×
Ad

ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾ ಆರೋಗ್ಯ ಯೋಜನೆ

Update: 2023-03-14 18:57 IST

ಉಡುಪಿ, ಮಾ.14: ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾಆರೋಗ್ಯ ಯೋಜನೆ ಕಾರ್ಡ್‌ಗಳ ಮೂಲಕ ದೇಶದಾದ್ಯಂತ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯ ಪಡೆಯಲು ಅನುಕೂಲಕರ ವಾಗಿದ್ದು, ಸಾರ್ವಜನಿಕರು ಈ ಯೋಜನೆಯ ಸೌಲಭ್ಯ ಪಡೆಯಲು ತಮ್ಮ ಹತ್ತಿರದ ಗ್ರಾಮಒನ್ ಹಾಗೂ ಕರ್ನಾಟಕ ಒನ್‌ಸೆಂಟರ್‌ಗಳ ಮೂಲಕ ನೋಂದಾವಣೆ ಮಾಡಬಹುದಾಗಿದೆ.

ಹೆಚ್ಚಿನ ಚಿಕಿತ್ಸೆಗೆ ಮೇಲ್ದರ್ಜೆಯ ಆಸ್ಪತ್ರೆಗಳಿಗೆ ಆನ್‌ಲೈನ್ ಮೂಲಕ ರೆಫೆರಲ್ ನೀಡಲು ಎಬಿಪಿಎಂಜೆಎವೈ ಕಾರ್ಡ್‌ಗಳು ಅವಶ್ಯವಿದ್ದು, ಆಧಾರ್ ಕಾರ್ಡ್‌ಗೆ ಜೋಡಣೆಯಾಗಿರುವ ಮೊಬೈಲ್ ನಂಬರ್, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಆಧಾರದ ಮೇಲೆ ಎಬಿಪಿಂಜೆಎವೈ ಕಾರ್ಡ್‌ಗಳನ್ನು ನೋಂದಾವಣೆ ಮಾಡಲಾಗುವುದು.

ಈ ಕಾರ್ಡಿನಲ್ಲಿ ಆಭಾ (ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್) 14 ಸಂಖ್ಯೆಯ ನಂಬರ್ ಇರುವುದರಿಂದ ರೋಗಿಯ ಆರೋಗ್ಯ ದತ್ತಾಂಶವನ್ನು ಸಂಗ್ರಹಿಸಲು ಅವಕಾಶ ಕಲ್ಪಿಸಲಾಗಿದ್ದು, ಇದರಿಂದ ಚಿಕಿತ್ಸೆ ಸಂದರ್ಭದಲ್ಲಿ ರೋಗಿಯ ಹಿಂದಿನ ಚಿಕಿತ್ಸೆಯ ದತ್ತಾಂಶ ದೊರೆತು ಶೀಘ್ರವಾಗಿ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ.

ಅರ್ಹತೆ ಮತ್ತು ಚಿಕಿತ್ಸಾ ಮೊತ್ತ: ಬಿಪಿಎಲ್ ಪಡಿತರ ಕಾರ್ಡ್ ಹೊಂದಿರುವವರು ಮತ್ತು ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯಲ್ಲಿ (ಆರ್‌ಎಸ್‌ಬಿವೈ) ನೋಂದಾಯಿತರಾಗಿರುವ ಫಲಾನುಭವಿಗಳು ವಾರ್ಷಿಕ ಕುಟುಂಬಕ್ಕೆ ತಲಾ 5,00,000ರೂ. ವರೆಗೂ ನೋಂದಾಯಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ.

ಎಪಿಎಲ್‌ ಕಾರ್ಡ್‌ದಾರರು ಅಥವಾ ಬಿಪಿಎಲ್ ಕಾರ್ಡ್ ಹೊಂದಿಲ್ಲದವರು ಪಾವತಿ ಆಧಾರದ ಮೇಲೆ ಸರಕಾರಿ ಪ್ಯಾಕೇಜ್‌ದರದ ಶೇ.30ರಷ್ಟು  ಚಿಕಿತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಪ್ರತಿ ಕುಟುಂಬಕ್ಕೆ 1,50,000ರೂ.ವರೆಗೆ ರಿಯಾಯಿತಿ ಪಡೆಯಬಹುದಾಗಿದೆ.

ಈ ಯೋಜನೆಯಲ್ಲಿ ರೋಗಗಳ ಚಿಕಿತ್ಸೆಯನ್ನು 4 ಹಂತದಲ್ಲಿ ವಿಭಜಿಸ ಲಾಗಿದ್ದು, ಚಿಕಿತ್ಸಾ ಕೋಡ್‌ಗಳಾದ ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸಾ ವಿಧಾನಗಳು (2ಎ), ಕ್ಲಿಷ್ಟಕರ ದ್ವಿತೀಯ ಹಂತದ 254 ಚಿಕಿತ್ಸಾ ವಿಧಾನಗಳು (2ಬಿ), ತೃತೀಯ ಹಂತದ 900 ಚಿಕಿತ್ಸಾ ವಿಧಾನಗಳು (3ಎ) ಮತ್ತು ತುರ್ತುಚಿಕಿತ್ಸೆ 169 ಚಿಕಿತ್ಸಾ ವಿಧಾನಗಳು ಮತ್ತು 36 ಉಪಚಿಕಿತ್ಸಾ ವಿಧಾನಗಳು (4ಎ) ಆಗಿದ್ದು, ಒಟ್ಟು 1650 ಚಿಕಿತ್ಸಾ ಕೋಡುಗಳು ಮತ್ತು 8 ಕೋವಿಡ್ ಕೋಡುಗಳು ಲಭ್ಯವಿರುತ್ತವೆ.

