2.65 ಕೋ.ರೂ. ವೆಚ್ಚದ ಎಂಆರ್ಎಫ್ ಘಟಕ ಉದ್ಘಾಟನೆ
ಉಡುಪಿ, ಮಾ.7: ಕರ್ವಾಲಿನಲ್ಲಿ ಆರಂಭಿಸಿರುವ ಎಂಆರ್ಎಫ್ ಘಟಕ ದಲ್ಲಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಮೂಲಕ ಉಡುಪಿ ನಗರವನ್ನು ಇನ್ನಷ್ಟು ಸ್ವಚ್ಛ ಮತ್ತು ಸುಂದರ ನಗರವನ್ನಾಗಿ ಮಾಡಲು ಸಾಧ್ಯ ವಾಗಲಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.
ಕರ್ವಾಲುನಲ್ಲಿ ಉಡುಪಿ ನಗರಸಭೆಯಿಂದ, 2.65 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ 10 ಟನ್ ಸಾಮರ್ಥ್ಯದ ನೂತನ ಎಂಆರ್ಎಫ್ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉಡುಪಿ ನಗರದಲ್ಲಿ ಪ್ರಸ್ತುತ ಪ್ರತಿದಿನ 20ಟನ್ ಒಣ ಕಸ ಸಂಗ್ರಹ ನಡೆಯುತ್ತಿದ್ದು, ಬೀಡಿನಗುಡ್ಡೆ ಮತ್ತು ಕರಾವಳಿ ಬೈಪಾಸ್ ಬಳಿ ಇರುವ ತಲಾ 4 ಟನ್ ಸಾಮರ್ಥ್ಯ ಮಿನಿ ಎಂ.ಆರ್.ಎಫ್ ಘಟಕಗಳ ಮೂಲಕ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿದೆ. ಈ ನೂತನ ಘಟಕದಲ್ಲಿ 12 ಟನ್ ವರೆಗೂ ಕಸ ವಿಲೇವಾರಿ ಮಾಡಲು ಸಾಧ್ಯವಾಗಲಿದೆ. ಮುಂದಿನ ದಿನದಲ್ಲಿ ಇದನ್ನು ಇನ್ನೂ ಹೆಚ್ಚುವರಿ 10ಟನ್ ಸಾಮರ್ಥ್ಯದವರೆಗೆ ವಿಸ್ತರಣೆ ಮಾಡಲಾಗುವುದು ಎಂದರು.
ನಗರದಲ್ಲಿ ಸಂಗ್ರಹವಾಗುತ್ತಿರುವ ಹಸಿ ಕಸದ ವಿಲೇವಾರಿಗಾಗಿ ಕರ್ವಾಲು ನಲ್ಲಿ ಶೀಘ್ರದಲ್ಲಿ ಪ್ರತ್ಯೇಕ ವಿಲೇ ಘಟಕ ಆರಂಭಿಸಲಾಗುವುದು. ನೂತನ ಎಂಆರ್ಎಫ್ ಘಟಕದಲ್ಲಿ ಒಣ ಕಸವನ್ನು ವೈಜ್ಞಾನಿಕವಾಗಿ ಬೇರ್ಪಡಿಸಿ, ಬೇಲಿಂಗ್ ಮಾಡಿ ಮಾರಾಟ ಮಾಡಬಹುದಾಗಿದೆ. ಇದರ ನಿರ್ವಹಣೆಯನ್ನು ಪ್ರಾಯೋಗಿಕವಾಗಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ನೀಡಲಾಗು ವುದು ಎಂದು ಅವರು ತಿಳಿಸಿದರು.
ಕರ್ವಾಲುನಲ್ಲಿ ಈಗಾಗಲೇ ಸಂಗ್ರಹವಾಗಿರುವ ಕಸವನ್ನೂ ಸಹ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದರ ಮೂಲಕ, ಈ ಪ್ರದೇಶವನ್ನು ಪರಿಸರಕ್ಕೆ ಪೂರಕವಾಗುವ ರೀತಿಯಲ್ಲಿ ನಿರ್ವಹಣೆ ಮಾಡಲಾಗುವುದು. ಉಡುಪಿ ನಗರದ ಸ್ವಚ್ಛತೆಯ ದೃಷ್ಟಿಯಿಂದ ಎಂ.ಆರ್.ಎಫ್ ಘಟಕದ ನಿರ್ಮಾಣವು ಅತ್ಯಂತ ಪ್ರಮುಖವಾಗಿದೆ ಎಂದು ಅವರು ಹೇಳಿದರು.
ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ., ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್, ಪೌರಾಯುಕ್ತ ಉದ ಶೆಟ್ಟಿ, ನಗರಸಭೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಯಶ್ವಂತ ಪ್ರಭು, ಪರಿಸರ ಅಧಿಕಾರಿ ಸ್ನೇಹಾ ಹಾಗೂ ನಗರಸಭೆಯ ಸದಸ್ಯರುಗಳು ಮೊದ ಲಾದವರು ಉಪಸ್ಥಿತರಿದ್ದರು.