ನನಗೆ ಏನಾದರೂ ಸಂಭವಿಸಿದರೆ ಕೇಂದ್ರ ಸರಕಾರ ಹೊಣೆ: Z+ಭದ್ರತೆ ಹಿಂಪಡೆದ ಬಗ್ಗೆ ಜಮ್ಮು&ಕಾಶ್ಮೀರ ಮಾಜಿ ರಾಜ್ಯಪಾಲ ಅಸಮಾಧಾನ
ಆರ್ಟಿಕಲ್ 370 ರದ್ದು ಪಡಿಸುವ ವೇಳೆ ರಾಜ್ಯದ ವಿಧಾನಸಭೆಯನ್ನು ವಿಸರ್ಜಿಸಿದ್ದ ಸತ್ಯಪಾಲ್ ಮಲಿಕ್
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ (Satyapal Malik) ಅವರು ತಮ್ಮ ಝಡ್ ಪ್ಲಸ್ ಭದ್ರತೆಯನ್ನು ಹಿಂಪಡೆದಿರುವುದನ್ನು ತೀವ್ರವಾಗಿ ಟೀಕಿಸಿದ್ದಾರೆ.
ಝಡ್-ಪ್ಲಸ್ ಭದ್ರತೆ (Z-plus security) ಅಡಿಯಲ್ಲಿ ತನಗೆ ಇನ್ನು ಮುಂದೆ ಕಮಾಂಡೋಗಳ ರಕ್ಷಣೆ ಇರುವುದಿಲ್ಲ ಎಂದು ಪೊಲೀಸ್ ಪ್ರಧಾನ ಕಛೇರಿಯಿಂದ ನನಗೆ ಮಾಹಿತಿ ಸಿಕ್ಕಿದೆ ಎಂದು ಮಲಿಕ್ ಹೇಳಿದರು.
"ನನಗೆ ಕೇವಲ ಪಿಎಸ್ಒ (ವೈಯಕ್ತಿಕ ಭದ್ರತಾ ಅಧಿಕಾರಿ)ಯನ್ನು ನೀಡಲಾಗಿದೆ, ಅವರು ಕಳೆದ ಮೂರು ದಿನಗಳಿಂದ ಬರಲಿಲ್ಲ. ಯಾರಾದರೂ ನನ್ನ ಮೇಲೆ ದಾಳಿ ಮಾಡಬಹುದು." ಎಂದು ಮಲಿಕ್ NDTV ಗೆ ತಿಳಿಸಿದ್ದಾರೆ.
"ಜಮ್ಮು ಮತ್ತು ಕಾಶ್ಮೀರದ ಹಿಂದಿನ ಎಲ್ಲಾ ರಾಜ್ಯಪಾಲರು ಉತ್ತಮ ಭದ್ರತೆಯನ್ನು ಹೊಂದಿದ್ದಾರೆ. ನನಗೆ ಏನಾದರೂ ಸಂಭವಿಸಿದರೆ, ಕೇಂದ್ರ ಸರ್ಕಾರವು ಅದಕ್ಕೆ ಜವಾಬ್ದಾರಿ. ನಾನು ರಾಜ್ಯಪಾಲನಾಗಿದ್ದಾಗ, ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆಯನ್ನು ವಿಸರ್ಜಿಸಿದ್ದೇನೆ. ಆರ್ಟಿಕಲ್ 370 ಯನ್ನು ನನ್ನ ಅಧಿಕಾರಾವಧಿಯಲ್ಲಿ ತೆಗೆದುಹಾಕಲಾಯಿತು," ಎಂದು ಮಲಿಕ್ ಹೇಳಿದರು.
2019 ರ ಆಗಸ್ಟ್ನಲ್ಲಿ ಕೇಂದ್ರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ, ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದಾಗ ಸತ್ಯಪಾಲ್ ಮಲಿಕ್ ಅವರು ರಾಜ್ಯಪಾಲರಾಗಿದ್ದರು.
ಕೃಷಿ ಕಾನೂನು ಸೇರಿದಂತೆ ಹಲವಾರು ವಿಷಯಗಳಲ್ಲಿ ಮಲಿಕ್ ಕೇಂದ್ರದ ಬಿಜೆಪಿ ಸರ್ಕಾರವನ್ನು ಎದುರು ಹಾಕಿಕೊಂಡಿದ್ದಾರೆ. ಹೊಸ ಕೃಷಿ ಕಾನೂನುಗಳ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಅವರು ರೈತರಿಗೆ ಬೆಂಬಲ ನೀಡಿದ್ದರು, ಅಲ್ಲದೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಕಡತಗಳನ್ನು ತೆರವುಗೊಳಿಸಲು ರೂ. 300 ಕೋಟಿ ಲಂಚದ ಆಮಿಷವನ್ನು ತನಗೆ ನೀಡಲಾಗಿತ್ತು ಎಂದು ಅವರು ಆರೋಪಿಸಿದ್ದರು.
ಮಲಿಕ್ ಅವರನ್ನು 2017 ರಲ್ಲಿ ಬಿಹಾರ ಗವರ್ನರ್ ಆಗಿ ನೇಮಿಸಲಾಗಿತ್ತು. 2018 ರಲ್ಲಿ ಅವರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ, 2019 ರಲ್ಲಿ ಗೋವಾ ಮತ್ತು 2020 ರಲ್ಲಿ ಮೇಘಾಲಯಕ್ಕೆ ಸ್ಥಳಾಂತರಿಸಲಾಯಿತು. ಅವರ ಐದು ವರ್ಷಗಳ ಅವಧಿಯು ವಿವಿಧ ರಾಜ್ಯಗಳಲ್ಲಿ ಹಂಚಿ ಹೋಗಿತ್ತು. ಅಕ್ಟೋಬರ್ 2022 ರಲ್ಲಿ ಅವರ ಅಧಿಕಾರವಧಿಯು ಮುಕ್ತಾಯಗೊಂಡಿತ್ತು.
ಇದನ್ನೂ ಓದಿ: ವಿವಿಗಳಲ್ಲಿ ಬೋಧಿಸಲ್ಪಡಲಿದೆ ‘ವಿಶ್ವಗುರು’ ರಾಜತಾಂತ್ರಿಕತೆ: ವರದಿ