುದು. ಈಗಾಗಲೇ ಮಂಗಳೂರು ನಗರದ ಫಲ್ನೀರ್‌ನಲ್ಲಿ ಮಸ್ನವೀ ಖುರಾನಿಕ್ ಸೆಂಟರ್ ಕಾರ್ಯಾಚರಿಸುತ್ತಿದೆ ಎಂದು ಪ್ರಕಟನೆ ತಿಳಿಸಿದೆ.

Similar News