ಭಾರತದ ಮತಾಂತರ ವಿರೋಧಿ ಕಾಯ್ದೆಗಳಿಂದ ಅಂತರ್ ರಾಷ್ಟ್ರೀಯ ಮಾನವ ಹಕ್ಕು ಕಾನೂನು ಉಲ್ಲಂಘನೆ: USCIRF
ಹೊಸದಿಲ್ಲಿ: ಭಾರತದಲ್ಲಿ ವಿವಿಧ ರಾಜ್ಯ ಸರಕಾರಗಳು ತಂದಿರುವ ಮತಾಂತರ ವಿರೋಧಿ ಕಾಯ್ದೆಗಳು ದೇಶವು ಸಹಿ ಮಾಡಿರುವ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಒಪ್ಪಂದಗಳನ್ನು ಉಲ್ಲಂಘಿಸಿವೆ ಎಂದು ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಆಯೋಗ (USCIRF)ವು ಮಂಗಳವಾರ ಬಿಡುಗಡೆಗೊಳಿಸಿದ ತನ್ನ ನೂತನ ವರದಿಯಲ್ಲಿ ಹೇಳಿದೆ.
ವರದಿಯು ಭಾರತದ 12 ರಾಜ್ಯಗಳಲ್ಲಿ ತರಲಾಗಿರುವ ಮತಾಂತರ ವಿರೋಧಿ ಕಾನೂನುಗಳನ್ನು ಪರಿಶೀಲಿಸಿದ್ದು, ಇವು ಮಾನವ ಹಕ್ಕುಗಳ ಕುರಿತು ಸಾರ್ವತ್ರಿಕ ಘೋಷಣೆ (ಯುಡಿಎಚ್ಆರ್) ಹಾಗೂ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಕುರಿತು ಅಂತರ್ ರಾಷ್ಟ್ರೀಯ ಒಪ್ಪಂದ (ಐಸಿಸಿಪಿಆರ್)ವನ್ನು ಉಲ್ಲಂಘಿಸಿವೆ ಎಂದು ಬೆಟ್ಟು ಮಾಡಿದೆ.
USCIRF ಅಮೆರಿಕ ಸರಕಾರದ ಸಂಸ್ಥೆಯಾಗಿದ್ದು, ಧಾರ್ಮಿಕ ನೀತಿಗಳ ಮೇಲೆ ನಿಗಾಯಿರಿಸುತ್ತದೆ ಮತ್ತು ಸೂಕ್ತ ಶಿಫಾರಸುಗಳನ್ನು ಮಾಡುತ್ತದೆ, ಆದರೆ ಅಮೆರಿಕದ ಗೃಹ ಇಲಾಖೆಯು ಈ ಶಿಫಾರಸುಗಳನ್ನು ಜಾರಿಗೊಳಿಸಲು ಬದ್ಧವಾಗಿಲ್ಲ. ಉದಾಹರಣೆಗೆ ಯುಎಸ್ಸಿಐಆರ್ಎಫ್ ಸತತ ಎರಡು ವರ್ಷ ಶಿಫಾರಸು ಮಾಡಿದ್ದರೂ ಅಮೆರಿಕ ಸರಕಾರವು ಭಾರತವನ್ನು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ‘ನಿರ್ದಿಷ್ಟ ಕಾಳಜಿಯ ದೇಶ ’ಎಂದು ಹೆಸರಿಸಿಲ್ಲ.
ಇತ್ತೀಚಿನ ಯುಎಸ್ಸಿಐಆರ್ಎಫ್ ವರದಿಯಂತೆ 12 ರಾಜ್ಯಗಳು ತಂದಿರುವ ಮತಾಂತರ ವಿರೋಧಿ ಕಾಯ್ದೆಗಳು ಧರ್ಮ ಅಥವಾ ನಂಬಿಕೆಯ ಸ್ವಾತಂತ್ರ್ಯದ ಹಕ್ಕುಗಳಿಗೆ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನ ರಕ್ಷಣೆಗಳನ್ನು ಉಲ್ಲಂಘಿಸಿವೆ.
ಇಂತಹ ಕಾಯ್ದೆಗಳು ಅಸ್ತಿತ್ವದಲ್ಲಿರುವ ಸರಕಾರಿ ಕಿರುಕುಳ, ಗೋರಕ್ಷಕರಿಂದ ಹಿಂಸಾಚಾರ, ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಹಾಗೂ ನಾಗರಿಕ ಸಮಾಜ ಸಂಘಟನೆಗಳ ಮೇಲಿನ ದಾಳಿಗಳನ್ನು ಸಕ್ರಿಯಗೊಳಿಸಿವೆ ಮತ್ತು ಉತ್ತೇಜಿಸಿವೆ ಎಂದು ವರದಿಯು ಪ್ರತಿಪಾದಿಸಿದೆ.
