ಬಿಜೆಪಿ ‘ಭ್ರಷ್ಟ ಜನತಾ ಪಾರ್ಟಿ’: ರಣದೀಪ್‌ಸಿಂಗ್ ಸುರ್ಜೇವಾಲ

ನೈತಿಕ ಹೊಣೆ ಹೊತ್ತು ಬೊಮ್ಮಾಯಿ ರಾಜೀನಾಮೆಗೆ ಆಗ್ರಹ

Update: 2023-03-03 14:46 GMT

ಉಡುಪಿ: ಬಿಜೆಪಿ ಶಾಸಕ ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ನಿಯಮಿತ ಅಧ್ಯಕ್ಷ ವಿರೂಪಾಕ್ಷಪ್ಪ ಅವರ ಮನೆಯಲ್ಲಿ ಆರು ಕೋಟಿ ರೂ. ನಗದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಬಸವರಾಜ ಬೊಮ್ಮಾಯಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವುದು ಸಾಬೀತಾಗಿದೆ. ಹೀಗಾಗಿ ಬಿಜೆಪಿ ‘ಭ್ರಷ್ಟ ಜನತಾ ಪಾರ್ಟಿ’ಯಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಹೇಳಿದ್ದಾರೆ.

ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು. ಈ ಹಿನ್ನೆಲೆಯಲ್ಲಿ ಚೆನ್ನಗಿರಿ ಶಾಸಕ ವಿರೂಪಾಕ್ಷಪ್ಪರನ್ನು ಬಂಧಿಸಬೇಕು. ಕೈಗಾರಿಕಾ ಸಚಿವ ನಿರಾಣಿ ತಲೆದಂಡವಾಗಬೇಕು ಹಾಗೂ ಇವೆಲ್ಲವಕ್ಕೂ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ರಾಜೀನಾಮೆ ನೀಡಬೇಕು ಎಂದು ಸುರ್ಜೇವಾಲ ಒತ್ತಾಯಿಸಿದರು.

ಇತ್ತೀಚಿನ ಎಲ್ಲಾ ಪ್ರಕರಣಗಳು ಬೊಮ್ಮಾಯಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ ಎಂಬುದು ಸಾಬೀತುಗೊಳಿಸುತ್ತದೆ. 40 ಪರ್ಸೆಂಟ್ ಭ್ರಷ್ಟ ಸರಕಾರದಿಂದ ರಾಜ್ಯವೇ ತಲೆತಗ್ಗಿಸುವಂತಾಗಿದೆ. ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ 40 ಲಕ್ಷ ರೂ.ನೊಂದಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. 24 ಗಂಟೆ ಒಳಗೆ ಮನೆಯಲ್ಲಿ 6 ಕೋಟಿ ರೂ. ನಗದು  ಪತ್ತೆಯಾಗಿದೆ ಎಂದವರು ಹೇಳಿದರು.

ಮೈಸೂರು ಸ್ಯಾಂಡಲ್ ಸುವಾಸನೆಯನ್ನು ಇವರು ಭ್ರಷ್ಟ ಗೊಳಿಸಿದ್ದಾರೆ. ಇದು ರಾಜ್ಯ ಸರಕಾರದ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿ. ಸಾಬೂನಿನಿಂದಲೇ ಇಷ್ಟೊಂದು ಭ್ರಷ್ಟಾಚಾರವಾಗಿದ್ದರೆ ರಾಜ್ಯದ  ಭ್ರಷ್ಟಾಚಾರ ಪ್ರಮಾಣ ಎಷ್ಟಿರಬಹುದು ಹಾಗೂ ಶಾಸಕ ವಿರುಪಾಕ್ಷಪ್ಪ ಎಲ್ಲಿ ತಲೆಮರಸಿಕೊಂಡಿದ್ದಾರೆ? ಎಂದವರು ಪ್ರಶ್ನಿಸಿದರು.