ಯೋಜನೆಯ ಸೌಲಭ್ಯ ಪಡೆಯುವ ವಿಧಾನ: ಯಾವುದೇ ವ್ಯಕ್ತಿಗೆ ರೋಗ ಲಕ್ಷಣಗಳು ಕಂಡುಬಂದಲ್ಲಿ ಪ್ರಥಮವಾಗಿ ಹತ್ತಿರದ ಸರಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು. ಪ್ರಾಥಮಿಕ ಮತ್ತು ಸಾಮಾನ್ಯ ದ್ವಿತೀಯ ಚಿಕಿತ್ಸೆಗಳನ್ನು ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುವುದು. ದ್ವಿತೀಯ ಕ್ಲಿಷ್ಟಕರ ಚಿಕಿತ್ಸೆಗಳು ಮತ್ತು ತೃತೀಯ ಹಂತದ ಕಾಯಿಲೆಗಳಿಗೆ ಸರಕಾರಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಲಭ್ಯವಿದ್ದಲ್ಲಿ ಅಲ್ಲಿಯೇ ನೀಡಲಾಗುತ್ತದೆ. ಇಲ್ಲದಿದ್ದಲ್ಲಿ ರೆಫರಲ್ ನೀಡ ಲಾಗುತ್ತದೆ. ರೆಫರಲ್ ಪಡೆದುಕೊಂಡ ರೋಗಿಯು ತಾನು ಇಚ್ಛಿಸುವ ಯಾವುದೇ ನೊಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯ ಬಹುದಾಗಿದೆ. ರಸ್ತೆ ಅಪಘಾತ ಸೇರಿದಂತೆ 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೇ ನೇರವಾಗಿ ನೊಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದಾಗಿದೆ.

ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರಕಾರಿ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಮತ್ತು ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿರುವ ಆರೋಗ್ಯ ಮಿತ್ರರನ್ನು ಅಥವಾ ಆರೋಗ್ಯ ಸಹಾಯವಾಣಿ 104 ಮತ್ತು 14555ಗೆ ಕರೆ ಮಾಡಿ ಮಾಹಿತಿ ಪಡೆಯ ಬಹುದು. 

ಅಥವಾ ಜಿಲ್ಲೆಯ ಆರೋಗ್ಯ ಮಿತ್ರರಾದ ಉಡುಪಿ ಜಿಲ್ಲಾ ಆಸ್ಪತ್ರೆಯ ಪುಷ್ಪ ಜೆ ಶೆಟ್ಟಿ ಮೊ.ನಂ: 9480819591, ಉಡುಪಿಯ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ  ಸುಜನ್‌ಮಾಲ ಎ. ಮೊ.ನಂ:9480819596 ಹಾಗೂ ಹರೀಶ್ ಎಸ್ ಮೊ.ನಂ: 9480819597, ಕಾರ್ಕಳ ಸಾರ್ವಜನಿಕ ಆಸ್ಪತ್ರೆಯ ಚೇತನ್ ಪ್ರಭು ಮೊ.ನಂ: 9480819592, ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ರಜನಿ ಮೊ.ನಂ: 8088036117, ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಕಿರಣ್‌ಕುಮಾರ್ ಮೊ.ನಂ: 7348806832, ಮಣಿಪಾಲ ಕೆಎಂಸಿಯ ಮೇಘಶ್ರೀ ಆಚಾರ್ಯ ಮೊ.ನಂ: 9480819595, ನಾಗರತ್ನ ಕುಕ್ಕುಜೆ ಮೊ.ನಂ: 9480819593, ಶೋಭಾ ಡಿ. ಮೊ.ನಂ: 9480819594, ಚೆನ್ನಕೇಶವ ಮೊ.ನಂ: 7349725183 ಹಾಗೂ ವಿನೋದ್ ಮೊ.ನಂ: 8431194639 ಮತ್ತು ನಗರದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಜಿಲ್ಲಾ ಸಂಯೋಜಕಿ ಡಾ. ತೇಜಸ್ವಿನಿ ಎ. ಮೊ.ನಂ:9480819766 ಇವರನ್ನು ಸಂಪರ್ಕಿಸಬಹುದಾಗಿದೆ. 

ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾಆರೋಗ್ಯ ಯೋಜನೆ ಕಾರ್ಡ್‌ಗಳನ್ನು ಪಡೆಯುವಲ್ಲಿ ಯಾವುದೇ ಸಂದೇಹಗಳಿದ್ದಲ್ಲಿ ಹತ್ತಿರದ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಅಧಿಕಾರಿ ಡಾ.ನಾಗಭೂಷಣ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Similar News