ಭಾರತವನ್ನು ‘ನಿರ್ದಿಷ್ಟ ಕಾಳಜಿಯ ದೇಶ’ಎಂದು ಹೆಸರಿಸಬೇಕೆಂದು USCIRF ಶಿಫಾರಸು ಮಾಡಿತ್ತು ಎಂದು ನೆನಪಿಸಿರುವ ವರದಿಯು,ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನನ್ನು ಅನುಸರಿಸಲು ಮತ್ತು ದೇಶದಲ್ಲಿಯ ಧಾರ್ಮಿಕ ಸ್ವಾತಂತ್ರ್ಯದ ಸ್ಥಿತಿಯು ಹದಗೆಡುತ್ತಿರುವುದನ್ನು ತಡೆಯಲು ಈ ಕಾಯ್ದೆಗಳನ್ನು ರದ್ದುಗೊಳಿಸುವುದು ಅಗತ್ಯವಾಗಿದೆ ಎಂದು ಹೇಳಿದೆ.
ರಾಜ್ಯಮಟ್ಟದ ಮತಾಂತರ ವಿರೋಧಿ ಕಾಯ್ದೆಗಳ ಅನುಷ್ಠಾನವು ಕ್ರೈಸ್ತ ಮತ್ತು ಇಸ್ಲಾಮ್ನಂತಹ ‘ಮೆಚ್ಚಿಗೆಯಿಲ್ಲದ ’ಧರ್ಮಗಳಿಗೆ ಮತಾಂತರಗಳನ್ನು ತಡೆಗಟ್ಟುವುದು ಈ ಶಾಸನಗಳ ಉದ್ದೇಶವಾಗಿದೆಯೇ ಹೊರತು ಬಲವಂತದ ಮತಾಂತರಗಳ ವಿರುದ್ಧ ರಕ್ಷಣೆ ನೀಡುವುದಲ್ಲ ಎನ್ನುವುದನ್ನು ಸೂಚಿಸುತ್ತದೆ ಎಂದೂ ವರದಿಯು ಅಭಿಪ್ರಾಯಿಸಿದೆ.
ಮತಾಂತರಕ್ಕೆ ಮುನ್ನ ನೋಟಿಸನ್ನು ನೀಡಬೇಕು ಮತ್ತು ಸ್ಥಳೀಯ ಪ್ರಾಧಿಕಾರದಿಂದ ಪೂರ್ವಾನುಮತಿಯನ್ನು ಪಡೆಯಬೇಕು ಎಂಬ ನಿಬಂಧನೆಯನ್ನು ಪ್ರಸ್ತಾಪಿಸಿರುವ ವರದಿಯು,ಮತಾಂತರಕ್ಕೆ ಆಕ್ಷೇಪಣೆಗಳಿಗಾಗಿ ಜಿಲ್ಲಾಧಿಕಾರಿಗಳ ಸಾರ್ವಜನಿಕ ಆಹ್ವಾನವು ತನ್ನ ಆಯ್ಕೆಯ ಧರ್ಮ ಅಥವಾ ನಂಬಿಕೆಯನ್ನು ಅನುಸರಿಸಲು ವ್ಯಕ್ತಿಯ ಸ್ವಾತಂತ್ರಕ್ಕೆ ಬಲವಂತದ ಅಡ್ಡಿಯನ್ನುಂಟು ಮಾಡುತ್ತದೆ ಎಂದು ಹೇಳಿದೆ.
ಗುಜರಾತ್, ಹರ್ಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಉತ್ತರಾಖಂಡ ಮತ್ತು ಉತ್ತರ ಪ್ರದೇಶಗಳಲ್ಲಿಯ ಮತಾಂತರ ವಿರೋಧಿ ಕಾಯ್ದೆಗಳು ‘ಕಾನೂನನ್ನು ಉಲ್ಲಂಘಿಸಿದ ವ್ಯಕ್ತಿಗಳು ತಮ್ಮ ಅಮಾಯಕತೆಯನ್ನು ಸಾಬೀತುಗೊಳಿಸಬೇಕು’ ಎಂಬ ನಿಬಂಧನೆಯನ್ನು ಒಳಗೊಂಡಿವೆ ಮತ್ತು ಇದು ಕ್ರಿಮಿನಲ್ ಆರೋಪವನ್ನು ಹೊತ್ತಿರುವ ವ್ಯಕ್ತಿಗಳನ್ನು ಅವರು ತಪ್ಪಿತಸ್ಥರೆಂದು ಸಾಬೀತಾಗುವವರೆಗೆ ಅಮಾಯಕರೆಂದು ಪರಿಗಣಿಸಬೇಕು ಎಂದು ಸ್ಪಷ್ಟಪಡಿಸಿರುವ ಯುಡಿಎಚ್ಆರ್ ಮತ್ತು ಐಸಿಸಿಪಿಆರ್ನ್ನು ಉಲ್ಲಂಘಿಸುತ್ತದೆ ಎಂದು ವರದಿಯು ಪ್ರತಿಪಾದಿಸಿದೆ.