ಪ್ರಶ್ನೆಗಳ ಸುರಿಮಳೆ...: ಈ ಎಲ್ಲಾ ಭ್ರಷ್ಟಾಚಾರದ ಹಣ ಎಲ್ಲಿಗೆ ಹೋಗುತ್ತಿದೆ ? ರಾಜ್ಯದಲ್ಲಿ ಲೂಟಿ ಹೊಡೆದ ಹಣಕ್ಕೆ ಯಾರು ಜವಾಬ್ದಾರಿ? ಲೂಟಿ ಹೊಡೆದ ಹಣದಲ್ಲಿ ಬಸವರಾಜ್ ಬೊಮ್ಮಾಯಿ, ಮಂತ್ರಿಗಳಿಗೆ  ಎಷ್ಟು ಪಾಲು ಇದೆ? ಕೈಗಾರಿಕಾ ಸಚಿವ ನಿರಾಣಿಯ ತಲೆದಂಡ ಆಗಿಲ್ಲ ಯಾಕೆ? ಕೆಎಸ್‌ಡಿಎಲ್ ಅಧ್ಯಕ್ಷ ಶಾಸಕ ವಿರೂಪಾಕ್ಷಪ್ಪ ತಲೆಮರೆಸಿಕೊಳ್ಳಲು ಬಿಟ್ಟಿದ್ಯಾಕೆ? ಎಂದು ಸುರ್ಜೇವಾಲ ಪ್ರಶ್ನಿಸಿದರು.

ಈ ಭ್ರಷ್ಟಾಚಾರದಲ್ಲಿ ಬಸವರಾಜ ಬೊಮ್ಮಾಯಿ ಪಾತ್ರ ಏನು? ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೌನ ಇರುವುದು ಯಾಕೆ? ನರೇಂದ್ರ ಮೋದಿ ಒಂದು ವಾಕ್ಯ ಒಂದು ಮಾತನಾಡುತ್ತಿಲ್ಲ ಯಾಕೆ? ಜೆ.ಪಿ. ನಡ್ದಾ, ಅಮಿತ್ ಶಾ ಎಲ್ಲಿದ್ದೀರಿ..!?  ಇಡಿ, ಸಿಬಿಐ ಯಾವಾಗ ಕರ್ನಾಟಕಕ್ಕೆ ಬರುತ್ತದೆ? ಶಾಸಕರು, ಮಂತ್ರಿಗಳ, ಮುಖ್ಯಮಂತ್ರಿಗಳ ಮನೆಗೆ ಯಾವಾಗ ದಾಳಿ ಮಾಡುತ್ತೀರಿ?......ನಾಡಿನ ಜನರ ಪರವಾಗಿ ನಾನು ಈ ಎಲ್ಲ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ ಎಂದು ಅವರು ನುಡಿದರು.

ಚೆನ್ನಗಿರಿ ಶಾಸಕ ವಿರೂಪಾಕ್ಷಪ್ಪನ ಬಂಧನ ಆಗಬೇಕು, ಕೈಗಾರಿಕಾ ಸಚಿವ ನಿರಾಣಿಯ ತಲೆದಂಡ ಆಗಬೇಕು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಬೊಮ್ಮಾಯಿ ಮೂಗಿನ ಕೆಳಗೆ ನಡೆದ ಭ್ರಷ್ಟಾಚಾರ ಬಯಲಾಗಿದೆ. ಭ್ರಷ್ಟಾಚಾರದ ಹಣದಲ್ಲಿ ಯಾರಿಗೆಲ್ಲ ಪಾಲು ಇದೆ ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಬೇಕು ಎಂದವರು ಆಗ್ರಹಿಸಿದರು.

ನೀರು ಸರಬರಾಜು ಹಾಗೂ ಒಳಚರಂಡಿ ಬೋರ್ಡ್‌ನಲ್ಲಿ ಈವರೆಗೆ ಎಷ್ಟು ಸಾವಿರ ಕೋಟಿ ಲೂಟಿ ಮಾಡಿದ್ದೀರಿ? ಎಂದು ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಒಂದು ವಾರದಲ್ಲಿ ರಾಜ್ಯದ ಮುಖ್ಯ ನ್ಯಾಯ ಮೂರ್ತಿಗಳು ಈ ಬಗ್ಗೆ ತನಿಖೆ ನಡೆಸಬೇಕು. ಭ್ರಷ್ಟಾಚಾರ ಮತ್ತು ಲೂಟಿಯ ಸಂಪೂರ್ಣ ದಾಖಲೆಯನ್ನು ತೆರೆದಿಡಬೇಕು ಎಂದರಲ್ಲದೇ ಬೊಮ್ಮಾಯಿ ಸರಕಾರ ಭ್ರಷ್ಟಾಚಾರದಲ್ಲಿ ವಿಶ್ವವಿಖ್ಯಾತಿಯನ್ನು ಪಡೆದಿದೆ ಎಂದರು.

Similar News